ವರ್ಧಂತಿಗೂ ಚಾಮುಂಡಿ ದರ್ಶನವಿಲ್ಲ: ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಡಿಸಿ ಆದೇಶ

ಮೈಸೂರು, ಜುಲೈ 09, 2020 (www.justkannada.in): ಚಾಮುಂಡಿ ವರ್ಧಂತಿ ಹಾಗೂ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟ ಹಾಗೂ ಉತ್ತನಹಳ್ಳಿ ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ನಾಳೆಯಿಂದ ಐದು ದಿನ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ನಾಳೆ ಮೂರನೇ ಆಷಾಢ ಶುಕ್ರವಾರದ ಜೊತೆಗೆ ವಾರಾಂತ್ಯ ಶನಿವಾರ, ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ. ಸೋಮವಾರ ಚಾಮುಂಡೇಶ್ವರಿ ದೇವಿ ಜನ್ಮೋತ್ಸವವಿದ್ದು ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿದಂತೆ ಸತತ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ.

ಇದೇ ರೀತಿ ಜುಲೈ 17 ರಂದು ಕಡೆಯ ಆಷಾಡ ಶುಕ್ರವಾರವಾಗಿದ್ದು, ಅಂದು ಕೂಡ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ‌‌ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ದೇವಾಲಯಕ್ಕೂ ‌ನಾಳೆಯಿಂದ ಸತತ ಐದು ದಿನ ಹಾಗೂ ಕೊನೆಯ ಆಷಾಢ ಶುಕ್ರವಾರ ಜುಲೈ 17ರಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶಿಸಿದ್ದಾರೆ.