ಎರಡು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹಣದ ಹೊಳೆ: ಕೇಂದ್ರದ ಬಳಿ ಅನುದಾನ ಕೇಳಲು ಅವರಿಗೆ ಧಮ್ ಇಲ್ಲ-ಮಾಜಿ ಸಿಎಂ  ಸಿದ್ಧರಾಮಯ್ಯ ವಾಗ್ದಾಳಿ.

 ವಿಜಯಪುರ,ಅಕ್ಟೋಬರ್,21,2021(www.justkannada.in):  ಕರ್ನಾಟಕದ ಬಿಜೆಪಿಗೆ ಧಮ್ ಇಲ್ಲ. ಅನುದಾನವನ್ನು ನಾವು ದೆಹಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ? ಧಮ್ ಇದ್ದಿದ್ರೆ ಪ್ರಧಾನಿ ಕಚೇರಿ ಮುಂದೆ 25 ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ಜತೆ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ಧರಾಮಯ್ಯ, ಜನರು ಸರ್ಕಾರದ ವಿರುದ್ಧ ತಿರುಗಿ ಬೀಳದೇ ಹೋದರೆ ಹೀಗೆಯೇ ಆಗೋದು. ಬೆಲೆ ಏರಿಕೆಯನ್ನು ಜನ ಸಹಿಸಿಕೊಂಡಿದ್ದರೆ ಅವರು ಏನು ತಿಳಿದುಕೊಳ್ತಾರೆ? ಜನ ಇವತ್ತು ಬಹಳ ಕಷ್ಟದಲ್ಲಿ ಇದ್ದಾರೆ. ಬೆಲೆ ಏರಿಕೆ ಕೂಡ ಉಪ ಚುನಾವಣೆಯಲ್ಲಿ ಒಂದು ಅಂಶ. ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ.‌ ಆದರೆ ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ ಎಂದರು.

ಕಾಂಗ್ರೆಸ್ ಪರವಾದ ಅಲೆ ಹಾನಗಲ್, ಸಿಂಧಗಿ ಕ್ಷೇತ್ರದಲ್ಲಿದೆ.  ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ  ಅವಹೇಳನಕಾರಿ ಮಾತುಗಳು ಬರುತ್ತವೆ ನಳೀನ್ ಕುಮಾರ್ ಕಟೀಲ್ ಜೋಕರ್ ಮಟ್ಟದವರು.  ಅವರಿಗೆ ತಲೆ ಕೆಟ್ಟಿದೆ ಎಂದು ಕಾಣುತ್ತದೆ. ಅವರು ಪ್ರಬುದ್ದ ರಾಜಕಾರಣಿ ಅಲ್ಲ ಎಂದು ಲೇವಡಿ ಮಾಡಿದರು.

ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು, ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯ ಮೃತ್ಯುಂಜಯ ಶ್ರೀಗಳ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ,  ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ  ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ನಾಯಕರು ಹೇಳಿದ್ದರು. ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಯದಾಯ ಬಿಜೆಪಿಗೆ ಪಾಠ ಕಲಿಸಲಿ ಎಂದು ಹೇಳಿದರು.

ರಮೇಶ್ ಕುಮಾರ್ ನ ಜೈಲಿಗೆ ಕಳಿಸುವೆ‌ ಎನ್ನುವ ಸುಧಾಕರ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ,  ದುಡ್ಡಿನ ಮದ ಅವರಿಗೆ. ಅವರು ಕಾಂಗ್ರೆಸ್ ನಿಂದ ಗೆದ್ದು ಬಿಜೆಪಿಗೆ ಹೋದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ದಿ ಕಲಿಸ್ತಾರೆ. ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ‌ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ.‌ ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದು ಟಾಂಗ್ ನೀಡಿದರು.

ಪೊಲೀಸರಿಗೆ ಸಮವಸ್ತ್ರ ಇರುವುದೇಕೆ?

ಆರ್ ಎಸ್ ಎಸ್ ನ್ನು ನಾನು ಟೀಕಿಸುವುದು ಅವರ ನಡವಳಿಕೆಗೆ. ಪೊಲೀಸರು ಹೋಗಿ ಕೇಸರಿ ಶಾಲು ಹಾಕಿಕೊಂಡರು. ಪೊಲೀಸರಿಗೆ ಸಮವಸ್ತ್ರ ಇರುವುದೇಕೆ? ಪೊಲಿಸರು ಕೇಸರಿ ಶಾಲು ಹಾಕಿಕೊಂಡಿದ್ದು ಪೂರ್ವ ನಿಯೋಜಿತ. ಎಲ್ಲರೂ ‌ ಒಂದೇ ಅಂಗಡಿಯಲ್ಲಿ ಖರೀದಿ‌ ಮಾಡಿದ್ದರೇ ? ಇವರು ಕೊಟ್ಟಿದ್ದಾರೆ, ಅವರು ಹಾಕಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ, ಅಭಿವೃದ್ಧಿ ಕೆಲಸ ಆಗದೇ ಇರುವುದು ಇವೆಲ್ಲವೂ ಪ್ರಚಾರದ  ಅಂಶಗಳೇ. ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು.‌ ಎಲ್ಲವನ್ನ‌ ಸಹಿಸಿಕೊಂಡ್ರೆ ಹೇಗೆ.‌‌ ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಹೀಗಾಗಿ  ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಏನೇ ಮಾಡಿದರೂ ಕೂಡ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ. ಜೆಡಿಎಸ್ ನವರಿಗೆ ಯಾವುದೇ ಸಿದ್ದಾಂತವಿಲ್ಲ.‌ ಅಲ್ಪ ಸಂಖ್ಯಾತರು ಬುದ್ದಿವಂತರಿದ್ದಾರೆ ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ ಮೇಲೂ ಸೆಕ್ಯುಲರ್ ಆಗ್ತಾರಾ ಜೆಡಿಎಸ್ ನವರು? ಅವರಿಗೆ ಅಲ್ಪ ಸಂಖ್ಯಾತರು ಏಕೆ ಮತ ನೀಡುತ್ತಾರೆ.

ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ.‌ಇಷ್ಟು ಮಾತ್ರ ಹೇಳ್ತಿನಿ. ಪ್ರಾದೇಶಿಕ ಪಕ್ಷ ನಿಜ: ಆದ್ರೆ ಜಾತ್ಯಾತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿ ಜಾತ್ಯಾತೀತ ಅಲ್ಲ, ಕೋಮುವಾದಿ. ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ. ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸುಲಭವಲ್ಲ. ಆದರೆ, ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ.

ಕೇಸರಿ ಕಂಡರೆ ಆರ್ ಎಸ್ ಎಸ್ ಕಂಡರೆ ನನಗೆ ಭಯ ಇಲ್ಲ.‌ ಆದರೆ ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ನನಗೆ ಅಷ್ಟೇ. ಸಮಾಜದ ಬಗ್ಗೆ ಕಾಳಜಿ ಅಷ್ಟೇ.

ಸಲೀಂ, ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರ್ಕಾರದ ಬಗ್ಗೆಯೇ ಮಾತನಾಡಿದ್ರು. ಅವರ ಮಾತು ಸರ್ಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ?. ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.‌ ಸಲೀಂ, ಉಗ್ರಪ್ಪ ಮಾತನ್ನು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಳು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್,  ಯಡಿಯೂರಪ್ಪ ಮಾತಾಡಿದ್ರಲ್ಲ ಅದಕ್ಕೆ ಉತ್ತರ ಕೊಡಲಿ ಎಂದು ಸಿದ್ಧರಾಮಯ್ಯ ಕುಟುಕಿದರು.

ಎರಡೂ ಕ್ಷೇತ್ರದಲ್ಲಿ ಹಣ ಹೊಳೆ ಹರಿಸ್ತಿದ್ದಾರೆ..

ಬಿಜೆಪಿಯವರು  ಹೇಡಿಗಳ ತರಹ ವರ್ತಿಸುತ್ತಾರೆ. ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣ ಹೊಳೆ ಹರಿಸ್ತಿದ್ದಾರೆ ಚುನಾವಣೆಯಲ್ಲಿ.‌ ಒಂದು ಓಟಿಗೆ ೨೦೦೦ ಕೊಡ್ತಿದ್ದಾರೆ ಅಂತ ಸುದ್ದಿ ಇದೆ. ಏನು ಕೆಲಸ ಮಾಡಿದಾರೆ ಅಂತ ಬಿಜೆಪಿಯವರು ಜನರ ಮುಂದೆ ನಿಂತು ಮತ ಕೇಳ್ತಾರೆ?  ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಜನ ಯಾಕೆ ಓಟು ಹಾಕ್ತಾರೆ ಇವರಿಗೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

Key words: BJP –money-by-election-Former CM- Siddaramaiah