ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ನಡೆಸಲು ತನ್ನಿಂದ ಸಾಧ್ಯವಿಲ್ಲವೆಂದ ಮೈಸೂರು ನಗರ ಪೊಲೀಸ್‌ ಆಯುಕ್ತ

ಮೈಸೂರು:ಜುಲೈ-28:(www.justkannada.in) ಕಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಿರಿಯ ಪೊಲಿಸ್ ಅಧಿಕಾರಿ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹೌದು. ಹಿರಿಯ ಪೊಲೀಸ್‌ ಅಧಿಕಾರಿ ವಿರುದ್ಧ ತಾನು ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ , ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಭೂ ಅವ್ಯವಹಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಪೊಲಿಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ವಿರುದ್ಧ ಹಾಲಿ ನಗರ ಪೊಲೀಸ್‌ ಆಯುಕ್ತನಾಗಿರುವ ನಾನು ತನಿಖೆ ನಡೆಸಿ ವರದಿ ನಿಡುವುದು ಸಾಧ್ಯವಿಲ್ಲ ಎಂದು ಡಿಜಿ ಮತ್ತು ಐಜಿಗೆ ಪತ್ರ ಬರೆದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿನಕಲ್‌ನಲ್ಲಿ ಅಕ್ರಮವಾಗಿ ನಿವೇಶನ ಖರೀದಿ ಮಾಡಿ ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ದೂರುದಾರ ಗಂಗರಾಜು ಅವರು ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನ ಮೇರೆಗೆ ಲಕ್ಷ್ಮೇಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ ಲಕ್ಷ್ಮೇಪುರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿರುವ ವಿಚಾರದ ಬಗ್ಗೆ ಅನುಮಾನಗೊಂಡ ದೂರುದಾರ ಗಂಗರಾಜು ಅವರು ರಾಜ್ಯ ಪೊಲೀಸ್‌ ಇಲಾಖೆಯ ಡಿಜಿ ಮತ್ತು ಐಜಿಗೆ ಪತ್ರ ಬರೆದು ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಡಿಜಿ ಮತ್ತು ಐಜಿ ಅವರು ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮತ್ತೆ ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಅವರಿಗೆ ಸೂಚನೆ ನೀಡಿದ್ದರು. ಡಿಜಿ ಅವರ ಪತ್ರಕ್ಕೆ ಉತ್ತರಿಸಿದ ಆಯುಕ್ತರು, ”ಆರೋಪದಲ್ಲಿ ಯಾವುದೇ ಹುರುಳಿಲ್ಲ ಹಾಗಾಗಿ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ ಎಂದು ಉತ್ತರಿಸಿದ್ದರು.

ಆದರೆ ಈ ಉತ್ತರದಿಂದ ಅಸಮಾಧಾನಗೊಂಡ ದೂರುದಾರ ಗಂಗರಾಜು, ಸುಬ್ರಹ್ಮಣ್ಯೇಶ್ವರ ರಾವ್‌ ಅವರು ಮೇಲಧಿಕಾರಿಗಳು ಮತ್ತು ಸರಕಾರಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿ ಪ್ರಕರಣದ ಎಲ್ಲಾ ದಾಖಲೆಗಳೊಂದಿಗೆ ಲಗತ್ತಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಅವರು ಗೃಹ ಕಾರ್ಯದರ್ಶಿಗೆ ರವಾನಿಸಿದ್ದರು. ಗೃಹ ಕಾರ್ಯದರ್ಶಿಯವರು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಡಿಜಿ ಮತ್ತು ಐಜಿ ಅವರು ಈಗಿನ ಮೈಸೂರು ನಗರ ಪೊಲೀಸ್‌ ಆಯುಕ್ತರಾದ ಕೆ.ಟಿ. ಬಾಲಕೃಷ್ಣ ಅವರಿಗೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಪತ್ರಕ್ಕೆ ನಗರ ಪೊಲೀಸ್‌ ಆಯುಕ್ತರು ಉತ್ತರ ನೀಡಿದ್ದು, ಹಿಂದಿನ ಪೊಲೀಸ್‌ ಆಯುಕ್ತರಾಗಿದ್ದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಅವರು ಜೇಷ್ಠತೆಯಲ್ಲಿ ನನಗಿಂತ ಹಿರಿಯ ಅಧಿಕಾರಿಯಾಗಿದ್ದು, ನಾನು ಅವರ ವಿರುದ್ಧ ವಿಚಾರಣೆ ಮಾಡುವುದು ನಿಯಮಾನುಸಾರ ಸೂಕ್ತವಾಗಿರುವುದಿಲ್ಲ. ಆದ್ದರಿಂದ ಸದರಿ ಅರ್ಜಿಯನ್ನು ಅವರಿಗಿಂತ ಉನ್ನತ ಶ್ರೇಣಿಯ ಅಧಿಕಾರಿಗಳಿಂದ ವಿಚಾರಣೆ ನಡೆಸುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ನಡೆಸಲು ತನ್ನಿಂದ ಸಾಧ್ಯವಿಲ್ಲವೆಂದ ಮೈಸೂರು ನಗರ ಪೊಲೀಸ್‌ ಆಯುಕ್ತ
Can’t probe my senior, says City Top Cop

Can a junior Police officer investigate a criminal case against his senior? No, says the rule book. There is a written rule in this regard in the Police Manual and as per the set tradition, the junior officer will not subject his superior officer to any investigation.