ರಾಜ್ಯದ ನೆರೆ ಪರಿಹಾರ ಪ್ರಸ್ತಾವನೆ ತಿರಸ್ಕಾರ ವಿಚಾರ: ಕೇಂದ್ರ ಸರ್ಕಾರದ ಪರ ಸಂಸದೆ ಸುಮಲತಾ ಅಂಬರೀಶ್ ಬ್ಯಾಟಿಂಗ್…

ಮೈಸೂರು,ಅ,4,2019(www.justkannada.in): ರಾಜ್ಯದ ನೆರೆ ಪರಿಹಾರದ ವರದಿ ತಿರಸ್ಕರಿಸಿದ ವಿಚಾರ ಸಂಬಂಧ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇದೀಗ ಕೇಂದ್ರ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.

ತಾಂತ್ರಿಕ ಕಾರಣಗಳಿಂದ ಕೇಂದ್ರ ಸರ್ಕಾರ ವರದಿಯನ್ನು ತಿರಸ್ಕಾರ ಮಾಡಿರಬಹುದು. ಆದರೆ ಪರಿಹಾರವನ್ನೇ ಕೊಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಅತಿ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ಸಂಸದರ ವಿರುದ್ಧ ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುವುದಾದರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಂಸದರು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಿಲ್ಲ ಅನ್ನುವುದು ಸರಿಯಲ್ಲ. ಪ್ರಶ್ನೆ ಮಾಡುವುದೆಂದರೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಬೇಕು ಅಂತೆನೂ ಇಲ್ಲ. ನಮ್ಮ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನೆರೆ ಪರಿಹಾರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಪತ್ರ ಬರೆಯುವ ಮೂಲಕ ಮನವಿ ಮಾಡುವುದು ವಾಡಿಕೆ.ನಾನು ನೇರವಾಗಿ ಫೋನ್ ಮಾಡಿ ನೆರೆ ಪರಿಹಾರದ ಬಗ್ಗೆ ಮಾತಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

Key words:  flood relief-MP- Sumalatha Ambarish -batting – central government-mysore