ಸಿಎಂಗೆ ರಾಜಕೀಯ ಬದ್ಧತೆ ಇದ್ದರೇ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಿ- ಡಿ.ಕೆ ಶಿವಕುಮಾರ್ ಆಗ್ರಹ

ಹುಬ್ಬಳ್ಳಿ,ಮೇ,7,2022(www.justkannada.in): ಮುಖ್ಯಮಂತ್ರಿಗಳಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಹುಬ್ಬಳ್ಳಿ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು…

ಬಿಜೆಪಿಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ಹಣ ನೀಡಬೇಕು ಎಂದು ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಇಡೀ ದೇಶವೇ ತಲ್ಲಣಗೊಳ್ಳುವ ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.ಇನ್ನು ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಹಣ ನೀಡಬೇಕು ಎಂದು ಕೇಳಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಎಸಿಬಿ ತನಿಖೆಯಾಗಬೇಕು ಎಂದು ನಾನು ಒತ್ತಾಯಿಸಿರುವುದಾಗಿ ಮಾಧ್ಯಮಗಳು ಪ್ರಕಟಿಸಿವೆ. ಈ ಪ್ರಕರಣವನ್ನು ಕೇವಲ ಎಸಿಬಿ ಮಾತ್ರವಲ್ಲ, ಕೇಂದ್ರದ ತನಿಖಾ ಸಂಸ್ಥೆಗಳೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಗೆ ಅವರ ಪಕ್ಷದ ಗೌರವ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಅವರಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಈ ಸರ್ಕಾರ ಹುಟ್ಟಿದ್ದೇ ಶಾಸಕರನ್ನು ಖರೀದಿ ಮಾಡಿ. ಶಾಸಕ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ ಹಾಗೂ ಯೋಗೀಶ್ವರ್ ಅವರು 30 ಕೋಟಿ ಹಣ ನೀಡುವುದಾಗಿ ಹೇಳಿ 5 ಕೋಟಿ ಮುಂಗಡ ಕೊಟ್ಟು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಬಿ.ಸಿ. ಪಾಟೀಲ್ ಮತ್ತಿತರ ನಾಯಕರುಗಳು ಆಮಿಷ ಒಡ್ಡಿರುವ ಸಂಭಾಷಣೆ ಗಮನಿಸಿದ್ದೇವೆ. ಹೆಬ್ಬಾರ್, ರಹೀಂ ಖಾನ್ ಅವರು ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು. ಅಂತಿಮವಾಗಿ ಬಿಜೆಪಿಯವರು ಆಪರೇಷನ್ ಕಮಲದಲ್ಲಿ ಯಶಸ್ವಿಯಾಗಿ ಈ ಸರ್ಕಾರವನ್ನು ರಚಿಸಿದ್ದಾರೆ. ನಂತರ ನಡೆದ ಉಪಚುನಾವಣೆಗಳಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈಗ ಕೋವಿಡ್ ಅಕ್ರಮ, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್, ವಿವಿಧ ಇಲಾಖೆಗಳ ನೇಮಕಾತಿ ಅಕ್ರಮ, ಒಂದೊಂದು ಹುದ್ದೆಗೆ ಒಂದೊಂದು ರೇಟ್ ನಿಗದಿ, ಪೊಲೀಸ್ ಇಲಾಖೆಯಲ್ಲಿ ಎಸ್ ಐ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಿಗೆ ವಿವಿಧ ದರ ನಿಗದಿ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆ.

ಈಗ ಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ದರ ನಿಗದಿ ಆಗಿರುವುದರ ಬಗ್ಗೆ ಬಿಜೆಪಿ ಶಾಸಕರು ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರ ವಿರುದ್ಧ ವಿಶ್ವನಾಥ್ ಅವರು ಕೊಟ್ಟ ಹೇಳಿಕೆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ, ತನಿಖೆಯನ್ನೂ ನಡೆಸಿಲ್ಲ. ಇನ್ನು ಯತ್ನಾಳ್ ಅವರು ಕರ್ನಾಟಕ ಲೋಕಸೇವಾ ಆಯೋಗ ಸದಸ್ಯರಾಗಲು ಹಾಗೂ ಅಧ್ಯಕ್ಷರಾಗಲು ಕೋಟ್ಯಂತರ ರೂಪಾಯಿ ಹಣ ನೀಡಬೇಕು ಎಂದು ಹೇಳಿದ್ದಾರೆ. ಅದರ ಬಗ್ಗೆಯೂ ಸರ್ಕಾರ ಮಾತನಾಡಲಿಲ್ಲ. ಹೀಗೆ ಪ್ರತಿ ವಿಚಾರದಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗ ಸರ್ಕಾರ ತನಿಖೆ ನಡೆಸದೆ ಸುಮ್ಮನೆ ಕೂತಿರುವುದು ಏಕೆ? ಎಂದು ಡಿಕೆಶಿ ತರಾಟೆ ತೆಗೆದುಕೊಂಡರು.

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿರುವುದು ಏಕೆ? ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹೆಸರಲ್ಲಿ ಸಿಬಿಐಗೆ ತನಿಖೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಅವರು ಸಲಹೆ ನೀಡಿದರೂ ಯಡಿಯೂರಪ್ಪನವರು ಸಿಬಿಐ ವಿಚಾರಣೆಗೆ ಅನುಮತಿ ಕೊಟ್ಟಿದ್ದರು. ಎಲ್ಲ ಅಕ್ರಮಗಳನ್ನು ಮುಖ್ಯಮಂತ್ರಿಗಳು ರಕ್ಷಣೆ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದವರು ರಕ್ಷಣೆ ಮಾಡುತ್ತಿದ್ದಾರೋ? ಆ ಮೂಲಕ ಸಂವಿಧಾನವನ್ನು ಸುಡಲು ನಿರ್ಧರಿಸಿದ್ದಾರೋ? ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು.

ಕೇಂದ್ರದ ತನಿಖಾ ಸಂಸ್ಥೆಗಳು 24 ಗಂಟೆಗಳಲ್ಲಿ ಯತ್ನಾಳ್ ಅವರನ್ನು ವಶಕ್ಕೆ ಪಡೆದು ಯಾರು ಅವರ ಬಳಿ ಬಂದು ಲಂಚ ಕೇಳಿದ್ದರು ಎಂಬ ಮಾಹಿತಿ ಪಡೆದು, ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಪ್ರಶೋತ್ತರ:

ಯತ್ನಾಳ್ ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಹಾಗಾದರೆ ಈ ಅಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಅವರು ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಯಾರ ಹೆಸರು  ಹೇಳದಿದ್ದರು, ಮುಖ್ಯಮಂತ್ರಿ ಸ್ಥಾನಕ್ಕೆ ಲಂಚ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆ ನಡೆಯಬೇಕು. ಈ ಅಕ್ರಮವನ್ನು ಕಟೀಲ್ ಅವರು ರಕ್ಷಣೆ ಮಾಡುತ್ತಿದ್ದಾರೆ. ಪಕ್ಷ ಹಾಗೂ ಪಕ್ಷದ ನಾಯಕರ ದುರಾಡಳಿತ,  ಲಂಚದ ನಾಟ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮದ ಬಗ್ಗೆ ನಮ್ಮ ದಲಿತ ಶಾಸಕರು ಪಕ್ಷದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿ ಬಯಲಿಗೆಳೆದರೆ, ಅವರಿಗೆ ನೋಟಿಸ್ ನೀಡುವ ಸರ್ಕಾರ ಬಿಜೆಪಿ ನಾಯಕರುಗಳಿಗೆ ಯಾಕೆ ನೋಟಿಸ್ ನೀಡುತ್ತಿಲ್ಲ? ಯತ್ನಾಳ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದವರು, ಜವಾಬ್ದಾರಿಯುತ ನಾಯಕರು. ಅವರು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿಲ್ಲ. ಅವರು ನಮ್ಮನ್ನು ಬೇಕಾದರೆ ಮಾನಸಿಕ ಆಸ್ಪತ್ರೆಗೆ ದಾಖಲಿಸುತ್ತಾರೆ. ಮಿಸ್ಟರ್ ಬಿಜೆಪಿ ರಾಜ್ಯಾಧ್ಯಕ್ಷರೇ, ನಿಮ್ಮ ಮುಖಂಡತ್ವದಲ್ಲಿ ನಿಮ್ಮ ಪಕ್ಷದ ನಾಯಕರು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನಿಮ್ಮ ಮುಖ್ಯಮಂತ್ರಿಗಳು ನನ್ನ ಆಡಳಿತ ಚುರುಕು ಮಾಡಿದರೆ ಶಿವಕುಮಾರ್ ಅವರ ರಾಜಕಾರಣ ಮುಕ್ತಾಯವಾಗಲಿದೆ ಎಂದು ಹೇಳುತ್ತಾರೆ. ಮೊದಲು ನಿಮ್ಮ ಪಕ್ಷದ ಶಾಸಕರು ಹೇಳುತ್ತಿರುವ ವಿಚಾರವಾಗಿ ರಾಜ್ಯದ ಜನತೆಗೆ ಉತ್ತರ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

ಪಿಎಸ್ಐ ನೇಮಕಾತಿ ಅಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನೇಮಕಾತಿ ಅಕ್ರಮದಲ್ಲಿ ಸರ್ಕಾರ ಕೇವಲ ಫಲಾನುಭವಿಗಳನ್ನು ಮಾತ್ರ ಬಂಧಿಸುತ್ತದೆ. ಇವರು ಅಕ್ರಮದ ಅಂಗಡಿ ತೆರೆದ ಕಾರಣಕ್ಕೆ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ ಈ ಅಕ್ರಮದಲ್ಲಿ ಯಾರೆಲ್ಲಾ ಪ್ರಭಾವಿ ಮಂತ್ರಿಗಳು ಭಾಗಿಯಾಗಿದ್ದಾರೆ, ಬೆಂಬಲವಾಗಿ ನಿಂತಿದ್ದಾರೆ ಎಂಬುದು ಗೊತ್ತಾಗಬೇಕು. ಸಚಿವ ಸ್ವತಃ ನಾರಾಯಣ್ ಅವರು ಕರೆ ಮಾಡದಿದ್ದರೆ ಅಕ್ರಮ ಆರೋಪ ಹೊತ್ತಿರುವ ಅಭ್ಯರ್ಥಿಯನ್ನು ಪೊಲೀಸರು ವಿಚಾರಣೆ ಮಾಡದೆ ಬಿಡುತ್ತಿದ್ದರೇ? ಎಲ್ಲರನ್ನೂ ಕರೆಸಿ ವಿಚಾರಣೆ ಮಾಡುವಾಗ, ಸಚಿವರಿಗೆ ಬೇಕಾದ ಅಭ್ಯರ್ಥಿಯನ್ನು ಮಾತ್ರ ಬಿಟ್ಟು ಕಳುಹಿಸಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿಯವರು ಸತ್ಯ ತಿಳಿಸಿದ್ದಾರೆ. ಅಶ್ವತ್ ನಾರಾಯಣ್ ಅವರು ಮೊದಲಿನಿಂದಲೂ ನರ್ಸಿಂಗ್ ಮಾರ್ಕ್ಸ್ ಕಾರ್ಡ್, ಸರ್ಟಿಫಿಕೇಟ್ ಗಳನ್ನು ಕೊಟ್ಟು ದಂಧೆ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಈ ಗಂಭೀರ ಆರೋಪ ಮಾಡಿದ್ದು ಈ ವಿಚಾರವಾಗಿ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. ಮುಖ್ಯಮಂತ್ರಿಗಳಾಗಿದ್ದವರು ಆಧಾರ ಇಲ್ಲದೆ ಆರೋಪ ಮಾಡುತ್ತಾರಾ? ಅವರ ಆರೋಪ ಸುಳ್ಳಾಗಿದ್ದರೆ ಸುಳ್ಳು ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಿ’ ಎಂದು ಆಗ್ರಹಿಸಿದರು.

ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಸರ್ಕಾರ ಎಲ್ಲಾ ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ’ ಎಂದರು.

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ನೇಮಕದಲ್ಲಿ ಅಕ್ರಮ ನಡೆದಿರುವ ಗುಮಾನಿ ಇದೆ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಲಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಲಿ ನೇಮಕಾತಿ ಅಕ್ರಮ ನಡೆದಿದ್ದರೆ ಅದರ ಬಗ್ಗೆಯೂ ಸರ್ಕಾರ ತನಿಖೆಗೆ ಆದೇಶಿಸಲಿ. ನಾನು ಇಂಧನ ಸಚಿವನಾಗಿದ್ದ ಸಮಯದಲ್ಲಿ ಸುಮಾರು ಮೂವತ್ತು ಸಾವಿರ ಹುದ್ದೆಗಳ ನೇಮಕ ಮಾಡಿದ್ದೇನೆ.  ಯಾರಾದರೂ ಒಬ್ಬರು ನಾನು ಶಿವಕುಮಾರ್ ಅವರಿಗೆ ಲಂಚ ಕೊಟ್ಟು ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದರೆ ನಮಗೂ ಹಗ್ಗ ಹಾಕಿ’ ಎಂದರು.

ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತೀರಾ ಎಂಬ ಪ್ರಶ್ನೆಗೆ, ‘ಈ ಹಗರಣಗಳ ಬಗ್ಗೆ ಮೊದಲು ತನಿಖೆ ಮಾಡಬೇಕು. ಅವರ ರಾಜೀನಾಮೆ ಪಡೆಯುವುದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ರಾಜಿನಾಮೆ ಕೊಡಿ ಎಂದು ಆಗ್ರಹಿಸಿದ ಮಾತ್ರಕ್ಕೆ ಅವರು ರಾಜೀನಾಮೆ ನೀಡುತ್ತಾರಾ? ಕೇವಲ ಮಾಧ್ಯಮಗಳಲ್ಲಿ ಸುದ್ದಿಯಾಗಲು ಇಂತಹ ಆಗ್ರಹಗಳನ್ನು ನಾನು ಮಾಡುವುದಿಲ್ಲ. ಮುಖ್ಯಮಂತ್ರಿಗಳ ಹುದ್ದೆಗೆ ಲಂಚ ನೀಡಬೇಕು ಎಂಬ ವಿಚಾರ ಎಲ್ಲಾ ಮಾಧ್ಯಮಗಳಲ್ಲೂ ವರದಿಯಾಗಿವೆ. ಇದೊಂದು ಗಂಭೀರ ಆರೋಪವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದೊಂದು ಗಂಭೀರ ಆರೋಪವನ್ನು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಕೇಳಿರಲಿಲ್ಲ’ ಎಂದರು.

ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ, ‘ಈ ವಿಚಾರವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜಕೀಯ ಪಕ್ಷವಾಗಿ ನಾವು ರಾಜ್ಯದ ಪ್ರತಿ ತಾಲೂಕಿನಲ್ಲೂ ಜನರಿಗೆ ಈ ವಿಚಾರ ತಿಳಿಸುತ್ತೇವೆ. ಈ ಕುರಿತು ಹೋರಾಟ ರೂಪಿಸುತ್ತೇವೆ’ ಎಂದು ಉತ್ತರಿಸಿದರು.

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿದ ಅವರು, ‘ಸಚಿವ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ರಮೇಶ್ ಜಾರಕಿಹೊಳಿ ಅವರು ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಏನು ಹೇಳಿದ್ದಾರೆ? ಸಂತೋಷ್ ಪಾಟೀಲ್ ಕೆಲಸ ಮಾಡಿರುವುದಾಗಿ ಇವರೆಲ್ಲರೂ ಹೇಳಿದ್ದಾರೆ. ಅನೇಕರು ಸಂತೋಷ್ ಪಾಟೀಲ್ ಕಾಮಗಾರಿಗಾಗಿ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಮಂತ್ರಿಗಳೇ ಅಲ್ಲಿ ಕೆಲಸ ನಡೆದಿರುವುದಾಗಿ ಹೇಳಿರುವಾಗ ಸರ್ಕಾರ ಮೊದಲು ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆ ಕುಟುಂಬ ಸಂತೋಷ್ ಪಾಟೀಲ್ ಅವರನ್ನು ಕಳೆದುಕೊಂಡಿದೆ. ಆತ ಸಾಯುವ ಮುನ್ನ ದೆಹಲಿಯಲ್ಲಿ ಮಾಧ್ಯಮದವರ ಜತೆ ಮಾತಾಡಿದ್ದರು ಹಾಗೂ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು. ಸರ್ಕಾರ ಈ ವಿಚಾರವಾಗಿ ಯಾವ ರೀತಿ ತನಿಖೆ ಮಾಡುತ್ತದೆ ಎಂಬುದನ್ನು ಕಾದು ನೋಡೋಣ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಮತ್ತಿತರರು ಇದ್ದರು

Key words: CM – political commitment –order- high level- investigation-DK Shivakumar