ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಸೇರಿವ ಹಲವರು ಗೈರು..

ಮೈಸೂರು,ಆ,26,2019(www.justkannada.in): ಮೈಸೂರು ದಸರಾ ಪ್ರಾರಂಭ ಆದ್ರು ಭಿನ್ನರಾಗ ಮುಂದುವರೆದಿದ್ದು, ಸಚಿವ ಸ್ಥಾನ ಸಿಗದಿದ್ದಕ್ಕೆ ದಸರಾ ಕಾರ್ಯಕಾರಿ ಸಮಿತಿ ಸಭೆಗೆ ಗೈರಾಗುವ ಮೂಲಕ  ತಮ್ಮ ಅಸಮಾಧಾನ ಹೊರ ಹಾಕಿದ್ದ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಇದೀಗ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ.

ಗಜಪಡೆ ಸ್ವಾಗತ ಕಾರ್ಯಕ್ರಮದಿಂದ ಬಿಜೆಪಿ ಶಾಸಕ ಎಸ್ ಎ ರಾಮದಾಸ್, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅಳಿಯ ಹಾಗೂ ಬಿಜೆಪಿ ಶಾಸಕ ಹರ್ಷವರ್ಧನ್ ಗೈರಾಗಿದ್ದಾರೆ. ಇತ್ತ  ಕೆ ಮಹದೇವ್ ಹೊರತು ಪಡಿಸಿ ಜೆಡಿಎಸ್ ಕಾಂಗ್ರೆಸ್ ಶಾಸಕರೂ ಸಹ  ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ಹಂತದ 6 ಆನೆಗಳ ತಂಡ ಇಂದು ಮೈಸೂರು ಅರಮನೆ ಪ್ರವೇಶಿಸಿತು. ಈ ವೇಳೆ ಜಿಲ್ಲಾಡಳಿತ ವತಿಯಿಂದ ಗಜಪಡೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಗಜಪಡೆಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಿಗೆ  ಸಂಸದ ಪ್ರತಾಪ್ ಸಿಂಹ ,ಶಾಸಕ ನಾಗೇಂದ್ರ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಾಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಭಾಗಿಯಾಗಿದ್ದರು.

ಆದರೇ  ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಎಸ್.ಎ ರಾಮದಾಸ್ ದಸರಾ ಗಜಪಡೆ ಸ್ವಾಗತಕ್ಕು ಗೈರಾಗಿದ್ದಾರೆ. ಗಜಪಯಣದ ಕಾರ್ಯಕ್ರಮದಲ್ಲಿ ಸಚಿವರು ಬರುವ ಮುನ್ನವೇ ಪೂಜೆ ನೆರವೇರಿಸಿ ರಾಮದಾಸ್ ಮುಜುಗರಕ್ಕೊಳಗಾಗಿದ್ದರು. ಇದೀಗ ಜಿಲ್ಲಾಡಳಿತದ ಅಧಿಕೃತ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ರಾಮದಾಸ್ ಅವರು ಬಹಿರಂಗ ಅಸಮಾಧಾನ ಪ್ರದರ್ಶಿಸಿದ್ದಾರೆ. ಈ ಮೂಲಕ ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದಲ್ಲಿ ಇಡೀ ದಸರಾ ಕಾರ್ಯಕ್ರಮಗಳಿಗೆ ಗೈರಾಗುವ ಬಗ್ಗೆ ಶಾಸಕ ಎಸ್ ಎ ರಾಮದಾಸ್ ಎಚ್ಚರಿಕೆ ನೀಡಿದ್ದಾರೆ.

Key words: BJP MLA- SA Ramadas – absent-Gajapade- Welcome –Program-mysore