ಕಾಂಗ್ರೆಸ್ ಇನ್ನೂ ಟೇಕಾಫ್ ಆಗಲಿಲ್ಲ – ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಟೀಕೆ…

ಮಂಡ್ಯ,ಡಿಸೆಂಬರ್,2,2020(www.justkannada.in): ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೇ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಕಾಂಗ್ರೆಸ್ ಪಕ್ಷ ಇನ್ನೂ ಟೇಕಾಫ್ ಆಗಲಿಲ್ಲ. ಆದರೆ, ನಮ್ಮ ಭಾರತೀಯ ಜನತಾ ಪಕ್ಷವು ಈಗಾಗಲೇ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಟೇಕಾಫ್ ಆಗಿದೆ. ಬಸವಕಲ್ಯಾಣದಲ್ಲಿ ಟೇಕಾಫ್ ಆಗುತ್ತದೆ, ಮಸ್ಕಿಯಲ್ಲಿ ಟೇಕಾಫ್ ಆಗುತ್ತದೆ ಹಾಗೂ ಬೆಳಗಾವಿ ಲೋಕಸಭೆಯಲ್ಲೂ ಟೇಕಾಫ್ ಆಗುತ್ತದೆ. ಆದರೆ, ನೀವಿಬ್ಬರೂ ಕೂಡ ಮಲಗಿಯೇ ಇದ್ದೀರಿ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.congress-not-take-off-minister-s-t-somashekhar-criticizes

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಬಿಜೆಪಿ ಬೆಳವಣಿಗೆ ಹೊಂದಲು ಎಲ್ಲ ಕಡೆ ಪಕ್ಷ ಗೆಲ್ಲಬೇಕಿದೆ. ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 85ರಷ್ಟು ಬಿಜೆಪಿ ಕಾರ್ಯಕರ್ತರು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ 30 ಜಿಲ್ಲೆಯಲ್ಲಿಯೂ ಸಹ ಒಬ್ಬೊಬ್ಬ ನಾಯಕರನ್ನು ಮಾಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಪಕ್ಷ ಬಲವರ್ದನೆಗೆ ಮುಖ್ಯಮಂತ್ರಿಗಳು ಈ ಕಾರ್ಯಕ್ರವನ್ನು ಹಾಕಿಕೊಂಡಿದ್ದಾರೆ. ಅದರ ಸಂಪೂರ್ಣ ಯಶಸ್ವಿಗೆ ನಾವೆಲ್ಲರೂ ದುಡಿಯುತ್ತಿದ್ದೇವೆ. ಈ ನಿಮಿತ್ತ ನಾವು 5 ಜಿಲ್ಲೆಗೆ ಪ್ರವಾಸ ಮಾಡಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈಗ ಎಲ್ಲೆಲ್ಲೂ ಬಿಜೆಪಿ ಗೆಲುವಿನ ನಗೆ ಬೀರುತ್ತಿದೆ. ಪಕ್ಷದ ಅಸ್ತಿತ್ವವೇ ಇಲ್ಲದ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವನ್ನು ಪಕ್ಷ ಸಾಧಿಸಿತು. ಇದರ ಹಿಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್ ಅವರ ಪಾತ್ರ ದೊಡ್ಡದು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇನ್ನು ರಾಜರಾಜೇಶ್ವರಿ ನಗರದಲ್ಲಿಯೂ ಸಹ ಕಾಂಗ್ರೆಸ್ ನಿಂದ ಬಂದಂತಹ ಮುನಿರತ್ನ ಅವರು ಬರೋಬ್ಬರಿ 57 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದಕ್ಕೆ ಮೂಲ ಕಾರಣ ಚಕ್ರವರ್ತಿ ಅಶೋಕ್ ಅವರು. ಕಾಂಗ್ರೆಸ್ ನಿಂದ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಮಾಡಿದ್ದಲ್ಲದೆ, ಇಲ್ಲಸಲ್ಲದ ಆರೋಪವನ್ನೂ ಮಾಡಲಾಯಿತು. ಅವರ ತಂತ್ರಗಳನ್ನೆಲ್ಲ ತಲೆಕೆಳಗು ಮಾಡಿದ್ದು ಚಕ್ರವರ್ತಿ ಅಶೋಕ ಅವರು. ಅವರು ಮಾಡಿದ ಪ್ಲಾನ್ ನಿಂದ ಎರಡು ದೊಡ್ಡ ಬಂಡೆ ಮತ್ತು ಒಂದು ಚಿಕ್ಕ ಬಂಡೆ ಚೂರಾಯಿತು. ಮುನಿರತ್ನ ಅವರು ಕಾಂಗ್ರೆಸ್ ನಲ್ಲಿದ್ದಾಗ 20 – 22 ಸಾವಿರಗಳ ಅಂತರದಲ್ಲಿ ಗೆಲ್ಲುತ್ತಿದ್ದರೆ, ಬಿಜೆಪಿಗೆ ಬಂದು ವರ್ಷದ ಬಳಿಕ ಚುನಾವಣೆ ಎದುರಿಸಿದರೂ 57 ಸಾವಿರ ಮತಗಳ ಭರ್ಜರಿ ಜಯ ಸಾಧಿಸಲು ಸಾಧ್ಯವಾಯಿತು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.congress-not-take-off-minister-s-t-somashekhar-criticizes

ಮಂಡ್ಯದಲ್ಲಿ ಸಹ ಕಮಲ ಅರಳಲು ಸಾಕಷ್ಟು ಕಾರ್ಯಗಳನ್ನು ನಾವು ಮಾಡಿದ್ದೇವೆ. ಇಲ್ಲಿನ ಡಿಸಿಸಿ ಬ್ಯಾಂಕ್ ಗೆ ನಾಮಿನೇಶನ್ ಮಾಡಿ, ಅದಕ್ಕೆ ಬಿಜೆಪಿಯ ಒಬ್ಬ ಯುವಕ ಕಾರ್ಯಕರ್ತ ಸಿ ಪಿ ಉಮೇಶ್  ರ ವರನ್ನು  ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇನ್ನು ಮುಂದೆ ಸಹ ಸಹಕಾರ ಕ್ಷೇತ್ರದ ಪ್ರಮುಖ ಸ್ಥಾನಗಳಿಗೆ ಬಿಜೆಪಿಯವರೇ ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ನಾನು ಗುರಿಯನ್ನು ಹಾಕಿಕೊಂಡಿದ್ದೇನೆ.

ಮಂಡ್ಯದ ಆಲೆಮನೆಗೆ ಆತ್ಮನಿರ್ಭರ ಪ್ರಯೋಜನ

ಮಂಡ್ಯದಲ್ಲಿ ಆಲೆಮನೆಗೆ ಆತ್ಮನಿರ್ಭರ ಯೋಜನೆ ಮೂಲಕ ಬಲ ತುಂಬುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಅನುದಾನವನ್ನು ಯೋಜನೆಯಡಿ ಕೊಡಬೇಕೆಂದು ಕೇಂದ್ರ ಸರ್ಕಾರವೇ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ನಾನೂ ಸಹ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೆ ಎಷ್ಟು ಅನುದಾನವನ್ನು ಕೊಡಿಸಬಹುದು, ಅದರಿಂದಾಗುವ ಪ್ರಯೋಜನಗಳೇನು ಎಂಬ ಬಗ್ಗೆ ತಿಳಿದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯೋಜನೆ ಪ್ರಯೋಜನ ದಕ್ಕುವಂತೆ ಮಾಡುತ್ತೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಆತ್ಮನಿರ್ಭರ ಅಡಿ 600 ಕೋಟಿ ರೂ. ಪ್ರಸ್ತಾವನೆ

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ನಮ್ಮ ಸಹಕಾರ ಇಲಾಖೆಗೆ 4750 ಕೊಟಿ ರೂಪಾಯಿ ಅನುದಾನವನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ಮೊದಲ ವರ್ಷದ ಭಾಗವಾಗಿ ಸುಮಾರು 600 ಕೋಟಿ ರೂಪಾಯಿ ಅನುದಾನಕ್ಕಾಗಿ ಕರ್ನಾಟಕ ಸರ್ಕಾರದಿಂದ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಮೂರು, ನಾಲ್ಕು ವರ್ಷದಲ್ಲಿ 4750 ಕೊಟಿ ರೂಪಾಯಿ ಅನುದಾನವನ್ನು ನಮ್ಮ ಸಹಕಾರ ಇಲಾಖೆ ಮುಖಾಂತರ ಪಡೆದು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಕಾರ್ಯನಿರ್ವಹಿಸುತ್ತೇವೆ. ಇದರಲ್ಲಿ ಹೈನುಗಾರಿಗೆ, ಮೀನುಗಾರಿಕೆ ಸೇರಿ ಎಲ್ಲ ವರ್ಗಗಳಿಗೂ ಆರ್ಥಿಕ ಬಲವನ್ನು ತುಂಬಲು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡುವ ಗುರಿಯನ್ನು ನಮ್ಮ ರಾಜ್ಯ ಸರ್ಕಾರದ ವತಿಯಿಂದ ಹಾಕಿಕೊಳ್ಳಲಾಗಿದ್ದು, ಈಗಾಗಲೇ 15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂಪಾಯಿ ಹಣವನ್ನು ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳ ಮುಖಾಂತರ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ 24.50 ಲಕ್ಷ ರೈತರಿಗೂ 15,300 ಕೋಟಿ ರೂಪಾಯಿು ಸಾಲವನ್ನು ನೀಡಿ ಗುರಿ ಮುಟ್ಟುತ್ತೇವೆ. ಇದೇ ಆರ್ಥಿಕ ಸ್ಪಂದನ ಕಾರ್ಯಕ್ರಮ ಮೂಲಕ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ ಮುಖಾಂತರ 39300 ಕೋಟಿ ರೂಪಾಯಿ ಸಾಲ ನೀಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಪೌರಾಡಳಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣಗೌಡ, ಆಹಾರ ಸಚಿವರಾದ ಗೋಪಾಲಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.

Key words: Congress -not – take off-  Minister -S T Somashekhar- criticizes