ವೈಮಾನಿಕ ಶಾಲೆ ಆರಂಭಕ್ಕೆ ಡಿಜಿಸಿಎ ಅನುಮತಿಯೊಂದೇ ಬಾಕಿ: ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾರಂಭಕ್ಕೆ ಸಿದ್ಧತೆ.

ಬೆಂಗಳೂರು,ನವೆಂಬರ್,13,2021(www.justkannada.in):  ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಸತತ ಪರಿಶ್ರಮದ ಫಲವಾಗಿ ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದ ಜಕ್ಕೂರು ವೈಮಾನಿಕ ಶಾಲೆ ಉದ್ಘಾಟನೆಗೆ ಸಿದ್ಧವಾಗಿದೆ. ಡಿಜಿಸಿಎ ಪರೀಕ್ಷೆ ನಡೆಸಿದ್ದು ಅನುಮತಿ ನೀಡುವುದೊಂದೆ ಬಾಕಿ ಇದೆ. ಡಿಸೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಯೋಜಿಸಲಾಗಿದೆ.

ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ರನ್ ವೇ ಕಾಮಗಾರಿ ನಡೆಸಲಾಗಿದೆ. ವೈಮಾನಿಕ ತರಬೇತಿ ಕೇಂದ್ರ ಪುನರ್ ಆರಂಭಿಸಲು ಎಲ್ಲಾ ಸಿದ್ಧತೆಗಳು ‌ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಡಿಜಿಸಿಎ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ದೊರೆಯಲಿದೆ.

ಡಿಜಿಸಿಎ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಉದ್ಘಾಟನೆಗೆ ದಿನಾಂಕ ನಿಗದಿಯಾಗಲಿದೆ.  ಡಿಸೆಂಬರ್ ಮೊದಲ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಹೊಸ ರನ್ ವೇ 974 ಮೀಟರ್ ಉದ್ದವಿದ್ದು, ಎಲಿವೇಟೆಡ್ ಕಾರಿಡಾರ್ ಯೋಜನೆಯಾಗಿ ರನ್ ವೇಗೆ ಮೀಸಲಾಗಿದ್ದ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆದರೆ, ನಂತರ ಹೆಚ್ಚುವರಿ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೂಲ ಪ್ರಸ್ತಾವಿತ ಯೋಜನೆಯಂತೆ ರನ್ ವೇ ನಿರ್ಮಿಸಲಾಗಿದೆ.

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಕೆಲವರ ನಿರ್ಲಕ್ಷ್ಯದಿಂದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿತ್ತು. ಆದರೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಆಸಕ್ತಿ ವಹಿಸಿ ಮತ್ತೆ ಕಾರ್ಯಾರಂಭಗೊಳ್ಳುವಂತೆ ಕ್ರಮ ತೆಗೆದುಕೊಂಡಿದ್ದರು. ಪೈಲಟ್ ಆಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕಂಬ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದಾರೆ. ಶೀಘ್ರದಲ್ಲೇ ಹೊಸ ಬ್ಯಾಚ್ ದಾಖಲಾತಿಗೆ ನೋಟಿಫಿಕೇಷನ್ ಹೊರಡಿಸಲಿದ್ದು, ಡಿಸೆಂಬರ್‌ನಲ್ಲಿ ತರಗತಿಗಳು ಆರಂಭವಾಗಲಿವೆ.

Key words: DGCA- approval -pending – opening -aviation school-bangalore