ಮಕ್ಕಳಲ್ಲಿ ಆವಿಷ್ಕಾರ, ವೈಜ್ಞಾನಿಕ ಮನೋಭಾವ ಮೂಡಿಸಲು ಲ್ಯಾಬ್‌ ಸಹಕಾರಿ:  ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಬೆಂಗಳೂರು,ಮಾರ್ಚ್,06,2021(www.justkannada.in) : ಮಕ್ಕಳಲ್ಲಿ ಆವಿಷ್ಕಾರ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

jk

ನಗರದ ಮಲ್ಲೇಶ್ವರ 18 ನೇ ಕ್ರಾಸ್‌ನಲ್ಲಿರುವ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ʼಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆʼ ನೆರವೇರಿಸಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳ ಪರ್ವ ಆರಂಭವಾಗಿದೆ ಎಂದರು.

ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಮಹತ್ವದ ಪಾತ್ರ ವಹಿಸುತ್ತದೆ. ಆವಿಷ್ಕಾರ ಮನೋಭಾವನೆಯನ್ನೂ ಬೆಳೆಸುತ್ತದೆ. ಪ್ರತಿ ಶಾಲೆಯಲ್ಲೂ ಸ್ಥಾಪನೆ ಮಾಡುವುದು ಸರಕಾರದ ಉದ್ದೇಶ. ಕೆಲ ಶಾಲೆಗಳಲ್ಲಿ ಸ್ಥಳಾಭಾವ ಇದ್ದರೆ ವಿಶಾಲ ಜಾಗವಿರುವ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ ಅನ್ನು ಕ್ಲಷ್ಟರ್‌ ಮಾದರಿಯಲ್ಲಿ ತೆರೆಯಲಾಗುವುದು ಎಂದು ಹೇಳಿದರು.

children-Invention-Scientific-Attitude-raise-Lab-Collaborative-DCM-Dr.C.N.Ashwaththanarayana 

ಕಿರಿಯ ಮತ್ತು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಮ್ಮ ರಾಜ್ಯದ ಶೈಕ್ಷಣಿಕ ಸ್ವರೂಪವೇ ಆಮೂಲಾಗ್ರವಾಗಿ ಬದಲಾಗುತ್ತದೆ. ಬೆಂಗಳೂರು ಜಗತ್ತಿನ ಟಾಪ್‌ ಹತ್ತು ನಗರಗಳ ಸ್ಥಾನದಲ್ಲಿದ್ದು, ಅದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಶಿಕ್ಷಣದ ಗುಣಮಟ್ಟವನ್ನು ಮಕ್ಕಳ ಆರಂಭದ ಹಂತದಿಂದಲೇ ಕಾಯ್ದುಕೊಳ್ಳಬೇಕು. ಬಾಲ್ಯದಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಬಹು ವಿಷಯಗಳನ್ನು, ಬಹಭಾಷೆಗಳನ್ನು ಕಲಿಯುವ ಶಕ್ತಿ ಮಕ್ಕಳಿಗೆ ಹೆಚ್ಚಾಗಿರುತ್ತದೆ ಎಂದು ಹೇಳಿದರು

ಕೆಲ ದೇಶಗಳಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ ಉಪಗ್ರಹಾಧರಿತ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಕಲಿಕೆ ಹಾಗೂ ಬೋಧನೆಯಲ್ಲಿ ಉಪಗ್ರಹಗಳ ಪಾತ್ರವಿದೆ. ಅಷ್ಟೇ ಏಕೆ? ಶಾಲೆಗಳಲ್ಲೇ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಇದೇ ಸುಧಾರಣೆ ನಮ್ಮಲ್ಲೂ ಆಗುತ್ತಿದ್ದು, ರಾಜ್ಯದ ಹಲವು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ ಎಂದು ಮಾಹಿತಿ ನೀಡಿದರು.

children-Invention-Scientific-Attitude-raise-Lab-Collaborative-DCM-Dr.C.N.Ashwaththanarayana 

ಈ ಲ್ಯಾಬ್‌ ಮಾಡಲು ಡೆಲ್‌ ಟೆಕ್ನಾಲಜೀಸ್‌ ನೆರವು ನೀಡಿದೆ. ಹೀಗೆ, ಸರಕಾರದ, ಸಮಾಜದ ಕೆಲಸಗಳಲ್ಲಿ ಖಾಸಗಿ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ. ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕ್ಷೇತ್ರ ಉದಾರವಾಗಿ ಮುಂದೆ ಬರಬೇಕು ಎಂದು ಡಿಸಿಎಂ ಕೋರಿದರು.

key words : children-Invention-Scientific-Attitude-raise-Lab-Collaborative-DCM-Dr.C.N.Ashwaththanarayana