ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್ : ನಗರದಲ್ಲಿ ಸಮಸ್ಯೆಗಳ ಬಗ್ಗೆ ಪರಿಶೀಲನೆ.

ಬೆಂಗಳೂರು,ಜೂನ್,8,2023(www.justkannada.in):  ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿ ನಗರದಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬಿಡಿಎ ಕೇಂದ್ರ ಕಚೇರಿಯಿಂದ ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ಬಿಎಂಟಿಸಿ ವೋಲ್ವೋ ಬಸ್​ನಲ್ಲಿ ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಹೆಎಚ್ ಎಲ್ ಏರ್​ಪೋರ್ಟ್ ರಸ್ತೆ, ಮಣಿಪಾಲ್ ಆಸ್ಪತ್ರೆ ಬಳಿ ಸಂಚರಿಸಿದರು.

ಬಿಡಿಎ ಕೇಂದ್ರ ಕಚೇರಿ ಬಳಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ , ಶಿವರಾಮ ಕಾರಂತ ಲೇಔಟ್ ಕಾಮಗಾರಿ ಮುಂದುವರಿಸಲು ನ್ಯಾಯಮೂರ್ತಿ ನಜೀರ್ ಅವರು ಆದೇಶಿಸಿದ್ದಾರೆ. ಹೀಗಾಗಿ ಈ ಯೋಜನೆ ಕುರಿತು ನ್ಯಾಯಮೂರ್ತಿಗಳಾದ ಚಂದ್ರಶೇಖರ್,  ರಮೇಶ್ ಹಾಗೂ  ಬೆಂಗಳೂರು ನಗರಾಭಿೃದ್ಧಿ ಕಾರ್ಯದರ್ಶಿಗಳು, ಬಿಡಿಎ ಮುಖ್ಯಸ್ಥರ ಜೊತೆ ಚರ್ಚೆ ಮಾಡಿದ್ದೇನೆ. ಲೇಔಟ್ ಯೋಜನೆ, ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಗಬೇಕು. ಬಿಡಿಎಗೂ ಪ್ರಯೋಜನ ಆಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ.  ಕಂದಾಯ ನಿವೇಶನಕ್ಕೆ ಅರ್ಜಿ ಹಾಕಿರುವ ಬಡವರಿಗೆ ಅನ್ಯಾಯ ಆಗಬಾರದು. ಕಾನೂನು ಚೌಕಟ್ಟಿನಲ್ಲಿ ಎಲ್ಲರ ರಕ್ಷಣೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಮಳೆಗಾಲ ಆರಂಭವಾಗುತ್ತಿದ್ದು, ಎಲ್ಲೆಲ್ಲಿ ನೀರು ನಿಲ್ಲುತದೆಯೋ ಅಂತಹ ಅತ್ಯಂತ ಪ್ರಮುಖ ಪ್ರದೇಶಗಳಿಗೆ ಇಂದು ಭೇಟಿ ನೀಡುತ್ತಿದ್ದೇನೆ. ಮಳೆ ಬಂದಾಗ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸಲು ಯಾವ ಕಾರ್ಯಯೋಜನೆ ರೂಪಿಸಿದ್ದೀರಿ ಎಂದು ಮಾಹಿತಿ ಪಡೆದಿದ್ದೇನೆ. ಮಳೆ ಬಂದಾಗ ಸಮಸ್ಯೆ ಉಂಟಾಗಿ ಬೆಂಗಳೂರು ನಗರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

ಯಮಲೂರಿಗೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್  ಹೊಸ ರಾಜಕಾಲುವೆ ತಡೆಗೋಡೆ ಪರಿಶೀಲನೆ ನಡೆಸಿದರು.  ಮಳೆಯಿಂದ ಹಾನಿಗೊಳಗಾಗಿದ್ದ  ಪ್ರದೇಶಗಳನ್ನ ವೀಕ್ಷಿಸಿ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಾಗೆಯೇ ದಿವ್ಯಶ್ರೀ ರಾಜಕಾಲುವೆ ಒತ್ತುವರಿ ಬಗ್ಗೆ  ಡಿಕೆ ಶಿವಕುಮಾರ್ ಗರಂ ಆದರು. 12 ಮೀಟರ್​ ರಾಜಕಾಲುವೆಯ ಜಾಗದಲ್ಲಿ 7 ಮೀಟರ್​​ ಒತ್ತುವರಿ ಮಾಡಿಕೊಳ್ಳಲಾಗಿದೆ. ಹೀಗೆ ಇದ್ದರೆ ಮಳೆ ವೇಳೆ ಪ್ರವಾಹ ಉಂಟಾಗಿ ಮತ್ತೆ ಸಮಸ್ಯೆ ಆಗುತ್ತೆ. ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಿ ರಾಜಕಾಲುವೆ ನಿರ್ಮಿಸಿ ಎಂದು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್​​ ಖಡಕ್ ಸೂಚನೆ ಕೊಟ್ಟರು.

Key words: DCM- DK Shivakumar- Bangalore -City -Rounds.