ಸಾಧನೆಗಳಿಗಿಂತ ಭರವಸೆಗಳೇ ಹೆಚ್ಚು- ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿದ‍್ಧರಾಮಯ್ಯ  ವಾಗ್ದಾಳಿ.

ಬೆಂಗಳೂರು,ಜನವರಿ,29,2022(www.justkannada.in):  ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 6 ತಿಂಗಳು ಪೂರೈಸಿದ ಹಿನ್ನೆಲೆ ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ ಸರ್ಕಾರದ ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡಿದ್ದು ಈ ಬಗ್ಗೆ ಮಾಜಿ ಸಿಎಂ ಸಿದ‍್ಧರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪುಕ್ಸಟ್ಟೆ ಪ್ರಚಾರಕ್ಕಾಗಿ ರಾಜ್ಯ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಯೋಜನೆ ಜಾರಿಗೊಳಿಸುವುದಕ್ಕಿಂತ ಹೆಚ್ಚು ಜಾಹೀರಾತಿಗೆ ವ್ಯಯಿಸುತ್ತಿದೆ. ಕೇವಲ ಜಾಹೀರಾತು ನೀಡಿದರೇ ಯಾವುದೇ ಪ್ರಯೋಜನವಿಲ್ಲ. ಬಿಜೆಪಿ ಅವಧಿಯಲ್ಲಿ ಬಡವರು ದಲಿತರಿಗೆ ಅನ್ಯಾಯವಾಗುತ್ತಿದೆ.  ಭ್ರಷ್ಠಚಾರ ಮಾಡುವುದೇ ಇವರ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಸಂಘದಿಂದ  ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿತ್ತು. ಆದರೆ ಪ್ರಧಾನಿ ಮೋದಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಭ್ರಷ್ಟಾಚಾರ ವೈಪಲ್ಯಗಳೇ ಈ ಸರ್ಕಾರದ ಸಾಧನೆಯಾಗಿದೆ. ದೇಶದ ಆದಾಯ ಕುಂಠಿತವಾದರೂ ಇವರ ಆದಾಯದಲ್ಲಿ ಏರಿಕೆಯಾಗಿದೆ.  ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಖಜಾನೆ ತುಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಹೆಸರು ಬದಲಿಸುವುದೇ ಬಿಜೆಪಿ ಸಾಧನೆಯಾಗಿದೆ. ರಾಜ್ಯದಲ್ಲಿ ಅತಿವೃಷ್ಟಿ, ನೆರೆಯಿಂದ ಮನೆ, ಬೆಳೆ ಹಾನಿಯಾಗಿತ್ತು. ಸಂತ್ರಸ್ತರಿಗೆ ಪರಿಹಾರದ ಬದಲು ಜಾಹೀರಾತಿಗೆ ಹೆಚ್ಚು ಖರ್ಚುಮಾಡಿದ್ದಾರೆ. ಎನ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ಕೊಡುತ್ತೇವೆ, ಮಾನವೀಯತೆ ದೃಷ್ಟಿಯಿಂದ ಪರಿಹಾರ ಕೊಡ್ತೀವಿ ಅಂದ್ರು. ಈವರೆಗೆ ಯಾವುದೇ ಪರಿಹಾರ ನೀಡದೇ ಜಾಹೀರಾತು ಕೊಟ್ಟಿದ್ದಾರೆ. ನಮ್ಮದು ಅಂತ:ಕರಣವಿರುವ ಸರ್ಕಾರ ಎಂದು ಸಿಎಂ ಹೇಳುತ್ತಿದ್ದಾರೆ ಆದರೆ ಸರ್ಕಾರ ಅನುಕಂಪ ತೋರುವ ಅಗತ್ಯವಿಲ್ಲ. ಬಡವರು, ಸಂತ್ರಸ್ತರಿಗೆ ಪರಿಹಾರ ನೀಡುವುದು, ಜನರ ಸಮಸ್ಯೆಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

Key words: former CM-Siddaramaiah-bjp- Government