ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಅವರ ದಾರಿದೀಪ ಅಭಿನಂದನಾ ಗ್ರಂಥ ಬಿಡುಗಡೆ ………

ಬೆಂಗಳೂರು,ಅ,29,2019(www.justkannada.in): ಉದ್ಯಮಿ, ಸಮಾಜ ಸೇವಕ ಕೆ. ಪ್ರಕಾಶ್ ಶೆಟ್ಟಿಯವರ 60ರ ಹುಟ್ಟು ಹಬ್ಬ ಸಂಭ್ರಮದ ದಾರಿ ದೀಪ ಅಭಿನಂದನಾ ಗ್ರಂಥವನ್ನು ಆರ್.ಎನ್.ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಆರ್.ಎನ್. ಶೆಟ್ಟಿಯವರು ಬಿಡುಗಡೆ ಮಾಡಿದರು.

ಬೆಂಗಳೂರು ಬಂಟರ ಸಂಘದ ವತಿಯಿಂದ ನಡೆದ ದೀಪಾವಳಿ ಸಂಭ್ರಮ ಮತ್ತು ಕೆ. ಪ್ರಕಾಶ್ ಶೆಟ್ಟಿಯವರ ಅಭಿನಂದನಾ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದ ಬಳಿ ಇರುವ ಬಂಟರ ಸಂಘದ ಭವನದಲ್ಲಿ ಅದ್ದೂರಿಯಾಗಿ ನಡೆಯಿತ್ತು. ಸಮಾಜಕ್ಕೆ ಮತ್ತು ಸಮುದಾಯಕ್ಕೆ ನೀಡಿರುವ ಅನನ್ಯ ಕೊಡುಗೆಗೆ ಬೆಂಗಳೂರು ಬಂಟರ ಸಂಘ ಈ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದೆ. ಕೆ. ಪ್ರಕಾಶ್ ಶೆಟ್ಟಿಯವರು ನಡೆದು ಬಂದ ಹಾದಿ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಬೇಕು ಅನ್ನೋ ನಿಟ್ಟಿನಲ್ಲಿ ಈ ಅಭಿನಂದನಾ ಗ್ರಂಥದ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರಕಾಶ್ ಶೆಟ್ಟಿಯವರು ಹೊಟೇಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಮ್ಮ ಬದ್ಧತೆ, ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇರು ಮಟ್ಟಕ್ಕೆ ಬೆಳೆದಿದ್ದಾರೆ. ಕೇವಲ ಸಮುದಾಯ ಮಾತ್ರವಲ್ಲ, ಸಮಾಜಕ್ಕೂ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈಗಾಗಲೇ ದೇಶದ ಪ್ರಮುಖ ನಗರದಲ್ಲಿ ಅವರ ಹೊಟೇಲ್‍ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿವೆ. ಮುಂದಿನ ದಿನಗಳಲ್ಲಿ ಅವರ ಹೊಟೇಲ್ ಉದ್ಯಮ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿದ್ರು.

ಬಂಟರು ಎಂಟೆದೆಯ ಬಂಟರು. ತಮ್ಮ ಕುಲಕ್ಕೆ ತಕ್ಕಂತೆ ಅವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಬಂಟ ಅಂದ್ರೆ ಜೀವಕ್ಕೆ ಜೀವ ಕೊಡುವ ಗೆಳೆಯರು ಎಂದರ್ಥ. ಕರಾವಳಿ ಜನ ಸಾಹಸಿಗರು. ಹೀಗಾಗಿ ಪ್ರಕಾಶ್ ಶೆಟ್ಟಿಯವರು ಕೂಡ ಸಾಹಸದಿಂದ ಧೈರ್ಯದಿಂದ ತಮ್ಮ ಉದ್ಯಮವನ್ನು ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ರು.

ಇನ್ನು ಉಡುಪಿ ಜಿಲ್ಲೆಯನ್ನು ಪ್ರವಾಸಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಪ್ರಕಾಶ್ ಶೆಟ್ಟಿಯವರು ಕೂಡ ಸಾಥ್ ನೀಡುತ್ತಿದ್ದಾರೆ ಎಂದರು. ಇದೇ ವೇಳೆ ಕರಾವಳಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದ್ರು. ಈಗಾಗಲೇ ವೀರೇಂದ್ರ ಹೆಗ್ಗಡೆಯವರು 25 ಕೋಟಿ ರೂಪಾಯಿ ನೆರೆ ಪೀಡಿತ  ಸಂತ್ರಸ್ಥರಿಗೆ ನೀಡಿದ್ದಾರೆ. ಇದೀಗ ಕರಾವಳಿಯಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಅಂಬರೀಷ್ ಅವರಿಗೆ ಬಂಟ ಸಮುದಾಯದ ಸಾಕಷ್ಟು ಸ್ನೇಹಿತರಿದ್ದರು. ಅದ್ರಲ್ಲಿ ಪ್ರಕಾಶ್ ಶೆಟ್ಟಿ ಕೂಡ ಒಬ್ಬರು. ಪ್ರಕಾಶ್ ಶೆಟ್ಟಿ ಮತ್ತು ಅಂಬರೀಷ್ ಅವರ ನಡುವಿನ ಒಡನಾಟ ತುಂಬಾ ವರ್ಷಗಳದ್ದು. ಪ್ರಕಾಶ್ ಶೆಟ್ಟಿಯವರು ಉದ್ಯಮದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ, ಸಮಾಜಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡಲಿ ಎಂದು ಹಾರೈಸಿದ್ರು. ಹಾಗೇ ಸುಮಲತಾ ಅವರು ತುಳು ಭಾಷೆಯಲ್ಲಿ ಮಾತು ಆರಂಭಿಸಿ ತುಳು ಭಾಷೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ್ರು.

ನಂತರ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು, ಪ್ರಕಾಶ್ ಶೆಟ್ಟಿಯವರು ಬೆಳೆದು ಬಂದ ಹಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಗೋಲ್ಡ್ ಫಿಂಚ್ ಹೊಟೇಲ್ ಮೂಲಕ ಪ್ರಕಾಶ್ ಶೆಟ್ಟಿಯವರು ಉದ್ಯಮವನ್ನು ಅತೀ ಎತ್ತರಕ್ಕೆ ಬೆಳೆಸಿರುವುದರ ಹಿಂದೆ ಅವರ ಬದ್ಧತೆ, ಪರಿಶ್ರಮವಿದೆ. ಹಾಗೇ ಯಶಸ್ವಿ ಉದ್ಯಮಿಯಾದ್ರೂ, ಸಮುದಾಯ ಮತ್ತು ಸಮಾಜಕ್ಕೆ ಅವರ ಕೊಡುಗೆ ಅನನ್ಯ ಎಂದು ಹೇಳಿದ್ರು.

ಇನ್ನು ಬಂಟ ಸಮುದಾಯ ಪ್ರಪಂಚದ ಮೂಲೆ ಮೂಲೆಯಲ್ಲಿ ಸಿಗುತ್ತಾರೆ. ಬಂಟರಲ್ಲಿ ನಾಯಕತ್ವದ ಗುಣಗಳಿವೆ. ಆಡು ಮುಟ್ಟದ ಸೊಪ್ಪಿಲ್ಲ, ಬಂಟರಿಲ್ಲದ ಕ್ಷೇತ್ರವಿಲ್ಲ ಎಂದ ಸಚಿವ ಡಿ.ವಿಎಸ್, ರಾಜಕೀಯ, ಸಿನಿಮಾ, ಹೊಟೇಲ್ ಉದ್ಯಮ, ಸಾಂಸ್ಕøತಿಕ, ಕ್ರೀಡೆ ಹೀಗೆ ಪ್ರತಿಯೊಂದು ರಂಗದಲ್ಲೂ ಬಂಟರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ರು.

ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಆರ್‍ಎನ್‍ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆರ್.ಎನ್. ಶೆಟ್ಟಿಯವರು ಉದ್ಯಮಿ ಕೆ. ಪ್ರಕಾಶ್ ಶೆಟ್ಟಿಯವರಿಗೆ ಶುಭ ಹಾರೈಸಿದ್ರು. ಇದೇ ವೇಳೆ ಕೆ. ಪ್ರಕಾಶ್ ಶೆಟ್ಟಿಯವರಿಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ 60 ವಿವಿಧ ಬಗೆಯ ವಸ್ತುಗಳಿಂದ ಸನ್ಮಾನ ಮಾಡಲಾಯಿತ್ತು. ಬೆಂಗಳೂರು ಬಂಟರ ಸಂಘದ ವತಿಯಿಂದ ಬೆಳ್ಳಿ ಕಿರೀಟವನ್ನು ನೀಡಿ ಗೌರವಿಸಲಾಯಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಪ್ರಕಾಶ್ ಶೆಟ್ಟಿಯವರು, ಬೆಂಗಳೂರು ಬಂಟರ ಸಂಘಕ್ಕೆ ನಾನು ಅಭಾರಿಯಾಗಿದ್ದೇನೆ. ಸಂಘಕ್ಕೆ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ನನ್ನ ಕೊಡುಗೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥವನ್ನು ಹೊರತಂದಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದ್ರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ, ಮುರಳೀಧರ ಹೆಗ್ಡೆ, ಯೂನಿಯನ್ ಬ್ಯಾಂಕ್ ನ ನಿವೃತ್ತ ಎಕ್ಸಿ ಕ್ಯೂಟಿವ್ ಡೈರೆಕ್ಟರ್ ಕೆ. ರತ್ನಕರ ಹೆಗ್ಡೆ ಹಾಗೂ ಸಂಘದ ಪದಾಧಿರಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Key words: Businessman- Prakash Shetty- releases –darideepa-book