ಮತ್ತೊಂದು ಗಲಾಟೆ ಪ್ರಕರಣದಲ್ಲಿ ಸಿಲುಕಿದ ಮೊಹಮ್ಮದ್ ನಲಪಾಡ್..?

ಬೆಂಗಳೂರು,ಜನವರಿ,20,2022(www.justkannada.in): ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಇದೀಗ ಮತ್ತೊಂದು ಗಲಾಟೆ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು,  ಬೆಂಗಳೂರು ಹೊರವಲಯದ ರೆಸಾರ್ಟ್ ವೊಂದರಲ್ಲಿ ಮೊಹಮ್ಮದ್ ನಲಪಾಡ್, ಬೆಂಬಲಿಗರು ಮತ್ತು  ಬಳ್ಳಾರಿ ಗ್ರಾಮೀಣ ಯುವಕಾಂಗ್ರೆಸ್ ಅಧ್ಯಕ್ಷ ಸಿದ್ಧು ಹಳ್ಳೇಗೌಡ ಅವರ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಿದ್ಧು ಹಳ್ಳೆಗೌಡ ಮತ್ತು ಬೆಂಬಲಿಗರ ಮೇಲೆ ನಲಪಾಡ್  ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇನ್ನು ಗಲಾಟೆ ಬೆನ್ನಲ್ಲೆ ಈ ಮಾಹಿತಿಯನ್ನ ಕಾಂಗ್ರೆಸ್ ಹಿರಿಯ ನಾಯಕರಿಗೆ ರವಾನಿಸಿದ್ದು ನಂತರ ಇಬ್ಬರ ನಡುವೆ ಸಂಧಾನ ಮಾಡಲಾಗಿದೆ ಎನ್ನಲಾಗುತ್ತಿದೆ. ಸಂಧಾನಕ್ಕೆ ಮಣಿದು ಸಿದ್ಧು ಹಳ್ಳೇಗೌಡ ಬಳ್ಳಾರಿಗೆ ತೆರಳಿದ್ದಾರೆ.

ನಲಪಾಡ್ ಮತ್ತು ಬೆಂಬಲಿಗರ ವಿರುದ್ಧ ಹಲ್ಲೆ ಆರೋಪ ಮಾಡಿದ್ಧ ಸಿದ್ಧು ಹಳ್ಳೆಗೌಡ ಇದೀಗ ಯು ಟರ್ನ್ ಹೊಡೆದಿದ್ದು  ನಾನು ಯಾವುದೇ ರೀತಿಯ ಆರೋಪ ಮಾಡಿಯೇ ಇಲ್ಲ. ನನ್ನ ಮೇಲೆ ಯಾರೂ ಹಲ್ಲೆ ನಡೆಸಿಲ್ಲ ನಲಪಾಡ್ ಜತೆ ಯಲಹಂಕ ಪಾರ್ಟಿ ಬಗ್ಗೆ ನನಗೆ ಗೊತ್ತಿಲ್ಲ. ನಿನ್ನೆ ನಾನು ರೂಮ್ ಬಿಟ್ಟು ಹೊರಗೆ ಹೋಗಿಲ್ಲ ಎಂದು ಹೇಳಿದ್ದಾರೆ.

ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಲಪಾಡ್, ಗಲಾಟೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಗಲಾಟೆಯಾದಾಗ ನಾನು ಅ ಸ್ಥಳದಲ್ಲೇ ಇರಲಿಲ್ಲ ಎಂದಿದ್ದಾರೆ.  ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ನಲಪಾಡ್ ಸಿಲುಕಿ ಇದು ಸಾಕಷ್ಟು ಸುದ್ದಿಯಾಗಿತ್ತು.

Key words: congress- Mohammed Nalapad- assult-bangalore