ಅಧಿವೇಶನಕ್ಕೆ ಅಡ್ಡಿ, ಮೇಕೆದಾಟು 2ನೇ ಹಂತದ ಪಾದಯಾತ್ರೆಗೆ ಮುಂದಾದ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,23,2022(www.justkannada.in): ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ರಾಜ್ಯ ವಿಧಾನಮಂಡಲ ಉಭಯ ಸದನಗಳಲ್ಲಿ ಆಹೋರಾತ್ರಿ ಧರಣಿ ನಡೆಸುವ ಮೂಲಕ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಧಿವೇಶನ ರಾಜ್ಯಪಾಲರ‌ ಭಾಷಣಕ್ಕೆ‌ ಸೀಮಿತವಾಯ್ತು. ಜೆಡಿಎಸ್‌ ನಿಂದ ಸದನ ಕಲಾಪಕ್ಕೆ ಅಡ್ಡಿಯಾದ ಉದಾಹರಣೆಗಳಿಲ್ಲ.  ಈ ಹಿಂದೆ‌ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಸಹಕರಿಸಿದ್ದೆವು.

ಸಿದ್ದರಾಮಯ್ಯ ಸಿಎಂ  ಆಗಿದ್ದಾಗ ಕಲ್ಲಪ್ಪ ಹಂಡಿಭಾಗ್, ಡಿವೈಎಸ್ ಪಿ ಗಣಪತಿ ಸಾವು ಸೇರಿದಂತೆ ಹಲವಾರು ಪ್ರಕರಣ ಬಂದವು. ಆದರೂ ನಾವು ಕಲಾಪ ನಡೆಯಲು ಸಹಕರಿಸಿದೆವು‌. ಇತಿಹಾಸ ಇರುವ ಕಾಂಗ್ರೆಸ್ ಅಂತಾರೆ. ಹೋರಾಟ ಮಾಡಿದ ಹಿಂದಿನ ಕಾಂಗ್ರೆಸ್ ನಾಯಕರು ಬೇರೆ. ಈಗಿರುವ ಕಾಂಗ್ರೆಸ್‌‌ ನಾಯಕರೇ ಬೇರೆ. ವಿಶೇಷವಾದ ಬಹುಮಾನ ಇದ್ರೆ ಕೊಟ್ಟುಬಿಡಿ ಎಂದು ಹೆಚ್,ಡಿಕೆ ಕಿಡಿಕಾರಿದರು.

ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ…

ಹಾಗೆಯೇ ಮೇಕೆದಾಟು 2ನೇ ಹಂತದಪಾದಯಾತ್ರೆಗೆ ಮುಂದಾಗಿರುವ ಬಗ್ಗೆಯೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ ಕುಮಾರಸ್ವಾಮಿ, ಮೇಕೆದಾಟು ಪಾದಯಾತ್ರೆ ಎರಡನೇ ಹಂತ ಶುರು ಮಾಡ್ತಿದ್ದಾರೆ. 18 ರಂದು ಗೋದಾವರಿ ನೀರಾವರಿ ಹಂಚಿಕೆ ಕುರಿತಂತೆ ಕೇಂದ್ರ ಸಭೆ ನಡೆಸಿದೆ. ಆದರೆ ಕರ್ನಾಟಕ‌ ಪ್ರತಿನಿಧಿಸಿದ್ದ ಅಧಿಕಾರಿಯನ್ನ ಲೆಕ್ಕಕ್ಕೆ ಪರಿಗಣಿಸಿಲ್ಲ. ಹೀಗಾಗಿ ಕರ್ನಾಟಕಕ್ಕೆ ಶೂನ್ಯ ಹಂಚಿಕೆಯಾಗಿದೆ. ಸಿದ್ದರಾಮಯ್ಯ ಇದನ್ನ ಚರ್ಚೆ ಮಾಡುವ ಬದಲು ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ಬೆಂಕಿ ಹಚ್ಚಿಸಿದ್ದೀರಾ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಗೆಯೇ ಡಿಕೆ ಬ್ರದರ್ಸ್‌ಗೆ ಟಾಂಗ್ ಕೊಟ್ಟ ಹೆಚ್.ಡಿ ಕುಮಾರಸ್ವಾಮಿ, ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ…? ಎಂದು ಪ್ರಶ್ನಿಸಿದ ಹೆಚ್.ಡಿಕೆ,  ನೀವೇ ಮಣ್ಣಿನ ಮಕ್ಕಳೆಂದು ಬೋರ್ಡ್ ಹಾಕೊಂಡು ಹೋಗಿ ನಾವೆಂದು ಮಣ್ಣಿನ‌ ಮಕ್ಕಳು ಅಂತ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಹೋಗ್ತಿದ್ದೀರಾ, ಬೋರ್ಡ್ ಹಾಕಿಕೊಳ್ಳಿ ಎಂದು ಹರಿಹಾಯ್ದರು.

ದಾಖಲೇ ಇಟ್ಟು ಸಚಿವರ ರಾಜೀನಾಮೆ ಕೇಳಬೇಕಲ್ವೆ..

ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ದಾಖಲೇ ಇಟ್ಟು ಸಚಿವರ ರಾಜೀನಾಮೆ ಕೇಳಬೇಕಲ್ವೆ. ಹಲವಾರು ಪಕ್ಷ ಕಟ್ಟಿ ಬೆವರು ಸುರಿಸಿ ಬಂದ ವಿಪಕ್ಷ ನಾಯಕರ ವರ್ತನೆ ನೋಡುತ್ತಿದ್ದೇನೆ. ವಿಧಾನಮಂಡಲ ಇತಿಹಾಸದಲ್ಲೇ ಇದು ಕಪ್ಪು ಚುಕ್ಕೆ ಅಂತ ಕೆಲವರು ಹೇಳ್ತಿದ್ದಾರೆ. ಸಮವಸ್ತ್ರ ವಿವಾದ ಚರ್ಚೆ ಮಾಡುವ ಅವಕಾಶವನ್ನ‌ ನಿರ್ನಾಮ‌ ಮಾಡಿದ್ದರು. ಜೆಡಿಎಸ್‌ ಚರ್ಚೆಯಲ್ಲಿ ಪಾಲ್ಗೊಳ್ಳಬಾರದೆಂದು ಬಿಜೆಪಿ ಕಾಂಗ್ರೆಸ್ ಹುನ್ನಾರ ನಡೆಸಿರಬಹುದು. ನಾನು ಅತ್ತಗೆ ಆಡ್ತೀನಿ, ನೀವು ತೂಗಿದಂಗೆ ಮಾಡಿ ಅಂತ ಹುನ್ನಾರ ನಡೆಸಿ ಈ ರೀತಿ ಮಾಡ್ತಿದ್ದಾರೆ. ಸದನದಲ್ಲಿ ಹೋರಾಟ ಮಾಡಲು ಸಾಕಷ್ಟು ಅವಕಾಶ ಇತ್ತು.

ಯಾವ ಪುರುಷಾರ್ಥಕ್ಕಾಗಿ ನೀವು ರಾಜ್ಯಪಾಲರನ್ನ ಭೇಟಿ ಮಾಡಿದ್ದೀರಿ. ನಮ್ಮನ್ನಾದರೂ ಕೇಳಿದ್ರೆ ಹೇಳ್ತಿದ್ವಿ. ನಾನು ಸಾಕಷ್ಟು ದಾಖಲೆ ಸಮೇತ ಚರ್ಚೆಗೆ ಹೋಗಿದ್ದೆ. ಚರ್ಚೆಗೆ ಅವಕಾಶ ಸಿಗಬಾರದೆಂದು ಸದನವನ್ನ ಗೊಂದಲ ಉಂಟು ಮಾಡಿದ್ದಾರೆ ಎಂದು ಹೆಚ್.ಡಿಕೆ ಗುಡುಗಿದರು.

Key words: former CM –HD Kumaraswamy-against-Congress