ಬಂಡೀಪುರ ಭ್ರಷ್ಟಾಚಾರ ಆರೋಪ: ಅರಣ್ಯ ವಿಜಿಲೆನ್ಸ್‌ ನಿಂದ ತನಿಖೆಗೆ ಮಾಡಲು ಆದೇಶ.

ಬೆಂಗಳೂರು,ಮಾರ್ಚ್,3,2023(www.justkannada.in):  ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಿರ್ದೇಶಕರು ಹಾಗೂ ಕೆಲ ಸಿಬ್ಬಂದಿಯಿಂದ ನಡೆದಿದೆ ಎನ್ನಲಾದ ಸುಮಾರು 40 ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ವಿಜಿಲೆನ್ಸ್ ತಂಡದಿಂದ ತನಿಖೆ ನಡೆಸಲು ಅರಣ್ಯ ಪಡೆಯ ಮುಖ್ಯಸ್ಥರೂ ಆಗಿರುವ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ( ಪಿಸಿಸಿಎಫ್) ಆರ್ ಕೆ.ಸಿಂಗ್ ಆದೇಶಿಸಿದ್ದಾರೆ.

ಕಟ್ಟಡ ನಿರ್ಮಾಣ, ಹಲವು ಕಾಮಗಾರಿಗಳಲ್ಲಿ ನಿಯಮ ಪಾಲಿಸದೇ ಭ್ರಷ್ಟಾಚಾರ ಎಸಗಲಾಗಿದೆ ಎನ್ನುವ ಕುರಿತು ರೈತಸಂಘ ಸೇರಿದಂತೆ ಬೇರೆ ಸಂಘಟನೆಗಳಿಂದಲೂ ದೂರು ಬಂದಿರುವ ಹಿನ್ನೆಲೆಯಲ್ಲಿ ಪಿಸಿಸಿಎಫ್ ಅವರು ಈ ಆದೇಶವನ್ನು ಮಾಡಿದ್ದು, ವಿಜಿಲೆನ್ಸ್ ತಂಡ ತನಿಖೆ ಆರಂಭಿಸಿದೆ.

ಈಗಾಗಲೇ ಬಂಡೀಪುರದ ಸಿಬ್ಬಂದಿ ನಾಗೇಂದ್ರ ಎನ್ನುವವರ ವಿರುದ್ದ  ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡವು ಈಗಾಗಲೇ ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದೆ. ಅಲ್ಲದೇ ಬಂಡೀಪುರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ವಿರುದ್ದವೂ ಆರೋಪ ಕೇಳಿ ಬಂದಿರುವುದರಿಂದ ಅವರ ವಿರುದ್ದವೂ ತನಿಖೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುಮಾರು ನಲವತ್ತು ಕೋಟಿ ಗೂ ಹೆಚ್ಚು ಅನುದಾನವನ್ನು ಕೆಲವು ಕಾಮಗಾರಿಗೆ ಟೆಂಡರ್ ಕರೆಯದೆ ಕೆಲಸವಾಗುವ ಮುಂಚೆ ಚೆಕ್ ನೀಡಿ, ಲ್ಯಾಂಟನ ತೆರವು, ಪೀಠೋಪಕರಣ ಖರೀದಿ, ಸಿಎಫ್, ಎಸಿಎಫ್ ಕಚೇರಿ ನವೀಕರಣ, ಒಂದೇ ಗೆಸ್ಟ್ ಹೌಸ್ ಗೆ ಲಕ್ಷಾಂತರ ರೂ. ಕಾಮಗಾರಿ ಲೆಕ್ಕ ತೋರಿಸಿ ಇನ್ನಿತರ ಸಣ್ಣಪುಟ್ಟ ವಿಚಾರಗಳಿಗೆ ಸುಳ್ಳು ಬಿಲ್ ಸೃಷ್ಟಿಸಿ ಕೋಟ್ಯಾಂತ ರೂಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಕೂಡಲೇ ಸರ್ಕಾರ ತನಿಖೆ ಮಾಡಬೇಕು. ತನಿಖೆ ಆಗುವವರೆಗೂ ಸಿಎಫ್ ಅವರನ್ನು ಅಮಾನತು ಮಾಡಬೇಕು ಎಂದು ರೈತಸಂಘ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ದೂರು ನೀಡಿತ್ತು.

ಎಸ್‌ಬಿಐ ಬ್ಯಾಂಕ್ ನಿಂದ ಗಿಡ ನೆಡಲು 18 ಲಕ್ಷ ರೂ. ನೀಡಲಾಗಿದೆ ಆದರೆ ಮೇಲುಕಾಮನಹಳ್ಳಿ ಬಳಿ ಒಂದಷ್ಟು ಸಸಿ ನೆಟ್ಟು ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಬಂಡೀಪುರದ ಗಜೇಂದ್ರ ಗೆಸ್ಟ ಹೌಸ್ ಗೆ 25 ಲಕ್ಷ ರೂ. ಖರ್ಚು ತೋರಿಸಿ ಇನ್ನೂ 5  ಲಕ್ಷ ರೂ. ಖರ್ಚಾಗುವ ಬಗ್ಗೆ ತೋರಿಸಿದ್ದಾರೆ, ಹೊಸ ಬಸ್ ಖರೀದಿಸಿ ಬಾಡಿ ವಿನ್ಯಾಸಕ್ಕೆ 23 ಲಕ್ಷ ರೂ. ಗೂ ಹೆಚ್ಚು ಟೆಂಡರ್ ಕರೆಯದೆ ನೀಡಿದ್ದಾರೆ. ಮೀನು ತರಬೇತಿ ಕಾರ್ಯಕ್ರಮ ನಡೆಸುವುದಾಗಿ ತಮಿಳುನಾಡಿನಿಂದ ಇವರಿಗೆ ಬೇಕಾದವರನ್ನು ಕರೆಸಿಕೊಂಡು ಲಕ್ಷಾಂತರ ರೂ ಬಿಲ್ ಮಾಡಿದ್ದಾರೆ. ತಜ್ಞರ ಭೇಟಿ ವೆಚ್ಚ 30 ಲಕ್ಷ ರೂ., ಪೆನ್ನು ಪ್ಯಾಡ್, ಕಾಟ್ರೆಜ್ ಅಂತ 10 ಲಕ್ಷ ರೂ., ಲಂಟಾನ ತೆರವಿಗೆ 65 ಲಕ್ಷ ರೂ. ತೋರಿಸಿದ್ದಾರೆ, ರಸ್ತೆ ನಿರ್ವಹಣೆಗೆ 30 ಲಕ್ಷ ರೂ.ಡ್ರಾ ಮಾಡಿದ್ದಾರೆ, ಡಸ್ಟ್ ಬಿನ್ ಖರೀದಿಗೆ 10 ಲಕ್ಷ ರೂ. ಬಿಲ್ ಮಾಡಿದ್ದಾರೆ ಎನ್ನುವ ಆರೋಪವಿರುವ ಪತ್ರವನ್ನು ನೀಡಿದ ನಂತರ ತನಿಖೆಗೆ ಆದೇಶಿಸಲಾಗಿದೆ.

Key words: Corruption-allegation – Bandipur National Park- Forest- vigilance -probe.