ಚಾಮರಾಜನಗರ ದುರಂತಕ್ಕೆ ದಿವ್ಯ ನಿರ್ಲಕ್ಷ್ಯ ಕಾರಣ: ಉಸ್ತುವಾರಿ ಸಮಿತಿ ಅಭಿಪ್ರಾಯ: ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್.

ಬೆಂಗಳೂರು,ಮಾರ್ಚ್,15,2022(www.justkannada.in):  ‘ಚಾಮರಾಜನಗರದಲ್ಲಿ 2021ರ ಮೇ2ರಂದು ಮಧ್ಯರಾತ್ರಿ ಹಾಗೂ 3ರ ಬೆಳಗಿನ ಜಾವದಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಬಳಲುತ್ತಿದ್ದ 24 ಒಳರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗಿದೆ. ಈ ಅಂಶವೇ ಅವರೆಲ್ಲರ ಸಾವಿಗೆ ಮುಖ್ಯ ಕಾರಣ ಎಂಬುದು ದೃಗ್ಗೋಚರವಾಗಿದೆ’ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರೂಪಿಸಿದ್ದ ಉಸ್ತುವಾರಿ ಸಮಿತಿ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ನ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣು ಗೋಪಾಲಗೌಡ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಈ ಸಮಿತಿಯು ತನ್ನ ವರದಿಯಲ್ಲಿ, ‘ಮೈಸೂರು ಜಿಲ್ಲೆಯ ಅಗತ್ಯ ಪೂರೈಸಿದ ನಂತರ ಉಳಿದ ಜಿಲ್ಲೆಗಳಿಗೆ ಆಮ್ಲಜನಕದ ಸಿಲಿಂಡರ್‌ ನೀಡಬೇಕು ಎಂದು ರೋಹಿಣಿ ಸಿಂಧೂರಿ ಆಮ್ಲಜನಕ ಭರ್ತಿ ಘಟಕಗಳಿಗೆ ನಿರ್ದೇಶಿಸಿದ್ದರು ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಅಂದಿನ ಸಮಯಕ್ಕೆ ಅವರು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ಸಮಿತಿಯು ಹಲವು ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದು,ಈ ಘಟನೆಯಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಗಳಿಗೆ ಸೂಕ್ತ ಪರಿಹಾರವನ್ನು ಕೋರ್ಟ್ ನಿಗದಿಪಡಿಸುತ್ತದೆ’ ಎಂದು ಹೇಳಿದೆ.Mysuru DC instructs officials concerned to focus more on patients with comorbidities

‘ಘಟನೆ ನಡೆದ ದಿನ, ಸ್ಥಳದಲ್ಲಿನ ವಿವರ ದಾಖಲೆಯಾಗಿರುವ ಸಿಸಿಟಿವಿ ಅಥವಾ ಡಿವಿಆರ್ ದೃಶ್ಯಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತಮ್ಮ ವಶದಲ್ಲಿಯೇ ಇರಿಸಿಕೊಂಡಿರಬೇಕು’ ಎಂದು ಸೂಚಿಸಿರುವ ಸಮಿತಿಯು, ‘ಆಮ್ಲಜನಕ ನೀಡಿಕೆ ಮತ್ತು ವಿತರಣೆಯಲ್ಲಿ ಸಮನ್ವಯ ಸಾಧಿಸಲು ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯಾ ಜಿಲ್ಲಾಧಿಕಾರಿ ಅಥವಾ ಅವರ ಅವರಿಗಿಂತಲೂ ಉನ್ನತ ಹುದ್ದೆಯ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದೂ ಸಲಹೆ ನೀಡಿದೆ.

ಮೈಸೂರಿನಲ್ಲಿರುವ ಆಮ್ಲಜನಕ ಬಾಟ್ಲಿಂಗ್ ಹಾಗೂ ಪುನರ್‌ ಭರ್ತಿ ಘಟಕಗಳಿಂದ ಅಗತ್ಯಕ್ಕನುಗುಣವಾಗಿ ರವಾನೆ ಮಾಡುವ ನಿಟ್ಟಿನಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು, ಕೇವಲ ಮೈಸೂರಿಗೆ ಮಾತ್ರವಲ್ಲದೆ, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಜೊತೆಗೂ ಸಮನ್ವಯ ಸಾಧಿಸಬೇಕು’ ಎಂದು ಹೇಳಿದೆ.

ಸಮಿತಿಯ ಹೆಚ್ಚುವರಿ ಸದಸ್ಯರಾಗಿ ಕೆ.ಎನ್.ಕೇಶವನಾರಾಯಣ, ಹೆಚ್ಚುವರಿ ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ.ರಮೇಶ್, ನಿವೃತ್ತ ಐಎಎಸ್ ಅಧಿಕಾರಿ ಎ.ಪಿ.ಬಳಿಗಾರ ಇದ್ದರು.

ಶಿಫಾರಸಿನ ಮುಖ್ಯಾಂಶಗಳು

ಎಲ್ಲಾ ಆಸ್ಪತ್ರೆಗಳಲ್ಲಿ ಅಮ್ಲಜನಕವನ್ನು 24 ಗಂಟೆಗಳಿಗಿಂತಲೂ ಮುಂಚೆಯೇ ಕನಿಷ್ಠ ತುರ್ತು ಸಂಗ್ರಹ ಮಾಡಿ ಅದು ಸಿಗುವಂತಾಗುವ ಭರವಸೆ ನೀಡಬೇಕು.

ದಾಖಲೆಗಳ ನಿರ್ವಹಣೆ, ಅಮ್ಲಜನಕದ ದಾಸ್ತಾನು ಹಾಗೂ ಅದರ ಬಳಕೆ ಹಾಗೂ ಉಳಿಕೆಯ ಪ್ರಕ್ರಿಯೆಗಳು ರಾಜ್ಯದಾದ್ಯಂತ ಏಕರೂಪ ಹೊಂದಿರಬೇಕು. ಅಮ್ಲಜನಕದ ಉಳಿಕೆ, ದಾಸ್ತಾನುಗಳ ವಿವರಗಳು ಆಸ್ಪತ್ರೆಗಳ ಡಿಜಿಟಲ್ ಮಾಧ್ಯಮದಲ್ಲಿ ಪ್ರದರ್ಶಿಸುವಂತಾಗಬೇಕು.

ವೈದ್ಯಕೀಯ ಉದ್ದೇಶಗಳಿಗೆ ಅನುಗುಣವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಹೊತ್ತೊಯ್ಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಿರಬೇಕು. ಅಂತಹ ಟ್ರಕ್ಕುಗಳು ಸಂಪೂರ್ಣ ಹೊದಿಕೆ ಹೊದ್ದಿರಬೇಕು. ಟ್ರಕ್ಕುಗಳು ಹೊರಡುವ ಸ್ಥಳದಿಂದಲೇ ಸಂಪೂರ್ಣ ಸೀಲ್ ಆಗಿ ತೆರಳಬೇಕು. ರವಾನೆದಾರ ಮಾತ್ರವೇ ಅದನ್ನು ತೆರೆಯಲು ಅವಕಾಶವಿರಬೇಕು,

ಮೈಸೂರಿನಲ್ಲಿರುವ ಮೆಸರ್ಸ್ ತ್ರಿನೇತ್ರ ಬಾಟ್ಲಿಂಗ್ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ವಿಪತ್ತಿನ ಸಮಯದಲ್ಲಿ ಸರ್ಕಾರ ಇದನ್ನು ವಶಕ್ಕೆ ಪಡೆದು ಪುನರುಜೀವನಗೊಳಿಸುವ ಬಗ್ಗೆ ಪರಿಣಾಮಕಾರಿ ಹೆಜ್ಜೆ ಇರಿಸಬಹುದು.

ಪ್ರತಿ ಆಸ್ಪತ್ರೆಯಲ್ಲೂ ಮಾನವ ಸಂಪನ್ಮೂಲದ ಜೊತೆಗೆ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ನಿಗಾ ವಹಿಸಬೇಕು.

ಕೃಪೆ..

 ಪ್ರಜಾವಾಣಿ.

Key words: Chamarajanagar- oxygen -disaster-covid-Committee