ಈ ಬಾರಿಯ ಬಜೆಟ್ ಕೇಸರಿ ಬಜೆಟ್, ಜನರಿಗೆ ಉಪಯೋಗವಿಲ್ಲ- ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಟೀಕೆ.

ಮೈಸೂರು,ಮಾರ್ಚ್.5.2022(www.justkannada.in): ಈ ಬಾರಿಯ ಬಜೆಟ್ ಕೇಸರಿ ಬಜೆಟ್ ಆಗಿದೆ. ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಕೈಗಾರಿಕಾ ವಿರೋಧಿ ಬಜೆಟ್ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಟೀಕಿಸಿದರು.

ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಕೇವಲ 27% ಮಾತ್ರ ಜನ ಸಾಮಾನ್ಯರಿಗೆ ತಲುಪುತ್ತದೆ. ಈ ಬಾರಿಯ ರಾಜ್ಯ ಬಜೆಟ್ ನ ಗಾತ್ರ ದೊಡ್ಡದಾಗಿದ್ದರೂ ಕೂಡ ಜನ ಸಾಮಾನ್ಯರಿಗೆ ಹೆಚ್ಚಿನ ಪ್ರಯೋಜ‌ನವಿಲ್ಲ. ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಸಾಲದ ಪ್ರಮಾಣ ಏರಿಕೆಯಾಗಿದೆ. ಜನರಿಗೆ ಅನುಕೂಲವಾಗುವ ಅಂಶಗಳು ಈ ಬಾರಿಯ ರಾಜ್ಯ ಬಜೆಟ್ ನಲ್ಲಿಲ್ಲ. ಮೈಸೂರಿಗೂ ಯಾವುದೇ ಕೊಡುಗೆ ನೀಡಿಲ್ಲ  ಎಂದು ಕಿಡಿಕಾರಿದರು.

ಕೆ. ಆರ್ ಆಸ್ಪತ್ರೆಯ ಉನ್ನತೀಕರಣಕ್ಕೆ 89 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಎಂ ಲಕ್ಷ್ಮಣ್, ಪ್ರತಾಪ್ ಸಿಂಹರವರೇ ನೀವು ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀರಿ. ಕೆ ಆರ್ ಆಸ್ಪತ್ರೆ ಉನ್ನತಿಕರಣಕ್ಕೆ ಹಣ ಬಿಡುಗಡೆ ಮಾಡಿಲ್ಲ. ಹಾಸ್ಟೆಲ್ ಕಟ್ಟಡ, ವಿಶ್ರಾಂತಿ ಗೃಹ, ಶಿಥಿಲಗೊಂಡ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಿರೋದು. ಮೂಲಸೌಕರ್ಯಕ್ಕೆ ಯಾವುದೇ ಹಣ ನೀಡಿಲ್ಲ.

ಏರ್ ಪೋರ್ಟ್ ವಿಚಾರದಲ್ಲೂ ಸಳ್ಳು ಹೇಳಿಕೆ ನೀಡ್ತಿದೀರಿ. ರನ್ ವೇ ವಿಸ್ತರಣೆಗಾಗಿ ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು 2 ಕಿ. ಮೀ ದೂರದಲ್ಲಿ ನಿರ್ಮಿಸಬೇಕು. ನಿಮ್ಮ ಕಾಲದಲ್ಲಿ ಇದು ಸಾಧ್ಯವಾಗುವುದಿಲ್ಲ. ಒಂದೆರಡು ಯೋಜನೆಗಳನ್ನು ಘೋಷಣೆ ಮಾಡಿಸಿ ನಾನೇ ಮಾಡಿಸಿದೆ ಎಂದು ಹೇಳ್ತದೀರಿ. ಈ ಮೂಲಕ ಬಿಜೆಪಿ ಶಾಸಕರ ಕೊಡುಗೆ ಏನು ಇಲ್ಲವೆಂಬ ಸಂದೇಶ ನೀಡಿದ್ದೀರಿ. ಜನ ಅರ್ಥ ಮಾಡಿಕೋಳ್ಳಬೇಕು ಬಿಜೆಪಿ ಶಾಸಕರ ಏನು ಮಾಡಿಲ್ಲ ಅಂತ ಅವರ ಸಂಸದರೇ ಹೇಳಿದ್ದಾರೆ ಎಂದು ಎಂ ಲಕ್ಷ್ಮಣ್  ಟಾಂಗ್ ನೀಡಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡುವ ಬದಲು ಯೋಜನೆಗೆ ಚಾಲನೆ ನೀಡಿ. ಮೇಕೆದಾಟು ವಿಚಾರ ನ್ಯಾಯಾಲಯದಲ್ಲಿದೆ ಎಂದು ಸಬೂಬು ಹೇಳುವುದನ್ನು ಬಿಡಿ. 9500 ಕೋಟಿ ಯೋಜನೆಗೆ 1000 ಕೋಟಿ ಬಿಡುಗಡೆ ಮಾಡಿದ್ದೇವೆ ಎಂಬುದು ಹಾಸ್ಯಾಸ್ಪದ. ಬಿಜೆಪಿ ಬೆಳೆಸುವ ಸಲುವಾಗಿ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿದ್ದೀರಿ. ಕೂಡಲೇ ಮೇಕೆದಾಟು ಯೋಜನೆಯನ್ನು ಆನುಷ್ಠಾನಗೊಳಿಸಿ ಎಂದು  ಎಂ ಲಕ್ಷ್ಮಣ್ ಆಗ್ರಹಿಸಿದರು.

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರದಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.  ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಉಕ್ರೇನ್ ನಲ್ಲಿ ನೆಲೆಸಿರುವ ಭಾರತೀಯರ ಮಾಹಿತಿ ನೀಡುವಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ. ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿಚಾರದಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ವಿಮಾನದಲ್ಲಿ ಬಂದವರನ್ನ ಸ್ವಾಗತ ಮಾಡಿ ಪೋಸ್ ಕೊಡ್ತಾ ಇದಾರೆ ಎಂದು ಟೀಕಿಸಿದರು.

Key words: budget-KPCC-spokesperson-M Laxman