“ಕಾಂಗ್ರೆಸ್ ನವರಿಗೆ ಈ ಬಜೆಟ್ ಅರ್ಥವೇ ಆಗಿಲ್ಲ” : ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ,ಫೆಬ್ರವರಿ,13,2021(www.justkannada.in) : ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರ ಆತ್ಮನಿರ್ಭರ ಭಾರತ ಬಜೆಟ್ ಮಂಡಿಸಿದೆ. ಆದರೆ, ಇಂಪೋರ್ಟೆಡ್ ನಾಯಕರಿರುವ ಕಾಂಗ್ರೆಸ್ ಪಕ್ಷಕ್ಕೆ ಆತ್ಮನಿರ್ಭರ ಭಾರತದ ಪರಿಕಲ್ಪನೆ ಅರ್ಥವೇ ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.jk

ಕೇಂದ್ರ ಬಜೆಟ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಜೆಟ್ ನ ಮಂತ್ರವಾಗಿದೆ. ಕೊರೊನಾದಿಂದಾಗಿ  ತಾತ್ಕಾಲಿಕವಾಗಿ ಮಂದವಾಗಿದ್ದ ಆರ್ಥಿಕ ವ್ಯವಸ್ಥೆ ಮುಂದಿನ ಕೆಲವೇ ತಿಂಗಳಲ್ಲಿ ಸುಸ್ಥಿರಗೊಳ್ಳುವಂತೆ ಮಾಡುವ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಆತ್ಮನಿರ್ಭರದ ಬಜೆಟ್ ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯಲಿದೆ ಎಂದರು.

ಆರೋಗ್ಯ ಮತ್ತು ಯೋಗಕ್ಷೇಮ, ಮೂಲಸೌಕರ್ಯ, ಅಂತರ್ಗತ ಅಭಿವೃದ್ಧಿ, ಮಾನವ ಬಂಡವಾಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಆರು ಅಂಶಗಳಲ್ಲಿ ಬಜೆಟ್ ರೂಪಿಸಲಾಗಿದೆ. 34,83,236 ಕೋಟಿ ರೂ. ಗಾತ್ರದ ಬಜೆಟ್ ಆರ್ಥಿಕತೆಗೆ ಚಿಕಿತ್ಸೆ ನೀಡುವಂತಿದೆ. ಕೋವಿಡ್ ನಂತರದ ಕಾಲದಲ್ಲಿ ಆರ್ಥಿಕತೆಯನ್ನು ಹೇಗೆ ಪುನಶ್ಚೇತನಗೊಳಿಸಬೇಕು ಎಂಬ ಸ್ಪಷ್ಟ ನೀಲಿನಕ್ಷೆ, ಮುನ್ನೋಟ ಇಲ್ಲಿದೆ ಎಂದು ಹೇಳಿದರು.

ಕೃಷಿಯಲ್ಲಿ ಸುಧಾರಣೆ ತರಲು ಹೊಸ ಕಾನೂನು ತಂದಿದ್ದಾರೆ

ಇದು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಬಜೆಟ್. ಪ್ರಧಾನಿ ನರೇಂದ್ರ ಮೋದಿಯವರು ಕೃಷಿಯಲ್ಲಿ ಸುಧಾರಣೆ ತರಲು ಹೊಸ ಕಾನೂನು ತಂದಿದ್ದಾರೆ. ಈ ಕಾನೂನುಗಳ ಬಗ್ಗೆ ರೈತರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಪ್ರಧಾನಿ ಮೋದಿಯವರು ಹೇಳಿದಂತೆ ನಾವು ಬುದ್ಧಿಜೀವಿಗಳನ್ನು ನೋಡಿದಂತೆ ಈಗ ಆಂದೋಲನ ಜೀವಿಗಳನ್ನು ನೋಡುತ್ತಿದ್ದೇವೆ. ಇಂತಹವರು ಸದಾ ಆಂದೋಲನ ನಡೆಸಲು ಕಾಯುತ್ತಿರುತ್ತಾರೆ. ಕೃಷಿ ಕಾನೂನು ಜಾರಿಯಾದ ಬಳಿಕ ಯಾವುದೇ ಮಂಡಿ ಮುಚ್ಚಿಲ್ಲ. ಕನಿಷ್ಠ ಬೆಂಬಲ ಬೆಲೆ ಯಾವಾಗಲೂ ಇರುತ್ತದೆ. ಆದ್ದರಿಂದ ರೈತ ಬಾಂಧವರು ಯಾವುದೇ ವದಂತಿ, ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕೇಂದ್ರ ಸರ್ಕಾರ 1,197 ಕಿ.ಮೀ. ಉದ್ದದ 33 ರಾಷ್ಟ್ರೀಯ ಹೆದ್ದಾರಿಗೆ ಅಡಿಗಲ್ಲು ಹಾಕಿದೆ. ಇದಕ್ಕಾಗಿ 10,904 ಕೋಟಿ ರೂ. ಬಿಡುಗಡೆ ಮಾಡಿದೆ. 2021-22 ರಲ್ಲಿ 1,16,144 ಕೋಟಿ ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ. ವಲಸೆ ಕಾರ್ಮಿಕರಿಗೆ ಮಹಾನಗರಗಳಲ್ಲಿ ನೆಲೆಸಲು ಕಡಿಮೆ ದರದ ಬಾಡಿಗೆ ಮನೆಗಳ ಸಮುಚ್ಛಯ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಆದಾಯ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದರು.

ಉಜ್ವಲಾ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ನೀಡಲಾಗುತ್ತದೆ. ಬೆಂಗಳೂರು ಮೆಟ್ರೊ ಕಾಮಗಾರಿಗೆ 14,788 ಕೋಟಿ ರೂ. ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ 2,23,846 ಕೋಟಿ ರೂ. ನೀಡಲಾಗಿದೆ. 64,180 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆ ಜಾರಿಯಾಗಲಿದೆ. ಕೋವಿಡ್ ಲಸಿಕೆ ವಿತರಣೆಗೆ 35 ಸಾವಿರ ಕೋಟಿ ರೂ. ನೀಡಲಾಗಿದೆ. ನ್ಯುಮೋಕೋಕಲ್ ಲಸಿಕೆಯನ್ನು ಕೂಡ ಎಲ್ಲ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

key words : Congressman-budget-Meaning-Not-Minister-Dr.K. Sudhakar