ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ ಎಂದು ಬರೆದ ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಅಸಮಾಧಾನ.

ಬೆಂಗಳೂರು,ಸೆಪ್ಟಂಬರ್,28,2022(www.justkannada.in):  ರಾಜ್ಯದಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿ ಹಗರಣ ಕುರಿತು ಮಾಧ್ಯಮಗಳ ನಡೆಗೆ  ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕರಣೆ ಹೊರಡಿಸಿರುವ ಅವರು, ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮಗಳು ಅಕ್ರಮವಾಗಿ ನೇಮಕಗೊಂಡ ಶಿಕ್ಷಕರ ಬಗ್ಗೆ ಬರೆಯುವಾಗ “ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ” ಎಂದು ಬರೆಯುತ್ತಿದ್ದಾರೆ.  ನಾನು ದಿನಾಂಕ 23-9-2022 ರಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಯಾವ್ಯಾವ ಆರೋಪಿತರು ಯಾವ್ಯಾವ ಕಾಲದಲ್ಲಿ ನೇಮಕಗೊಂಡಿದ್ದಾರೆ ಎಂಬ ಹೆಸರು, ಅಕ್ರಮವಾಗಿ ಆದೇಶ ಪಡೆದ ದಿನಾಂಕ ಇತ್ಯಾದಿ ವಿವರಗಳನ್ನು ದಾಖಲೆ ಸಮೇತ ವಿವರಿಸಿದರೂ ಸಹ ಕೆಲವು ಮಾಧ್ಯಮಗಳು ಮತ್ತೆ ಮತ್ತೆ ಕಾಂಗ್ರೆಸ್ ಸರ್ಕಾರದ ಕಾಲದ, ಸಿದ್ದರಾಮಯ್ಯ ಅವಧಿಯ ನೇಮಕಾತಿ ಹಗರಣ ಎಂದೆಲ್ಲ ಬರೆಯುತ್ತಿದ್ದಾರೆ.

ನನಗೆ ಲಭಿಸಿರುವ ದಾಖಲೆಗಳಂತೆ ಈ ಶಿಕ್ಷಕರುಗಳು ಯಾವ್ಯಾವ ಅವಧಿಯಲ್ಲಿ ನೇಮಕಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಮತ್ತೊಮ್ಮೆ ತಿಳಿಸುತ್ತೇನೆ.  ದಸ್ತಗಿರಿಯಾಗಿರುವ 12 ಜನ ಶಿಕ್ಷಕರಲ್ಲಿ 7 ಜನರು 2019 ರಲ್ಲಿ ಯಡಿಯೂರಪ್ಪನವರು  ಮುಖ್ಯಮಂತ್ರಿಯಾಗಿದ್ದಾಗ, ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿದ್ದಾಗ ನೇಮಕಗೊಂಡಿದ್ದಾರೆ. ಉಳಿದ 5 ಜನರಲ್ಲಿ ಇಬ್ಬರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದಾರೆ. ಉಳಿದವರಲ್ಲಿ ಒಬ್ಬನಿಗೆ 2018 ರಲ್ಲಿ ಒಬ್ಬ 2015 ರಲ್ಲಿ, ಮತ್ತೊಬ್ಬ 2017 ರಲ್ಲಿ, ಇನ್ನೊಬ್ಬ 2018 ರಲ್ಲಿ ನೇಮಕಾತಿ ಆದೇಶ ಪಡೆದಿದ್ದಾನೆಂದು ದಾಖಲೆಗಳು ಹೇಳುತ್ತವೆ ಎಂದು ವಿವರಿಸಿದರು.

ಹಾಗೆಯೇ 2012-13 ರಲ್ಲಿ ಕರೆದಿದ್ದ ಶಿಕ್ಷಕರ ಹುದ್ದೆಗಳ ಬ್ಯಾಚಿನಲ್ಲೂ ಒಬ್ಬಾತ ಸೇರಿಕೊಂಡಿದ್ದಾನೆಂಬ ಮಾಹಿತಿ ಇದೆ. ಅದರ ನಂತರ 2015 ರಲ್ಲಿ ಮತ್ತೊಮ್ಮೆ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ನಡೆದಿತ್ತು. ಈ ಅವಧಿಗಳಲ್ಲಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಮತ್ತು ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರುಗಳಾಗಿ ಕೆಲಸ ಮಾಡಿದ್ದರು.  ಈಗಾಗಲೆ ಶಿಕ್ಷಣ ಸಚಿವರು ಮಾಧ್ಯಮಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆಂದು ವಿವರಿಸಿದ್ದಾರೆ. ಒಮ್ಮೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಿದ ನಂತರ ನೇಮಕಾತಿ ಪ್ರಕ್ರಿಯೆಯು ನೇಮಕಾತಿ ಪ್ರಾಧಿಕಾರದಿಂದ ನಡೆಯುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ನೇಮಕಾತಿ ಪಟ್ಟಿಯು ಡಿಡಿಪಿಐ ಮತ್ತು ಜಂಟಿ ನಿರ್ದೇಶಕರುಗಳಿಂದ ಅನುಮೋದನೆಗೊಳ್ಳುತ್ತದೆ. ನೇರ ನೇಮಕಾತಿಗಳಾದ್ದರಿಂದ ಬೇರಿನ್ನಾರದೆ ಹಸ್ತಕ್ಷೇಪಗಳು ಇರುವುದಿಲ್ಲವೆಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಏನೇ ಆದರೂ, ಯಾರದೇ ಅವಧಿಯಲ್ಲಿ ನಡೆದಿದ್ದರೂ ಸಹ ಈ ರೀತಿಯ  ದ್ರೋಹ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಜರುಗಿಸಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಉಲ್ಭಣಗೊಳ್ಳುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ಜೊತೆಗೆ ಮಾಧ್ಯಮಗಳಿಗೆ ಸರ್ಕಾರವೇ / ಸಚಿವರುಗಳ ಕಛೇರಿಗಳೇ ತಪ್ಪು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ಅಥವಾ ತನಿಖೆ ನಡೆಸುತ್ತಿರುವ ಸಂಸ್ಥೆಯಾದರೂ ಈ ಕುರಿತು ಕಾಲ ಕಾಲಕ್ಕೆ ಮಾಧ್ಯಮಗಳಿಗೆ ವಿವರಿಸಬೇಕು. ಒಟ್ಟಾರೆಯಾಗಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಹಾಗೂ ನ್ಯಾಯನಿಷ್ಠರಾಗಿರಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

ಇದೆಲ್ಲದರ ಜೊತೆಯಲ್ಲಿ ನಿರುದ್ಯೋಗವು ರಾಜ್ಯದಲ್ಲಿ ಅಸಹನೀಯ ಮಟ್ಟಕ್ಕೆ ಮುಟ್ಟಿದೆ. ರಾಜ್ಯದಲ್ಲಿ ಪದವೀಧರ ಹೆಣ್ಣುಮಕ್ಕಳ ನಿರುದ್ಯೋಗದ ಪ್ರಮಾಣ ಶೇ.39-40 ರಷ್ಟಿದೆ. ಪದವೀಧರ ಯುವಕರ ನಿರುದ್ಯೋಗವು ಶೇ.35 ರವರೆಗೆ ಇದೆ. ಇರುವ ಒಂದೊಂದು ಹುದ್ದೆಗೆ 2-3 ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

Key words: Former CM- Siddaramaiah- displeasure- against -media