ಮಳೆಹಾನಿ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ಎಸ್.ಟಿ.ಸೋಮಶೇಖರ್

kannada t-shirts

ಮೈಸೂರು, ನವೆಂಬರ್ 1,2021(www.justkannada.in): ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರು ಕೂಡ ಒಟ್ಟಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಳೆ ಹಾನಿ ಕುರಿತು ಅವರ ಗಮನಕ್ಕೆ ತರೋಣ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಮಳೆ ಹಾನಿ ಕುರಿತಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲು ಜಿಪಂ ಕಚೇರಿಯಲ್ಲಿ  ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ಮಳೆ ಹಾನಿಯಿಂದಾಗಿರುವ ನಷ್ಟ ಹಾಗೂ  ಕೈಗೊಳ್ಳಬೇಕಿರುವ ಪರಿಹಾರ ಕಾರ್ಯಗಳ ಬಗ್ಗೆ  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ವಸ್ತುಸ್ಥಿತಿ ವಿವರಿಸೋಣ ಎಂದರು.

ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವ ಸಂಬಂಧ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಬೇಕು. ಶಾಸಕರು  ಕೂಡ ಖುದ್ದು ಮೃತ ಕುಟುಂಬದವರನ್ನು ಸಂಪರ್ಕಿಸಿ ಅವಶ್ಯಕ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಅವರಿಗೆ ಮಾಹಿತಿ ನೀಡಬೇಕು. ಮೂರ್ನಾಲ್ಕು ದಿನಗಳಲ್ಲಿ ಪ್ರತಿ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿ ಮತ್ತು ನಾವು ಕೂಡ ಭೇಟಿ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಮಳೆಯಿಂದ ಅಕ್ಟೋಬರ್ ತಿಂಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಐದು ಪ್ರಾಣಿಗಳ ಪ್ರಾಣ ಹಾನಿಯಾಗಿದೆ. 1249 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಇದರಲ್ಲಿ 34 ಮನೆಗಳು ಅಕ್ಟೋಬರ್ ನಲ್ಲೇ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

147.96 ಎಕರೆ ಬೆಳೆ ಹಾನಿ, 214.97 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ ಅಂದಾಜು 700 ಕಿ.ಮೀ.ನಷ್ಟು ರಸ್ತೆ ಹಾಳಾಗಿದೆ. 67 ಪ್ರಾಥಮಿಕ ಶಾಲೆಗಳು, 33 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಚರಂಡಿ ನೀರು ತಗ್ಗು ಪ್ರದೇಶ, ಮನೆಗಳಿಗೆ ನುಗ್ಗದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆಯಾಯಿತು.

ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ನಾಗೇಂದ್ರ, ಸಾ.ರಾ.ಮಹೇಶ್, ಮಂಜುನಾಥ್, ಮಹದೇವ್, ಹರ್ಷವರ್ಧನ್, ಮೂಡಾ ಅಧ್ಯಕ್ಷ ರಾಜೀವ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ ಪಿ ಆರ್.ಚೇತನ್,

ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಪಂ ಸಿಇಓ ಯೋಗೇಶ್ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಚಾಮುಂಡಿಬೆಟ್ಟದಲ್ಲಿ ಭೂಕುಸಿತವಾಗಿದ್ದ ಸ್ಥಳಕ್ಕೆ ಸಚಿವ ಸೋಮಶೇಖರ್ ಭೇಟಿ

ಚಾಮುಂಡಿಬೆಟ್ಟದ ನಂದಿ ಮಾರ್ಗದಲ್ಲಿ ಕಳೆದ ವಾರ ಭೂಕುಸಿತವಾಗಿದ್ದ ಸ್ಥಳಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ಭೇಟಿ ನೀಡಿ  ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಭೂಕುಸಿತದ ಕುರಿತು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಜೊತೆ ಮಾತನಾಡಲಾಗಿದೆ. ದೀಪಾವಳಿ ನಂತರ ಅವರು ಸಹ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ವಸ್ತುಸ್ಥಿತಿ ತಿಳಿದುಕೊಳ್ಳಲು ಇಂದು ನಾನು ಭೇಟಿ ನೀಡಿದ್ದೇನೆ. ಹೆಚ್ಚು ಹಾನಿಯಾಗಿದ್ದು ಈ ಕೂಡಲೇ ಪರಿಹಾರ ಕಾರ್ಯಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಮಳೆ ಹಾನಿ ಕುರಿತು ಸಿಎಂ ಭೇಟಿ ಮಾಡಲು ಜಿಲ್ಲೆಯ ಶಾಸಕರನ್ನು ಕರೆಯಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಜಿ‌.ಟಿ.ದೇವೇಗೌಡ, ಮೂಡಾ ಅಧ್ಯಕ್ಷ ರಾಜೀವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಡಿಸಿಪಿ ಗೀತಾ ಪ್ರಸನ್ನ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.jk

Key words: Discussion –with- CM – raindrop-Minister -ST Somashekhar.

website developers in mysore