ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ 50 ರೂ. ಸರ್ಕಾರದ ಆದೇಶಕ್ಕೆ ರೈತರ ಆಕ್ರೋಶ: ಸರ್ಕಾರದ ವಿರುದ್ಧ ಪ್ರತಿಭಟನೆ.

ಮೈಸೂರು,ಡಿಸೆಂಬರ್,8,2022(www.justkannada.in): ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ಕೇವಲ ರೂ.50  ನೀಡುವುದಾಗಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕಬ್ಬಿಗೆ  ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ 17ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ತಲೆ ಮೇಲೆ ಕಬ್ಬಿನ ಪಿಂಡಿ  ಹೊರುವ ಮೂಲಕ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ  ಎಫ್ ಆರ್ ಪಿ ದರಕ್ಕೆ ಹೆಚ್ಚುವರಿಯಾಗಿ ಟನ್ ಗೆ 50 ರೂ ನೀಡಲು ಹೊರಡಿಸಿರುವ ಆದೇಶ ಧಿಕ್ಕರಿಸುತ್ತೇವೆ  ಎಂದು  ಸರ್ಕಾರದ ಆದೇಶದ ಪ್ರತಿಯನ್ನ ಸುಟ್ಟು ಬೂದಿ ಮಾಡಿ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿ ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲದಿದ್ದರೆ ಕಬ್ಬು ಬೆಳೆಗಾರರ ವಹಿವಾಟಿನಿಂದ ಸರ್ಕಾರಕ್ಕೆ ಬರುವ ತೆರಿಗೆ 5,000 ಕೋಟಿ ಹಣದಿಂದ ಹೆಚ್ಚುವರಿ ಹಣ ನೀಡಲಿ.  ಹಿಂದೆ ಬೆಳಗಾವಿ ಅಧಿವೇಶನದ ವೇಳೆ ರೈತನೊಬ್ಬ ಪ್ರಾಣ ಕಳೆದುಕೊಂಡಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಟನ್ ಗೆ 160 ಹೆಚ್ಚುವರಿ ಹಣ ಘೋಷಣೆ ಮಾಡಿ 1600 ಕೋಟಿ ರೈತರಿಗೆ ನೀಡಿದ್ದಾರೆ ಅದರಂತೆ ಪ್ರಸಕ್ತ ಸರ್ಕಾರವು ನೀಡಲಿ ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು  ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 200 ರಿಂದ 300 ರೂ.ವನ್ನು  ರೈತರ  ಹಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡಲಿ. ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ ಸಕ್ಕರೆ ಕಾರ್ಖಾನೆಗಳೆ ಪರೀಕ್ಷೆ ಮಾಡಿ ವರದಿ ನೀಡುವ ಕಾರಣ ರೈತರಿಗೆ ವಂಚನೆಯಾಗುತ್ತಿದೆ ಇದನ್ನು ತಪ್ಪಿಸಲಿ ಎಂದು ಒತ್ತಾಯಿಸಿದರು.

ಕಬ್ಬಿನಿಂದ ಬರುವ ಎಥನಾಲ್ ಉತ್ಪನ್ನದ ಲಾಭಾಂಶ ಮಾತ್ರ ಏಕೆ, ಮೊಲಾಸಿಸ್ ಬಗ್ಯಾಸ್ ಮಡ್ಡಿ ಸಕ್ಕರೆ ಉತ್ಪನ್ನಗಳ ಲಾಭವನ್ನು ಪರಿಗಣಿಸಿ ಉತ್ಪಾದನೆಗೆ ತಗಲುವ ಖರ್ಚನ್ನ ಕಳೆದು ರೈತರಿಗೆ ಹೆಚ್ಚುವರಿ ಹಣ ನಿಗದಿ ಮಾಡಲಿ. ಎಥನಾಲ್ ನಿಂದ ಹೆಚ್ಚುವರಿ 50 ಕೊಡುತ್ತೇವೆ ಎಂದರೆ ರೈತರಿಗೆ ಕೊಡುವುದು ಭಿಕ್ಷೆಯಲ್ಲ, ಕಬ್ಬು ಬೆಳೆದ ರೈತ ಸಾಲದ ಬಲೆಯಲ್ಲಿ ಬೀಳುತ್ತಿದ್ದಾನೆ. ಕಬ್ಬು ನುರಿಸುವ ಕಾರ್ಖಾನೆ ಮಾಲೀಕ ಪ್ರತಿವರ್ಷ ಹೊಸ ಹೊಸ ಕಾರ್ಖಾನೆ ಮಾಡುತ್ತಿದ್ದಾನೆ. ಯಥನಾಲ್ ಉತ್ಪಾದನೆ ಮಾಡುವ ಕಾರ್ಖಾನೆಗಳ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ 50 ರೂ ಎನ್ನುವ ನೀತಿ ರೈತರನ್ನು ಹೊಡೆದಾಳುವ ಕ್ರಮವಾಗಿದೆ

ಇದೇ ತಿಂಗಳ  11ರಂದು ತಮಿಳುನಾಡು, ಕೇರಳ, ಆಂಧ್ರ, ರಾಜ್ಯಗಳ ರೈತ ಮುಖಂಡರು ಬೆಂಗಳೂರಿನ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಲಿದ್ದಾರೆ ಅನಿವಾರ್ಯವಾದರೆ ಸಾವಿರಾರು ಸಂಖ್ಯೆ ರೈತರು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದಾರೆ. ಕಬ್ಬು ಬೆಳೆಗಾರರ ರೈತರಿಗೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಿ, ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಒತ್ತಾಯವಾಗಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಇಂದಿನ ಪ್ರತಿಭಟನೆಯಲ್ಲಿ ಉಳುವಪ್ಪ ಬಳಗೇರ, ರಮೇಶ್ ಹೂಗಾರ್, ಜಗದೀಶ್ ಪಾಟೀಲ್, ಸುರೇಶ್ ಮಾ ಪಾಟೀಲ್, ಹತ್ತಳ್ಳಿ ದೇವರಾಜ್, ಬರಡನ್ ಪುರ ನಾಗರಾಜ್, ಶರಣು ಬಿಲ್ಲದ್, ಮುಂತಾದವರಿದ್ದರು.

Key words: Farmers – outraged – government- order – additional -Rs.50 per –ton-Protest