ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿಎಸ್ ವೈ ರಾಜೀನಾಮೆಗೆ ಆಗ್ರಹಿಸಿದ ಎಎಪಿ….

ಬೆಂಗಳೂರು,ಜನವರಿ,6,2021(www.justkannada.in): ಭೂ ಹಗರಣಗಳ ಗುರುತರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಷ್ಪಕ್ಷಪಾತ ತನಿಖೆ ಎದುರಿಸಲು ರಾಜೀನಾಮೆ ನೀಡುವಂತೆ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ.jk-logo-justkannada-mysore

ಬೆನ್ನಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ ಸೇರಿದಂತೆ ದೇವರಬೀಸನ ಹಳ್ಳಿ ಹಾಗೂ ಬೆಳ್ಳಂದೂರು ಸುತ್ತಮುತ್ತಲ ಗ್ರಾಮಗಳಲ್ಲಿ 4.34 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಿನೋಟಿಫಿಕೇಶನ್ ಕರ್ಮಕಾಂಡ ಬಗೆದಷ್ಟು ಹೊರಗೆ ಬರುತ್ತಿದೆ. ಗಂಗೇನಹಳ್ಳಿ ಮಠದ ಹಳ್ಳಿ ಬಳಿಯ 1 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ಡಿನೋಟಿಫಿಕೇಶನ್ ಮಾಡಿರುವ ಪ್ರಕರಣವನ್ನು ರದ್ದು ಮಾಡದಂತೆ ಹೈಕೋರ್ಟ್ ಜನವರಿ 5, 2021 ರಂದು ತೀರ್ಪು ನೀಡಿದ್ದು  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ನಿಷ್ಪಕ್ಷಪಾತ ತನಿಖೆ ಎದುರಿಸಲು ಈ ಕೂಡಲೇ ರಾಜೀನಾಮೆ ನೀಡಬೇಕಾಗಿ ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.

ಬುಧವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಬೆನ್ನಿಗಾನಹಳ್ಳಿ  ಪ್ರಕರಣವನ್ನು ಸುಪ್ರೀಂ ಕೋರ್ಟ್ ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಿತ್ತು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸದ ಕಾನೂನು ವಿಭಾಗ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಯಡಿಯೂರಪ್ಪ ಅವರ ಅನೇಕ ಹಗರಣಗಳು ಹೊರಗೆ ಬರದಂತೆ ಹೀಗೆ ತಡೆದಿರುವ ಅನುಮಾನ ಇದೆ ಎಂದು ಹೇಳಿದರು.

ಡಿಸೆಂಬರ್ 22, ಮತ್ತು ಜನವರಿ 5ರಂದು, ಕೇವಲ 15 ದಿನಗಳ ಅಂತರದಲ್ಲಿ ಹೈಕೋರ್ಟಿನಿಂದ ಚೀಮಾರಿ ಹಾಕಿಸಿಕೊಂಡಿರುವ ಮುಖ್ಯಮಂತ್ರಿಯೊಬ್ಬರು ಈ ರೀತಿ ಗುರುತರ ಆರೋಪದಲ್ಲಿ ಸಿಕ್ಕಿಬಿದ್ದಿರುವುದು. ಆದ ಕಾರಣ ಈ ಪ್ರಕರಣದ ತನಿಖೆಯನ್ನು ವಿಶೇಷ ಪೊಲೀಸ್ ಹಾಗೂ ನ್ಯಾಯಾಂಗ ತಂಡ ರಚಿಸಿ ಅದರ ನಿಗಾವಣೆಯಲ್ಲಿ ಇಡಬೇಕು. ಅಧಿಕಾರದ ಕೇಂದ್ರದ ಉನ್ನತ ಸ್ಥಾನದಲ್ಲಿ ಇರುವ ಯಡಿಯೂರಪ್ಪ ಅವರು ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ  ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಅಸಾಧ್ಯ ಎಂದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು ಮಾತನಾಡಿ, ಮಠದಹಳ್ಳಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಡಿನೋಟಿಫಿಕೇಶನ್ ಆಗಿರುವುದು ಬೆಳಕಿಗೆ ಬಂದಿದೆ . ಇದೆಲ್ಲವನ್ನು ಗಮನಿಸಿದರೆ ಮೂರು ಪಕ್ಷಗಳು ಭೂ ಹಗರಣದಲ್ಲಿ ಇವೆ, ಇವ್ಯಾವೂ ಕೂಡ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸದೆ ಜನರಿಗೆ ಮೋಸಮಾಡುತ್ತಿವೆ ಎಂದರು.

ಮುಖ್ಯಮಂತ್ರಿಗಳಾಗಿದ್ದ ವೇಳೆಯಲ್ಲೇ ಜೈಲು ಸೇರಿದ ಭಾರತದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕದ ಹೆಸರಿಗೆ ಮಸಿ ಬಳಿದಿದ್ದರು, ಕರ್ನಾಟಕದ ಹೆಸರನ್ನು ಮತ್ತೊಮ್ಮೆ ಕುಲಗೆಡಿಸದೆ, ಮುಕ್ಕೋಟಿ ಕನ್ನಡಿಗರಿಗೆ ಅವಮಾನ ಮಾಡಿ, ಜೈಲಿಗೆ ಹೋಗುವ ಮೊದಲೇ ಮೊದಲೇ ಒಳ್ಳೆಯ ನಿರ್ಧಾರ ಮಾಡಿ ಎಂದು ಸಲಹೆ ನೀಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಮುಖ್ಯ ವಕ್ತಾರ ಶರತ್ ಖಾದ್ರಿ ಉಪಸ್ಥಿತರಿದ್ದರು.

Key words:  case –denotification-AAP -demanding -resignation – CM BS Yeddyurappa