ಶಿಕ್ಷಣ ಸಂಸ್ಥೆಗಳ ಜತೆ ಉದ್ಯಮಗಳ ಸಂಬಂಧ ಅಗತ್ಯ-ಸಚಿವ  ಅಶ್ವತ್ ನಾರಾಯಣ್.

ಬೆಂಗಳೂರು,ಫೆಬ್ರವರಿ,7,2022(www.justkannada.in): ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ನೂತನ ಶಿಕ್ಷಣ ನೀತಿಯು ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ. ಆದ್ದರಿಂದ ಉದ್ದಿಮೆಗಳು ಶಿಕ್ಷಣ ಸಂಸ್ಥೆಗಳ ಜೊತೆ ತಮ್ಮ ಅಗತ್ಯಗಳಿಗೆ ತಕ್ಕಂತೆ ರಚನಾತ್ಮಕ ಸಂಬಂಧ ಹೊಂದಬೇಕು ಎಂದು ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಸೋಮವಾರ ಇಲ್ಲಿ ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು ಆರಂಭಿಸಿರುವ ಉದ್ಯಮ ಪರಿಪೋಷಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ  ಅಶ್ವಥ್ ನಾರಾಯಣ್, ಬೆಂಗಳೂರು ನಗರವು ನವೋದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿ ಆಗಿದೆ. ಉದ್ದಿಮೆಗಳ ಬೆಳವಣಿಗೆಗೆ ಅಗತ್ಯವಿರುವ ಸಕಲ ಬಗೆಯ ನೆರವನ್ನೂ ನೀಡಲು ಸರಕಾರ ಮುಕ್ತ ಮನಸ್ಸು ಹೊಂದಿದೆ. ಈ ಸಂಬಂಧ ಈಗಾಗಲೇ ಹತ್ತಾರು ಉಪಯುಕ್ತ ನೀತಿಗಳನ್ನು ರೂಪಿಸಿದೆ ಎಂದರು.

ಒಕ್ಕೂಟವು ಸರಕಾರಕ್ಕಿಂತಲೂ ಕಡಿಮೆ ಶುಲ್ಕವನ್ನು ನಿಗದಿ ಪಡಿಸಿ ಉದ್ಯಮ ಪರಿಪೋಷಣೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಎನ್ಇಪಿ ಜಾರಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಉದ್ದಿಮೆಗಳ ಜತೆಗಿನ ಬಾಂಧವ್ಯಕ್ಕೆ ಮಹತ್ವ ಕೊಡಲಾಗಿದೆ ಎಂದು ಅವರು ಹೇಳಿದರು.

ಸರ್ಕಾರವು ಎಂಜಿನಿಯರಿಂಗ್ ಸೇರಿದಂತೆ ಸಮಗ್ರ ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು ತ್ವರಿತ ಗತಿಯಲ್ಲಿ ಮಾಡುತ್ತಿದೆ. ಇದರ ಜತೆಗೆ ಸಂಶೋಧನೆ ಮತ್ತು ನಾವೀನ್ಯತೆ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರು ನಗರವು ಉದ್ಯೋಗ ಸಂಸ್ಕೃತಿಯಲ್ಲಿ ಪ್ಯಾರಿಸ್ ಸೇರಿದಂತೆ ವಿಶ್ವದ ಅತ್ಯುತ್ತಮ ನಗರಗಳನ್ನು ಕೂಡ ಮೀರಿಸಬೇಕು. ಕರ್ನಾಟಕವು ಉಜ್ವಲ ಅವಕಾಶಗಳ ತಾಣವಾಗಿದ್ದು, ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ ಎಂದು ಸಚಿವರು ಹೇಳಿದರು. ಸಮಾರಂಭದಲ್ಲಿ ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: Business- educational-Minister -Ashwath Narayan.