ಪಾಲಿಕೆಗಳಲ್ಲಿ ಬಹುವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರ ವರ್ಗಾವಣೆಗೆ ಕ್ರಮ- ಸಚಿವ ಭೈರತಿ ಬಸವರಾಜು.

ಮೈಸೂರು,ಜುಲೈ,8,2022(www.justkannada.in): ನಗರ ಪಾಲಿಕೆಗಳಲ್ಲಿ ಬಹುವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರ ಪಟ್ಟಿಕೊಡಲು ಹೇಳಿದ್ದೇನೆ. ಪಾಲಿಕೆ ಆಯುಕ್ತರು ಆ ಪಟ್ಟಿ ಕೊಟ್ಟ ಕೂಡಲೇ ಅಂತವರ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಭೈರತಿ ಬಸವರಾಜು, ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದೆ. ಮಳೆಯ ಅವಾಂತರ ಸೃಷ್ಠಿಯಾದಾಗ ಜನರ ನೆರವಿಗೆ ಶೀಘ್ರ ಧಾವಿಸಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲು ಪಾಲಿಕೆ ಆಯುಕ್ತರುಗಳಿಗೆ ಸೂಚನೆ ನೀಡಲಾಗಿದೆ. ರಾತ್ರಿಯ ವೇಳೆಯೂ ಟಾಸ್ಕ್ ಪೋರ್ಸ್ ಗಳು ಕೆಲಸ ಮಾಡಬೇಕು. ಜನರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಪಂದಿಸಲು ತಿಳಿಸಿದ್ದೇನೆ ಎಂದರು.

ರಾಜ್ಯದ ಪೌರಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸರ್ಕಾರಕ್ಕೆ ಇದರಿಂದ 555 ಕೋಟಿ ರೂ. ಹೊರೆಯಾಗಲಿದೆ. ಆದರೂ ಅವರ ಹಿತ ಕಾಯಲು ನಾವು ಬದ್ಧ. ಸರ್ಕಾರಗಳು ನೀಡುವ ಸವಲತ್ತುಗಳನ್ನು ಪೌರಕಾರ್ಮಿಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸ್ವಚ್ಚತಾ ಕಾರ್ಯಕ್ಕೆ ನೀಡುವ ಹ್ಯಾಂಡ್ ಗ್ಲೌಸ್, ಶೂಗಳನ್ನು ಕೆಲವರು ಬಳಸುತ್ತಿಲ್ಲ. ಇದೂ ಕೂಡಾ ಒಂದು ಸಮಸ್ಯೆ ಎಂದು ಭೈರತಿ ಬಸವರಾಜ್ ಹೇಳಿದರು.

ಮೈಸೂರು ಹೊರವರ್ತುಲ ರಸ್ತೆಯ ವಿದ್ಯುತ್ ದೀಪ ನಿರ್ವಹಣೆ ಹೊಣೆ ಮೈಸೂರು ಮಹಾನಗರಪಾಲಿಕೆಗೆ ವಹಿಸಿದ್ದೇನೆ. ಮುಂದಿನ ತಿಂಗಳಿಂದ ಶಾಶ್ವತವಾಗಿ ಮೈಸೂರು ರಿಂಗ್ ರಸ್ತೆಯಲ್ಲಿ ವಿದ್ಯುತ್ ದೀಪಗಳ ಸಂಪರ್ಕ ಇರುತ್ತದೆ. ಮೈಸೂರು ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣದಲ್ಲಿ ನಾವು ರಾಜವಂಶಸ್ಥರ ಮನವೊಲಿಸುತ್ತೇವೆ.ಇದರ ನಡುವೆಯೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದರು.

Key words: city corporation-staff- transfer-minister-Bairathi Basavaraj