ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಿರ್ಧಾರ: ಪಾಲಿಕೆ ಅನುದಾನದಲ್ಲೇ ದುರಸ್ತಿ ಕಾರ್ಯ –ಮೈಸೂರು ಮೇಯರ್ ಶಿವಕುಮಾರ್.

ಮೈಸೂರು, ನವೆಂಬರ್,4,2022(www.justkannada.in): ನಗರದ  ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಿರ್ಧಾರ ಮಾಡಲಾಗಿದ್ದು ಪಾಲಿಕೆ ಅನುದಾನದಲ್ಲೇ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂದು ಮೈಸೂರು ಮೇಯರ್ ಶಿವಕುಮಾರ್ ತಿಳಿಸಿದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ಪುರಾತತ್ವ ಇಲಾಖೆ ತಜ್ಞರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮೇಯರ್ ಶಿವಕುಮಾರ್ ಸಭೆ ನಡೆಸಿ ಚರ್ಚಿಸಿದರು.  ಸಭೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಿರ್ಧಾರ ಮಾಡಲಾಯಿತು.

ಕೆ.ಆರ್ ಮಾರುಕಟ್ಟೆ, ದೊಡ್ಡಗಡಿಯಾರ, ಪಾಲಿಕೆ ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಇತ್ತೀಚಿಗೆ ನಿರಂತರ ಮಳೆಯಿಂದಾಗಿ ಮಹಾರಾಣಿ ಕಾಲೇಜು ಕಟ್ಟಡ ಕುಸಿದಿತ್ತು.

ಇದೀಗ ಎಚ್ಚೆತ್ತುಕೊಂಡ ಮಹಾ ನಗರ ಪಾಲಿಕೆ, ನಗರದಲ್ಲಿರುವ ಹಲವಾರು ಪಾರಂಪರಿಕ ಕಟ್ಟಡಗಳ ಉಳಿಸಲು ಮೊದಲ ಪ್ರಾಶಸ್ತ್ಯ ಕೊಡಲು ಕ್ರಮ ವಹಿಸಲು ತೀರ್ಮಾನಿಸಿದೆ. ಈ ಕುರಿತು ಮಾತನಾಡಿರುವ ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಸಭೆ ಕರೆದು ಎಲ್ಲರ ಅನುಮೋದನೆ ಪಡೆದು ಪಾಲಿಕೆ ಅನುದಾನದಲ್ಲೇ ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತದೆ. ಇದನ್ನು ತ್ವರಿತವಾಗಿ ಕೈಗೆತ್ತಿಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Key words: Decision – preserve-heritage- buildings-mysore-Mayor -Shivakumar