ಶಾಸಕ ಎಸ್.ಎ ರಾಮದಾಸ್ ಕಚೇರಿಯಲ್ಲಿ ಹೆಚ್ ಐವಿ ಪೀಡಿತ ಮಕ್ಕಳಿಗೆ ವಸ್ತ್ರ ವಿತರಣೆ.

ಮೈಸೂರು,ಡಿಸೆಂಬರ್,1,2021(www.justkannada.in): ಇಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ಅವರ ವಿದ್ಯಾರಣ್ಯಪುರಂ ಕಚೇರಿಯಲ್ಲಿ ಏಡ್ಸ್ ನಿಂದ ಬಳಲುತ್ತಿರುವ ಮಕ್ಕಳಿಗೆ ವಸ್ತ್ರ ವಿತರಣೆ  ಮತ್ತು ಏಡ್ಸ್ ನಿಂದ ಬಳಲುತ್ತಿರುವವರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಏಡ್ಸ್ ಬಗ್ಗೆ ಜನ ಜಾಗೃತಿ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಭಾರತದಲ್ಲಿ 20 ಲಕ್ಷಕ್ಕಿಂತ ಅಧಿಕ ಜನರು ಏಡ್ಸ್ ನಿಂದ ಬಳುತ್ತಿದ್ದಾರೆ, ಏಡ್ಸ್ ಖಾಯಿಲೆ ಮಾನವ ಜಗತ್ತಿಗೆ ಒಂದು ಮಾರಕವಾದದ್ದು ಇದರ ಬಗ್ಗೆ ಹೆದರುವುದಕ್ಕಿಂತ ಜಾಗೃತಿ ಮೂಡಿಸುವುದು ಹಾಗೂ ಏಡ್ಸ್ ಪೀಡಿತರ ಬಳಿಯಲ್ಲಿ ಹೋಗಿ ಸ್ಥೈರ್ಯ ತುಂಬುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ. ಇದೇ ಕಾರಣದಿಂದ 10 ವರ್ಷಗಳಿಂದ ನಾವು ಟ್ರಸ್ಟ್ ಒಂದನ್ನು ರಚಿಸಿ ಏಡ್ಸ್ ಮಕ್ಕಳನ್ನು ಸಾಕುತ್ತಿದ್ದೇವೆ ಹಾಗೂ ಏಡ್ಸ್ ಸಂಶೋಧನಾ ಜನಜಾಗೃತಿ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ  ಕಳೆದ 10 ವರ್ಷದಲ್ಲಿ ಇಡೀ ರಾಜ್ಯಾದಂತ ಪ್ರವಾಸ ಮಾಡಿ ಏಡ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಮಾಡಿದ್ದೇವೆ. 2017 ರಲ್ಲಿ ನರೇಂದ್ರ ಮೋದಿಜಿ ನೇತೃತ್ವದ ಸರ್ಕಾರ ಕಾಯ್ದೆಯೊಂದನ್ನು ಲೋಕಸಭೆಯಲ್ಲಿ ತಂದಿದೆ ಇದರ ಅನ್ವಯ, ಏಡ್ಸ್ ಹೊಂದಿರುವವರಿಗೆ ಸಮಾಜದಲ್ಲಿ  ಸರ್ಕಾರ ವ್ಯವಸ್ಥೆಯಲ್ಲಿ ಸರಿಯಾದ ಸ್ಥಾನಮಾನ ನೀಡಬೇಕು, ಏಡ್ಸ್ ಪೀಡಿತರಿಗೆ ಸರ್ಕಾರಿ ಸಂಸ್ಥೆಗಳ ಮೂಲಕ ನಿರಂತರ ಸಮಾಲೋಚನೆ ಹಾಗೂ ಧೈರ್ಯ ತುಂಬುವ ಕೆಲಸವೂ ಆಗಬೇಕು. ಯಾರೇ ಏಡ್ಸ್ ಹೊಂದಿದಲ್ಲಿ ಸರ್ಕಾರವೇ ಅವರ ಎಲ್ಲಾ ರೀತಿಯ ಆರೋಗ್ಯದ ಖರ್ಚನ್ನು ನೋಡಿಕೊಳ್ಳುತ್ತದೆ, ಏಡ್ಸ್ ಹೊಂದಿದವರಿಗೆ ಸರ್ಕಾರಿ ಉದ್ಯೋಗದಲ್ಲೂ  ಮೀಸಲು ತರಬೇಕು ಎಂದು ತಿಳಿಸಿದೆ.  ಕರ್ನಾಟಕದಲ್ಲೂ ಸಹ ಸರ್ಕಾರದ ಏಡ್ಸ್ ಪ್ರೈವೇನ್ಷನ್ ಸೊಸೈಟಿ ಇಂದ ಏಡ್ಸ್ ಪೀಡಿತರಿಗೆ ಸಹಾಯ ಧನ ನೀಡುವ ಹಾಗೂ ಪಿಂಚಣಿ ನೀಡುವ ಯೋಜನೆ ಚಾಲ್ತಿಯಲ್ಲಿದೆ.ನಾವೂ ಕೂಡ ನಿರಂತರವಾಗಿ ಏಡ್ಸ್ ನ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಒಂದು ದಶಕದ ಅಧ್ಯಯನದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವವರಿದ್ದೇವೆ ಎಂದರು.

ಮುಂದಿನ ವಾರದಿಂದ ಪ್ರಾರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಪ್ರತಿ ದಿನ ಸಂಜೆ ನಾನು ಏಡ್ಸ್ ಪೀಡಿತ ಮಕ್ಕಳೊಂದಿಗೆ ಊಟ ಮಾಡಲಿದ್ದೇನೆ ಎಂದರು. ಇಂದು ವಿಶೇಷವಾಗಿ ಕಾರ್ಯಕ್ರಮದಲ್ಲಿ ಹೆಚ್ ಐವಿ ಪೀಡಿತ ಮಕ್ಕಳಿಗೆ ಬಟ್ಟೆಗಳನ್ನು ಹಾಗೂ ಸಿಹಿಯನ್ನು ವಿತರಣೆ ಮಾಡಲಾಯಿತು. ಅಲ್ಲದೇ ಮೈಸೂರಿನಲ್ಲಿ ಯಾರೇ ಹೆಚ್ ಐವಿ ಪೀಡಿತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೋ ಅವರಿಗೆ ನಾವು ಉಚಿತವಾಗಿ ಪ್ರಧಾನಮಂತ್ರಿ ಆಶ್ರಯ ಮನೆಗಳನ್ನು ಮುಂದಿನ ದಿನಗಳಲ್ಲಿ ನೀಡುವವರಿದ್ದೇವೆ ಎಂದು ಶಾಸಕ ಎಸ್.ಎ ರಾಮದಾಸ್ ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಆರ್ ಆಸ್ಪತ್ರೆಯ ART ಕೇಂದ್ರದ ನಾಗೇಂದ್ರ ಸ್ವಾಮಿ, ಸ್ಟಾಫ್ ನರ್ಸ್ ಆದ ಮಾಳ, ಕೌನ್ಸಿಲರ್ ಆದ ದಿವ್ಯ, ಅಮ್ಮ ಮನೆಯ ಸ್ವರಾಜ್ ಜೈನ್, ಶ್ರೀಕಂಠ ಶಾಸ್ತ್ರಿ. ಕೆ.ಆರ್ ಕ್ಷೇತ್ರದ ಬಿಜೆಪಿ ಪ್ರಮುಖರಾದ ರವಿ, ಮುರುಳಿ, ಗಿರೀಶ್ ಗೌಡ, ನಾಗರತ್ನ ಮುಂತಾದವರು ಹಾಜರಿದ್ದರು.

Key words: Distribution -clothing – HIV-affected -children – office – MLA- SA Ramadas