ಪ್ರತಿಯೊಂದು ರೋಗಕ್ಕೆ ಹಾಸ್ಯ ಉತ್ತಮವಾದ ರಾಮಬಾಣ- ಮೈಸೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ನುಡಿ

ಮೈಸೂರು,ಅ,4,2019(www.justkannada.in):  ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಎಲ್ಲ ಕಷ್ಟಗಳನ್ನು ಮರೆತು ಆರೋಗ್ಯದಿಂದ ಇರಲು ಹಾಗೂ ಪ್ರತಿಯೊಂದು ರೋಗಕ್ಕೂ ಹಾಸ್ಯ ಉತ್ತಮವಾದ ರಾಮಬಾಣ ಎಂದು ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಹೇಳಿದರು.

ನಾಡಹಬ್ಬ ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಚುಟುಕು ಹಾಸ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ  ಸಂಸದೆ ಸುಮಲತಾ ಅಂಬರೀಶ್ , ಮೈಸೂರು ದಸರಾ ಮಹೋತ್ಸವಕ್ಕೆ ಆಹ್ವಾನಿಸಿದ ಸಚಿವರಿಗೆ ಧನ್ಯವಾದವನ್ನು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ  ಮಹಿಳಾ ದಸರಾದಲ್ಲಿ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

ತಾವು ಹುಟ್ಟಿ ಬೆಳೆದ ಮೈಸೂರು ನಗರಕ್ಕೆ ಬಂದಿದ್ದೇನೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಸ್ವಾಗತಿಸುತ್ತಿರುವುದಕ್ಕೆ ಸಂತೋಷವಾಗಿದ್ದು, ನಿಮ್ಮ ಪ್ರೀತಿ ವಿಶ್ವಾಸದ ಬೆಂಬಲ ಸದಾ ಇರಲಿ ಎಂದು ಸುಮಲತಾ ಅಂಬರೀಶ್ ಕೇಳಿಕೊಂಡರು.

ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ  ಮಾತನಾಡಿ, ಉಸ್ತುವಾರಿ ಸಚಿವರಾಗಿ  ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಕಳೆದ ಮೂರು ದಿನಗಳಿಂದ ಬಹಳ ಅಚ್ಚುಕಟ್ಟಾಗಿ ಎಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ, ಜಿಲ್ಲಾ ಪಂಚಾಯತ್ ಸದಸ್ಯೆ ಮಂಗಳ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷೆ ವಿದ್ಯಾ ಅರಸ್, ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ಉಪಾಧ್ಯರಾದ ಟಿ.ಎನ್ ಶಾಂತ, ಅನ್ನಪೂರ್ಣ, ರತ್ನ ಲಕ್ಷ್ಮಣ್, ಮಹಿಳಾ ಮತ್ತು ಮಕ್ಕಳ ಕಾರ್ಯಾಧ್ಯಕ್ಷೆ ಕೆ.ಪದ್ಮ, ಕಿರು ತೆರೆಯ ಒಗ್ಗರಣೆ ಡಬ್ಬಿ ಹಾಗೂ ಬಿಗ್ ಬಾಸ್ ಖ್ಯಾತಿ ಶ್ರೀಮುರಳಿ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಸದಸ್ಯರಾದ ಛಾಯಾದೇವಿ, ಭಾಗ್ಯ ಮಾದೇಶ್, ರುಕ್ಮಿಣಿ, ಗಾಯತ್ರಮ್ಮ ಮತ್ತು ಇತರರು ಉಪಸ್ಥಿತರಿದ್ದರು.

Key words: Comedy-good – every –disease-MP Sumalatha Ambarish – Mysore.