ಬೆಂಗಳೂರಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ

ಬೆಂಗಳೂರು, ಡಿಸೆಂಬರ್ 21, 2019 (www.justkannada.in): ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವಂತೆ ಸಿಎ ವಿದ್ಯಾರ್ಥಿಗಳಿಗೆ ಐಐಎಂ ಮುಖ್ಯಸ್ಥ ಪ್ರೊ. ಕೆ. ಕುಮಾರ್ ಸಲಹೆ ನೀಡಿದರು.

ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮತ್ತು ದಕ್ಷಿಣ ಭಾರತ ಲೆಕ್ಕಪರಿಶೋಧಕರ ವಿದ್ಯಾರ್ಥಿ ಸಂಘ ಬೆಂಗಳೂರು (ಎಸ್ಐಸಿಎಎಸ್ಎ) ವತಿಯಿಂದ ನಡೆಯುತ್ತಿರುವ ಎರಡು ದಿನಗಳ ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ ‘ಅಭ್ಯುದಯ 2019’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಿಂದ ಉದ್ಯಮದಲ್ಲಿ ಯಶ ಸಾಧಿಸಲು ಸಾಧ್ಯ. ಲೆಕ್ಕಪರಿಶೋಧಕರು ಉತ್ತಮ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕು. ಉದ್ಯಮ -ವ್ಯವಹಾರಗಳ ಯಶಸ್ಸಿಗೆ ಲೆಕ್ಕಪರಿಶೋಧಕರ ಪಾತ್ರ ಮಹತ್ವದ್ದು ಎಂದು ಸಲಹೆ ನೀಡಿದರು.

ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಲೆಕ್ಕಪರಿಶೋಧಕರು ಕೂಡ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಉದ್ಯಮ ಮತ್ತು ವ್ಯವಹಾರಗಳಲ್ಲಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಐಐಎಂನ ಮುಖ್ಯಸ್ಥ ಪ್ರೊ. ಕೆ. ಕುಮಾರ್ ಅಭಿಪ್ರಾಯಪಟ್ಟರು. ಲೆಕ್ಕ ಪರಿಶೋಧಕರು ಆರ್ಧಿಕ ಚಟುವಟಿಕೆಗಳನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಉದ್ಯಮಗಳಲ್ಲಿ ಉಂಟಾಗುವಂತಹ ಸವಾಲುಗಳನ್ನು ಬಗೆಹರಿಸುವಂತಹ ಜವಾಬ್ದಾರಿ ಕೂಡ ಲೆಕ್ಕ ಪರಿಶೋಧಕರ ಮೇಲಿದೆ ಎಂದು ಅವರು ಹೇಳಿದರು.

ಇನ್ನು ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿ ಉತ್ತಿರ್ಣರಾಗುವುದಲ್ಲ. ಉತ್ತಮ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಇಂತಹ ಶಿಕ್ಷಣವನ್ನು ಪಾಧ್ಯಾಪಕರು ತಮ್ಮ ವೃತ್ತಿ ಬದುಕಿನ ಸವಾಲು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ವೃತ್ತಿಪರರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು. ಲೆಕ್ಕ ಪರಿಶೋಧಕರು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳನ್ನು ಹೊಂದಿದ್ದಾರೆ. ಬ್ಯಾಂಕಿಂಗ್, ಕಾರ್ಪೊರೇಟ್ ಸೆಕ್ಟರ್, ಎಂಎನ್ಸಿ ಕಂಪೆನಿ ಸೇರಿದಂತೆ ವಿವಿಧ ಉದ್ಯಮ, ವ್ಯವಹಾರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಪ್ರತಿ ದಿನವೂ ಇಲ್ಲಿ ಹೊಸತನವನ್ನು ಕಲಿಯಬೇಕಾಗುತ್ತದೆ. ಹೊಸ ಹೊಸ ಯೋಜನೆಗಳತ್ತ ಗಮನ ಕೂಡ ಹರಿಸಬೇಕಾಗುತ್ತದೆ ಎಂದರು.

ಚಾರ್ಟೆಡ್ ಆಕೌಂಟೆಂಟ್ ಕೋರ್ಸ್ಗೆ ಸೇರುವುದೇ ದೊಡ್ಡ ಕೆಲಸ. ಇಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ನqಸಬೇಕು. ಅಲ್ಲದೆ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು, ವೃತ್ತಿಪರತೆಯನ್ನು ಕಾಯ್ದುಕೊಂಡು ಸುಂದರ ಜೀವನವನ್ನು ರೂಪಿಸಿಕೊಳ್ಳಿ ಎಂದು ಚಾರ್ಟೆಡ್ ಆಕೌಂಟೆAಟ್ ಕೋರ್ಸ್ಗೆ ಸೇರಿರುವ ವಿದ್ಯಾರ್ಥಿಗಳಿಗೆ ಪ್ರೊ. ಕೆ. ಕುಮಾರ್ ಸಲಹೆ ನೀಡಿದ್ರು.

ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಗೋಲ್ಡ್ಮ್ಯಾನ್ ಸಾಚ್ಸ್ನ ಎಂ.ಡಿ. ಸಾತಿಯಾ ಪದ್ಮನಾಭನ್ ಅವರು ಸಿಎ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊAಡರು. ಕಠಿಣ ಶ್ರಮ, ಏಕಾಗ್ರತೆ ಮತ್ತು ಬದ್ಧತೆಯಿಂದ ಓದಿದ್ರೆ ಮಾತ್ರ ಲೆಕ್ಕ ಪರಿಶೋಧಕನಾಗಬಹುದು. ನಾನು ೧೪ನೇ ಪ್ರಯತ್ನದಲ್ಲಿ ಚಾರ್ಟೆಡ್ ಆಕೌಂಟೆಂಟ್ ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಐಸಿಎಐನ ಮಾಜಿ ಅಧ್ಯಕ್ಷ ಕೆ. ರಘು ಮಾತನಾಡಿ, ಲೆಕ್ಕ ಪರಿಶೋಧಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಇದೆ. ಹಾಗೇ ಬೇರೆ ಬೇರೆ ದೇಶಗಳಲ್ಲಿ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆಯೂ ಇದೆ. ಹೀಗಾಗಿ ಸಿಎ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ್ರು. ಇನ್ನು ಸಿಎ ಪರೀಕ್ಷೆ ತುಂಬಾ ಕಠಿಣವಾಗಿರುತ್ತದೆ. ಆದ್ರೆ ಬದ್ಧತೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಸಿಎ ಪರೀಕ್ಷೆಯನ್ನು ಪಾಸ್ ಮಾಡಬಹುದು ಎಂದು ಹೇಳಿದರು.

ಅಭ್ಯುದಯ ಸಿಎ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಲೆಕ್ಕಪರಿಶೋಧಕರ ಪಾತ್ರ, ಸಿಎ ವೃತ್ತಿ ಭವಿಷ್ಯ ಮತ್ತು ತಂತ್ರಜ್ಞಾನ, ಭಾರತದ ಅರ್ಥಿಕತೆಗೆ ಜಿಎಸ್ಟಿಯ ಪರಿಣಾಮಗಳು, ಲೆಕ್ಕಪರಿಶೋಧಕ ವೃತ್ತಿಯ ಮೌಲ್ಯಗಳು, ಕಂಪೆನಿ ಕಾನೂನು ಮತ್ತು ಇತ್ತೀಚಿನ ಕಾಯ್ದೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಎಸ್ಐಆರ್ಸಿನ ಮುಖ್ಯಸ್ಥ ಜೋಮನ್ ಕೆ. ಜಾರ್ಜ್, ಎಸ್ಐಆರ್ಸಿನ ಪದಾಧಿಕಾರಿಗಳಾದ ಎಸ್. ಪನ್ನಾ ರಾಜ್, ಎ.ಬಿ. ಗೀತಾ, ಎಸ್ಐಆರ್ಸಿನ ಬೆಂಗಳೂರು ವಿಭಾಗದ ಚೇರ್ಮೆನ್ ಶಿವರಾಮ್ ಶಂಕರ್ ಭಟ್, ಎಸ್ಐಸಿಎಎಸ್ಎನ ಅಧ್ಯಕ್ಷೆ ಎಸ್. ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು. ಸಿಎ ವಿದ್ಯಾರ್ಥಿ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.