ಸಾಮೂಹಿಕ, ಸರಳ ವಿವಾಹದಿಂದ ಕುಟುಂಬದ ಅಭಿವೃದ್ಧಿ; ಸಚಿವ  ಎಸ್.ಟಿ ಸೋಮಶೇಖರ್

kannada t-shirts

 

ಮೈಸೂರು,ಫೆಬ್ರವರಿ,9,2021(www.justkannada.in):  ಕುಟುಂಬದ ಅಭಿವೃದ್ಧಿಗೆ ಸಾಮೂಹಿಕ ವಿವಾಹದಂತಹ ಹೆಜ್ಜೆ ಅತಿ ಅವಶ್ಯ. ಇಂದು ಬಡವರಾದಿಯಾಗಿ ಹೆಚ್ಚಿನವರು ಶಿಕ್ಷಣಕ್ಕಿಂತ ಹೆಚ್ಚಾಗಿ ವಿವಾಹಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಸಾಲದ ಹೊರೆಯಲ್ಲಿ ಸಿಲುಕುತ್ತಿದ್ದಾರೆ. ಆದರೆ, ಶ್ರೀಕ್ಷೇತ್ರ ಸುತ್ತೂರು ಮಠದ ಈ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸುತ್ತೂರಿನಲ್ಲಿ ಶ್ರೀಮಠದ ವತಿಯಿಂದ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ -95 ಕಾರ್ಯಕ್ರಮದಲ್ಲಿ “ವಚನಕ್ಕೊಂದು ಕಥೆ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇಂದು ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ. ಸಾಲ ಮಾಡಿ ಮದುವೆ ಮಾಡಿ ಹತ್ತಾರು ವರ್ಷಗಳಾದರೂ ಸಹ ಸಾಲಮುಕ್ತರಾಗದೆ ಪರಿತಪಿಸುತ್ತಿರುತ್ತಾರೆ. ಶ್ರೀಮಠ ಆಯೋಜಿಸುವ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆ ಸಾಲ ಮಾಡುವ ಸಂಭವವೇ ಇರುವುದಿಲ್ಲ ಎಂದು  ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಪ್ರತಿ ತಿಂಗಳೂ ಸಾಮೂಹಿಕ ವಿವಾಹ; ಶ್ರೀಮಠದ ಕಾರ್ಯ ಶ್ಲಾಘನೀಯ

ತಮಗೆಲ್ಲಾ ತಿಳಿದಂತೆ ‘ಹತ್ತೂರಿಗೆ ಮಿಗಿಲು ಸುತ್ತೂರು ಜಾತ್ರೆ’ ಎಂಬ ಖ್ಯಾತಿ ಹೊಂದಿರುವ ಸುತ್ತೂರು ಜಾತ್ರೆಯು ಕೊರೋನಾ ಸೋಂಕಿನ ಕಾರಣಕ್ಕೆ ಈ ವರ್ಷ ಸರಳವಾಗಿ ಜರುಗುತ್ತಿದೆ. ಸುತ್ತೂರು ಮಠದ ವತಿಯಿಂದ ಅನೇಕ ಸಮಾಜೋದ್ಧಾರಕ ಕಾರ್ಯಗಳು ನಡೆಯುತ್ತಿದ್ದು, ಅದರಲ್ಲಿ ಸಾಮೂಹಿಕ ವಿವಾಹವು ಒಂದು. ಜಾತ್ರಾ ಸಂದರ್ಭದಲ್ಲಿ ಸುಮಾರು 200 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿದ್ದು, ಅದನ್ನು ರದ್ದುಗೊಳಿಸಿ ಇಡೀ ವರ್ಷ ಪ್ರತಿ ತಿಂಗಳು ಉಚಿತ ಮಾಂಗಲ್ಯ ಹಾಗೂ ವಸ್ತ್ರಗಳನ್ನು ವಿತರಿಸಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ನನಗೆ ಹರ್ಷವಾಗುತ್ತಿದೆ. ಈ ಕ್ಷೇತ್ರದಲ್ಲಿ ಮದುವೆ ಆಗುತ್ತಿರುವ ಜೋಡಿಗಳಿಗೆ ಪೂಜ್ಯರುಗಳು ಆಶೀರ್ವಾದ ದೊರೆಯುತ್ತಿರುವುದರಿಂದ ಅವರಿಗೆ ಸಾರ್ಥಕ ಮನೋಭಾವ ಮೂಡುತ್ತದೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.family-development-mass-simple-marriage-suttur-minister-st-somashekhar

 ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಸರಳ ಜೀವನ ಎಲ್ಲರಿಗೂ ಮಾದರಿ…

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ತಮ್ಮ ಪ್ರವಚನಗಳ ಮೂಲಕ ನಾಡಿನೆಲ್ಲೆಡೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಸಹಜ ಹಾಗೂ ಸರಳ ಜೀವನಕ್ಕೆ ಉಪಯೋಗವಾಗುವಂತಹ ಪ್ರವಚನಗಳು ಜನ ಸಾಮಾನ್ಯರಿಗೂ ಅರ್ಥವಾಗುತ್ತವೆ. ಹಾಗೆಯೆ ಅವರು ಬದುಕಿನಲ್ಲಿ ಅಳವಡಿಸಿಕೊಳ್ಳ ಬಹುದಾಗಿರುತ್ತದೆ. ಇಂಥ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ ಪೂಜ್ಯರು ಅನೇಕರಿಗೆ ಮಾದರಿಯಾಗಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

“ವಚನಕ್ಕೊಂದು ಕಥೆ” ಮೌಲಿಕ ಕೃತಿ

ಇಂದು ಶರಣಿ ಎಂ.ಎ.ನೀಲಾಂಬಿಕಾರವರು ರಚಿಸಿರುವ ವಚನಕ್ಕೊಂದು ಕಥೆ ಎಂಬ ಪುಸ್ತಕವನ್ನು ನಾನು ಬಿಡುಗಡೆ ಮಾಡಿರುತ್ತೇನೆ. ಇಂತಹ ಮೌಲಿಕ ಕೃತಿಯನ್ನು ರಚಿಸಿದ್ದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ರಾಜೇಂದ್ರ ಶಿಶು ಎಂಬ ಕಾವ್ಯನಾಮದಲ್ಲಿ ಶರಣೆ ನೀಲಾಂಬಿಕಾ  ರವರು ಹಲವಾರು ಕೃತಿಗಳನ್ನು ರಚಿಸಿರುತ್ತಾರೆ. ವಚನ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುತ್ತಾರೆ. ಅವರ ತಂದೆ ಸಿ.ಅಂಕಪ್ಪನವರು ಹತ್ತಿರದ ಹೊಸಕೋಟೆ ಗ್ರಾಮದವರು. ಅವರು ರೈಲ್ವೆ ಇಲಾಖೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದರೂ, ಸಾಹಿತ್ಯ ರಚನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಅನೇಕ ಪುಸ್ತಕಗಳನ್ನು ರಚಿಸಿದ್ದರು, ನಾಟಕಗಳ ರಚನೆ ಹಾಗೂ ಅಭಿನಯದ ಮೂಲಕ ಕಲಾ ಸೇವೆಯನ್ನು ಸಲ್ಲಿಸಿದ್ದರು. ಕುಟುಂಬದ ಪರಂಪರೆಯನ್ನು ಮುಂದುವರಿಸಿರುವ ಶರಣೆ ನೀಲಾಂಬಿಕಾರವರು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ. ಇವರು ಇನ್ನೂ ಹಲವು ಕೃತಿಗಳನ್ನು ರಚಿಸಲಿ ಎಂದು ಹಾರೈಸುತ್ತೇನೆ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರೆ, ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ಅಧ್ಯಕ್ಷತೆ ವಹಿಸಿದ್ದರು. ಸಮ್ಮುಖ ವಹಿಸಿರುವ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ನಿರಂಜನ ಪ್ರಣವ ಸ್ವರೂಪಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು, ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Key words: Family -development – mass- simple marriage-suttur- Minister ST Somashekhar.

website developers in mysore