ಐಎಎಸ್ ಅಧಿಕಾರಿ, ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು.

ಬೆಂಗಳೂರು/ಮಡಿಕೇರಿ,ಏಪ್ರಿಲ್,10,2023(www.justkannad.in):  ಐಎಎಸ್ ಅಧಿಕಾರಿ, ಕುಟುಂಬದ ವಿರುದ್ದ ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ವರ್ಷದ ಹಿಂದೆ ಮದುವೆಯಾಗಿದ್ದ ಐಎಎಸ್ ಅಧಿಕಾರಿ ಅವರ ಪತ್ನಿ ಡಾ.ಎಸ್.ವಂದನಾ ಅವರು ನೀಡಿದ ದೂರಿನ ಮೇರೆಗೆ ಮೈಸೂರಿನ ನಿವಾಸಿಯೂ ಆಗಿರುವ ಐಎಎಸ್ ಅಧಿಕಾರಿ, ತಂದೆ ನಿವೃತ್ತ ಅಧಿಕಾರಿ ಶಂಕರ್, ತಾಯಿ ಚಂದ್ರಿಕಾ ಹಾಗೂ ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ಸಹೋದರ ವಿಕಾಸ್ ಶಂಕರ್  ವಿರುದ್ದ ಪುಲಕೇಶಿ ಉಪವಿಭಾಗ ವ್ಯಾಪ್ತಿಯ ಪೂರ್ವ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೈಸೂರು ನಗರ ಪೊಲೀಸ್ ಉಪ ಆಯುಕ್ತರಾಗಿದ್ದ ನಿವೃತ್ತ ಡಿಐಜಿ ಟಿ.ಆರ್.ಸುರೇಶ್ ಅವರ ಪುತ್ರಿ ಡಾ.ವಂದನಾ ಅವರು ಕಳೆದ ವರ್ಷದ ಜೂನ್‌ ನಲ್ಲಿ ವಿವಾಹವಾಗಿದ್ದರು. ಇದೀಗ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ಹಿಂದೆಯೇ ನಿಶ್ಚಿತಾರ್ಥ ಹಾಗೂ ವಿವಾಹ ಸಂದರ್ಭದಲ್ಲಿ ಮದುವೆ ಖರ್ಚು, ಆಭರಣ, ಉಡುಗೊರೆ ರೂಪದಲ್ಲಿ ಪತಿ ಕುಟುಂಬದವರಿಗೆ ನೀಡಿದ್ದರೂ ಬೆಂಗಳೂರಿನಲ್ಲಿ ಮನೆ ಕೊಡಿಸಬೇಕು ಎನ್ನುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ನಾನು ಐಎಎಸ್ ಅಧಿಕಾರಿಯಾಗಿದ್ದು, ಕನಿಷ್ಠ ೧೦೦ ಕೋಟಿ ರೂ. ಆಸ್ತಿಯನ್ನಾದರೂ ಪಡೆದು ಮದುವೆಯಾಗಬಹುದಿತ್ತು ಎಂದು ಹಿಯಾಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ವರದಕ್ಷಿಣೆ ನೀಡಲು ಒಪ್ಪದೇ ಇದ್ದುದಕ್ಕೆ ಕಿರುಕುಳ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರಿಗೆ ಹೋದಾಗಲೂ ಹಿಂಸೆ ನೀಡಿದ್ದು, ಮಡಿಕೇರಿಯಲ್ಲಿರುವ ಅಧಿಕೃತ ನಿವಾಸದಲ್ಲಿಯೇ ತೊಂದರೆ ನೀಡಿದ್ದಾರೆ. ಅವರದ್ದೇ ಬ್ಯಾಚ್‌ ನ ಐಎಎಸ್ ಅಧಿಕಾರಿ ಕಾಜಲ್  ಜಾವ್ರಾ ಜತೆಗೆ ನಿರಂತರ ಸಂಪರ್ಕವಿರುವುದು ಫೋನ್ ಕರೆಗಳಿಂದಲೇ ಗೊತ್ತಾಗಿದೆ. ಇದರಿಂದ ಬೇಸತ್ತು ವಿಷ ಸೇವಿಸಿದಾಗ ತಡೆಯದೇ ಸಾಯುವಂತೆ ಪ್ರೇರೇಪಿಸಿದ್ಧಾರೆ. ಆನಂತರ ಇದು ವಿಷಪೂರಿತ ಆಹಾರ ಸೇವನೆಯಿಂದ ಆದ ಪ್ರಕರಣ ಎಂದು ಬದಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ 488(ಎ), 323, 504, 506 ಅಡಿ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ಧಾರೆ.

Key words: Dowry harassment -complaint -filed –against- IAS officer- family.