ಅನರ್ಹ ಶಾಸಕರಿಗೆ  ಸ್ಪರ್ಧೆಗೆ ಅವಕಾಶ ನೀಡಿ: ಇಲ್ಲವಾದ್ರೆ ಚುನಾವಣೆಗೆ ತಡೆ ನೀಡಿ- ಸುಪ್ರೀಂಕೋರ್ಟ್  ನಲ್ಲಿ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ..

ನವದೆಹಲಿ,ಸೆ,23,2019(www.justkannada.in): ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ. ಇಲ್ಲವಾದ್ರೆ ಚುನಾವಣೆ ಅಧಿಸೂಚನೆಗೆ ತಡೆ ನೀಡಿ ಎಂದು ಸುಪ್ರೀಂಕೋರ್ಟ್  ನಲ್ಲಿ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು.

ಸ್ಪೀಕರ್ ನೀಡಿರುವ ಅನರ್ಹತೆ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನ ಎನ್.ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಈ ನಡುವೆ ಅನರ್ಹ ಶಾಸಕರ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ,  ಶಾಸಕರ ರಾಜೀನಾಮೆ ಅಂಗೀಕರಿಸದೆ ಸ್ಪೀಕರ್ ಅನರ್ಹ ಗೊಳಿಸಿದ್ದಾರೆ. ನೋಟೀಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮವಿದೆ. ಆದರೆ ವಿಚಾರಣೆ  ನಡೆಸದೆ ರಾಜೀನಾಮೆಯನ್ನ ಅಂಗೀಕರಿಸದೆ ಶಾಸಕರನ್ನ ಅನರ್ಹಗೊಳಿಸಲಾಗಿದೆ. ಇದು ಪೂರ್ವಾಗ್ರಹ ಪೀಡಿತವಾದದ್ದು ಎಂದು ಹೇಳಿದರು.

ಹಾಗೆಯೇ ಅನರ್ಹ ಶಾಸಕರು ವಿಧಾನಸಭೆ ಅಂತ್ಯದವರೆಗೆ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್  ಆದೇಶಿಸಿದ್ದಾರೆ. ಚುನಾವಣಾ ಆಯೋಗವೂ ಸಹ  ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿದೆ. ಇನ್ನು ಸ್ಪೀಕರ್ ನೀಡಿರುವ ಆದೇಶ ಕಾನೂನು ಬಾಹಿರ. ಹೀಗಾಗಿ ಸ್ಪರ್ಧೆಗೆ ಅವಕಾಶ ನೀಡಿ. ಇಲ್ಲವಾದರೇ ಚುನಾವಣೆಗೆ ತಡೆ ನೀಡಿ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ  ಮನವಿ ಮಾಡಿದರು.

ಜತೆಗೆ ಶಾಸಕರ ಮನವಿಯನ್ನ ಸ್ಪೀಕರ್ ಪುರಸ್ಕರಿಸಲಿಲ್ಲ. ನೋಟೀಸ್ ಗೆ ಉತ್ತರಿಸಲು 7 ದಿನಗಳ ಕಾಲ ಅವಕಾಶ ನೀಡಬೇಕಿತ್ತು. ಆದರೆ ಮೂರು ದಿನಗಳ ಕಾಲ ಮಾತ್ರ ಕಾಲಾವಕಾಶ ನೀಡಿದ್ದಾರೆ. ಯಾವುದೇ ವಿಚಾರಣೆ ನಡೆಸದೆ ಶಾಸಕರನ್ನ ಅನರ್ಹಗೊಳಿಸಲಾಗಿದೆ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.

Key words: by-election-chance –compete-disqualified MLA-  Advocate -Mukul Rohtagi – Supreme Court