ಬೆರಳ ತುದಿಯಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಮಾಹಿತಿ ಸೇವೆಯನ್ನು ಒದಗಿಸುವ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ (ITMS) ಗೆ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

 

ಬೆಂಗಳೂರು ಫೆಬ್ರವರಿ 23(www.justkannada.in): ಬೆರಳ ತುದಿಯಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಮಾಹಿತಿ ಹಾಗೂ ಸೇವೆಯನ್ನು ಒದಗಿಸುವ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ ಹಾಗೂ ದೇವಾಲಯಗಳ ಸಮಗ್ರ ಅಭಿವೃದ್ದಿಗೆ ರೂಪಿಸಲಾಗಿರುವ ದೈವ ಸಂಕಲ್ಪ ಯೋಜನೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆಗೊಳಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಎರಡೂ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬೆರಳ ತುದಿಯಲ್ಲಿ ದೇವಸ್ಥಾನದ ಸಮಗ್ರ ಮಾಹಿತಿಯನ್ನು ಒದಗಿಸುವಂತಹ ಅತ್ಯಾಧುನಿಕ ಡಿಜಿಟಲ್‌ ವ್ಯವಸ್ಥೆ ಇಂದಿನ ಅಗತ್ಯವಾಗಿತ್ತು. ನಮ್ಮ ದೇವಾಲಯಗಳ ಬಗ್ಗೆ ಸಮಗ್ರ ಮಾಹಿತಿ ಹಾಗೂ ಅವುಗಳಲ್ಲಿ ದೊರೆಯುವ ಸೇವೆಗಳನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡುವ ವ್ಯವಸ್ಥೆ ಎಲ್ಲವೂ ಒಳಗೊಂಡಿರುವುದು ಸಂತಸದ ವಿಷಯವಾಗಿದೆ. ಈ ಎಲ್ಲಾ ಸೌಲಭ್ಯಗಳ ಜೊತೆಯಲ್ಲಿ ದೇವಸ್ಥಾನಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಮಾಹಿತಿಯನ್ನು ಅಳವಡಿಸಬೇಕು. ಪ್ರವಾಸದ ಯೋಜನೆಯನ್ನು ಸುಲಭವಾಗಿ ಮಾಡಬಹುದಾದ ಮಾಹಿತಿಗಳನ್ನು ಅಳವಡಿಸಿ, ದೇವಸ್ಥಾನಗಳ ಆಸ್ತಿಗಳ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಸೂಚನೆ ನೀಡಿದರು.

ಟೆಂಪಲ್‌ ಟೂರಿಸಂಗೆ ಒತ್ತು: ಉತ್ತರ, ದಕ್ಷಿಣ ಹಾಗೂ ಕರಾವಳಿ ಕರ್ನಾಟಕಗಳಲ್ಲಿ ಟೆಂಪಲ್‌ ಟೂರಿಸಂ ಗೆ ಹೆಚ್ಚಿನ ಅವಕಾಶವಿದೆ. ಈ ಅವಕಾಶಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೂ ಸೂಚನೆ ನೀಡಲಾಗಿದೆ. ಈ ಮಾಹಿತಿಯನ್ನೂ ವೆಬ್‌ಸೈಟ್‌ನಲ್ಲಿ ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿ ಎಂದು ಹೇಳಿದರು. ದೇಶಕ್ಕೆ ಮಾದರಿಯಾದ ಇಂತಹ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಮುಜರಾಯಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾ ಕನಸನ್ನು ನನಸಾಗಿಸುವಲ್ಲಿ ಐಟಿಎಂಎಸ್‌ ವೆಬ್‌ಸೈಟ್‌ ಪಾತ್ರ ಮಹತ್ವದ್ದಾಗಿದೆ. ಐಟಿಎಂಎಸ್‌ ಹಾಗೂ ದೈವ ಸಂಕಲ್ಪ ಯೋಜನೆಗಳು ನಮ್ಮ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ. ದೇಶ ವಿದೇಶಗಳಿಂದ ರಾಜ್ಯದ ದೇವಾಲಯಗಳಿಗೆ ಬರುವ ಲಕ್ಷಾಂತರ ಭಕ್ತರಿಗೆ ಅತ್ಯುತ್ತಮ ಸೌಕರ್ಯ ಒದಗಿಸಲು ಇಲಾಖೆ ಬದ್ದವಾಗಿದೆ. ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ತಂದು ಹಣಕಾಸಿನ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಐಟಿಎಂಎಸ್‌ ಯೋಜನೆ ಜಾರಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಹೇಳಿದರು.

ಐಟಿಎಂಎಸ್‌ ಬಗ್ಗೆ ಮಾಹಿತಿ: ಒಂದೇ ವೆಬ್‌ಸೈಟ್ ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು (ದೇವಾಲಯಗಳ ಇತಿಹಾಸ, ಲಭ್ಯವಿರುವ ಸೇವೆಗಳ/ಪೂಜೆಗಳ ವಿವರ, ಲಭ್ಯವಿರುವ ಸೌಲಭ್ಯಗಳು, ಹತ್ತಿರದ ಸ್ಥಳಗಳು ಇತ್ಯಾಧಿ ವಿವರಗಳು) ವೀಕ್ಷಿಸಬಹುದಾಗಿದೆ. ಜಗತ್ತಿನ ಯಾವುದೇ ಭಾಗದಿಂದ ಆನ್‌ಲೈನ್‌ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್ ಲೈನ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ / ಭಕ್ತಾಧಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐ ಟಿ ಎಂ ಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳು ಇದರಲ್ಲಿ ಅಡಕವಾಗಿರಲಿವೆ. ಸರ್ಕಾರದ ಭೂ ದಾಖಲೆಗಳ ದತ್ತಾಂಶದೊಂದಿಗೆ (Bhoomi etc) ಸಂಯೋಜನೆ ಮಾಡಬಹುದಾಗಿದ್ದು, ವಿವಿಧ ರೀತಿಯ MIS ವರದಿಗಳನ್ನು ಪಡೆಯಲು ಅವಕಾಶವಿರುತ್ತದೆ.

ದೈವ ಸಂಕಲ್ಪ ಯೋಜನೆ:
ಇದೇ ವೇಳೆ ದೈವ ಸಂಕಲ್ಪ ಯೋಜನೆಗೂ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಪ್ರಸ್ತುತ ರಾಜ್ಯದಲ್ಲಿರುವ 205 ಎ ದರ್ಜೆಯ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ದೈವ ಸಂಕಲ್ಪ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಪ್ರಥಮ ಹಂತದಲ್ಲಿ ರಾಜ್ಯದ ಪ್ರಮುಖ 25 ದೇವಾಲಯಗಳನ್ನು 1,140 ಕೋಟಿ ರು ಅಂದಾಜು ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಲಕ್ಷಾಂತರ ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯ, ಮಲೈ ಮಹದೇಶ್ವರ ಸ್ವಾಮಿ ಬೆಟ್ಟ, ಚಾಮುಂಡಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನ ಗಳು ಈ ಯೋಜನೆಯ ಅಡಿಯಲ್ಲಿ ಸೇರಿವೆ. ಭಕ್ತಾದಿಗಳಿಗೆ ವಸತಿ ಸೌಲಭ್ಯ, ಉತ್ತಮ ರಸ್ತೆ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶಿಲಾಮಯ ಕಟ್ಟಡಗಳ ನಿರ್ಮಾಣ, ಮಲ್ಟಿಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ, ಸ್ನಾನ ಘಟ್ಟ ಹಾಗೂ ಸುಸಜ್ಜಿತ ಅನ್ನದಾಸೋಹ ಭವನ, ವಾಣೀಜ್ಯ ಸಂಕೀರ್ಣ ಕಟ್ಟಡಗಳು, ಶೌಚಾಲಯಗಳು, ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇನ್ನಿತರ ವ್ಯವಸ್ಥೆ ಗಳನ್ನು ಅಭಿವೃದ್ಧಿ ಗೊಳಿಸಲಾಗುವುದು.

ದೇಶದ ಧಾರ್ಮಿಕ ಕ್ಷೇತ್ರಗಳನ್ನು ಸಮಗ್ರ ವಾಗಿ ಅಭಿವೃದ್ಧಿ ಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯು ಈ ಯೋಜನೆಗಳ ಮೂಲಕ ದಾಪುಗಾಲು ಇಟ್ಟಿದೆ ಎಂದು ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್ ಎ ರಾಮದಾಸ್, ಕರ್ನಾಟಕ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

key words: CM-Basavaraj bommai-ITMS