ಸೆಲೆಬ್ರೆಟಿ ಜೋಡಿ ರಘು ದೀಕ್ಷಿತ್-ಮಯೂರಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಬೆಂಗಳೂರು,ಜೂನ್ 13, 2019 (www.justkannada.in): ಗಾಯಕ ರಘು ದೀಕ್ಷಿತ್, ಹಾಗೂ ಡ್ಯಾನ್ಸರ್ ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿದ್ದರು.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಗಾಯಕ ರಘು ದೀಕ್ಷಿತ್ ವಿರುದ್ಧ ಚಿನ್ಮಯಿ ಶ್ರೀ ಪಾದ್ ಎಂಬ ಗಾಯಕಿ ಗಂಭೀರ ಆರೋಪ ಮಾಡಿದ್ದರು. ರಘು ದೀಕ್ಷಿತ್ ತನ್ನ ಸ್ನೇಹಿತೆಯಾಗಿರುವ ಒಬ್ಬ ಗಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಿನ್ಮಯಿ ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಘು ದೀಕ್ಷಿತ್ ಆರೋಪದ ಬಗ್ಗೆ ನನಗೆ ವಾಸ್ತವವಾಗಿ ಅರಿವಿದೆ. ಹೀಗಾಗಿ ಈ ಘಟನೆಯ ನನ್ನ ಕಡೆಯ ಸಂಗತಿಯನ್ನು ಹೇಳಿಕೊಳ್ಳಲು ಬಯಸುತ್ತೇನೆ ಮತ್ತು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು.