ಬಿ.ಎಲ್.ಲಕ್ಕೇಗೌಡ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಂಬನಿ

ಬೆಂಗಳೂರು, ನವೆಂಬರ್ 30, 2021 (www.justkannada.in): ನಿವೃತ್ತ ಅಧಿಕಾರಿ, ವಕೀಲರು ಹಾಗೂ ಶಿಕ್ಷಣ, ಸಹಕಾರ ಕ್ಷೇತ್ರಗಳಲ್ಲಿ ಎಣೆ ಇಲ್ಲದ ಸೇವೆ ಮಾಡಿರುವ ಬಿ.ಎಲ್.ಲಕ್ಕೇಗೌಡರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು; ದಕ್ಷ ಅಧಿಕಾರಿ, ವಕೀಲರು, ಶಿಕ್ಷಣ ಸಂಸ್ಥೆಗಳ ಸ್ಥಾಪಕರು ಹಾಗೂ ಸಹಕಾರಿ ಧುರೀಣರಾಗಿ ಜನಸೇವೆಯನ್ನೇ ದೈವವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಸಮಾಜಕ್ಕೇ ಮೀಸಲಿಟ್ಟ ಬಿ.ಎಲ್.ಲಕ್ಕೇಗೌಡರ ನಿಧನ ನನಗೆ ತೀವ್ರ ದುಃಖವುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಅನೇಕ ಕ್ಷೇತ್ರಗಳಲ್ಲಿ ಸಮಾಜಕ್ಕಾಗಿ ಅವರು ಕೊಟ್ಟ ಕೊಡುಗೆ ಅನನ್ಯ. ಆ ಹಿರಿಯ ಚೇತನಕ್ಕೆ ನನ್ನ ಶ್ರದ್ಧಾಪೂರ್ವಕ ಸಂತಾಪಗಳು. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.