ಪೂರ್ಣ ಪ್ರಮಾಣದ ಸಂಪುಟ ರಚಿಸುವಲ್ಲಿ  ಬಿಜೆಪಿ ನಾಯಕರು ವಿಫಲ- ಜೆಡಿಎಸ್ ಮುಖಂಡ ರಮೇಶ್ ಬಾಬು ಕಿಡಿ…

ಬೆಂಗಳೂರು,ಆ,20,2019(www.justkannada.in0: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾಗಿದೆ. ಪೂರ್ಣ ಪ್ರಮಾಣದ ಹಾಗೂ ಎಲ್ಲಾ ವರ್ಗಗಳಿಗೆ, ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಬಿಜೆಪಿ ಪಕ್ಷವು ಮತ್ತು ಅದರ ನಾಯಕರು ವಿಫಲವಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಜೆಡಿಎಸ್ ಮುಖಂಡ ರಮೇಶ್ ಬಾಬು, ಇಂದು ಮುಖ್ಯಮಂತ್ರಿ ಸೇರಿದಂತೆ 18 ಸದಸ್ಯರ ಸಂಪುಟ ರಚಿಸಿದ್ದಾರೆ. ಆದರೆ ಜನರ ಆಶೋತ್ತರಗಳನ್ನು ತಲುಪಲು ಪೂರ್ಣ ಪ್ರಮಾಣದ ಹಾಗೂ ಎಲ್ಲಾ ವರ್ಗಗಳಿಗೆ, ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಬಿಜೆಪಿ ಪಕ್ಷವು ಮತ್ತು ಅದರ ನಾಯಕರು ವಿಫಲವಾಗಿದ್ದಾರೆ. ಇದರಿಂದ ರಾಜ್ಯದ ಪ್ರಗತಿ ಕುಂಠಿತವಾಗುತ್ತದೆ ಮತ್ತು ಆಡಳಿತ ಯಂತ್ರ ನಿದಾನವಾಗಲಿದೆ. ಬಿಜೆಪಿ ತಾನು ರಾಜ್ಯದ ಜನರಿಗೆ ನೀಡಿದ ಮಾತಿಗೆ ತಪ್ಪಿದ್ದು, ಈ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ಕಾರಣ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕ ಡಿ. ದೇವರಾಜ್ ಅರಸರ 104 ನೇ ಜನ್ಮದಿನದಂದು ಬಿಜೆಪಿ ಮಂತ್ರಿಮಂಡಲ ರಚನೆ ಮಾಡಿದೆ. ಈ ಸಂಪುಟದಲ್ಲಿ ಸ್ವಾಭಾವಿಕವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರೆಯುತ್ತದೆ ಎಂದು ರಾಜ್ಯದ ಜನರು ಬಯಸಿದ್ದರು. ಆದರೆ ಅರಸುರವರಿಗೆ ಅವಮಾನಿಸುವ ರೀತಿಯಲ್ಲಿ ಕೇವಲ ಇಬ್ಬರು ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ಬಿಜೆಪಿ ajenda ಬಯಲಾಗಿದೆ ಎಂದು ರಮೇಶ್ ಬಾಬು ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆರನೇ ಸ್ಥಾನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಅವಮಾನಕರ ಸಂಗತಿ.  ಒಬ್ಬ ಮಾಜಿ ಮುಖ್ಯಮಂತ್ರಿಗೆ ಮಂತ್ರಿ ಪದವಿ ಮೇಲೆ ಇಷ್ಟೊಂದು ವ್ಯಾಮೋಹ ಇರಬಾರದಿತ್ತು. ಇದು ಸಂಘ ಪರಿವಾರದಿಂದ ಕಲಿತದ್ದೋ ಅಥವಾ ಕುಟುಂಬ ಒತ್ತಡದ ಫಲವೋ ಅವರೇ ಖಚಿತಪಡಿಸಬೇಕು ಎಂದು ಲೇವಡಿ ಮಾಡಿದರು.

ಏಕ ವ್ಯಕ್ತಿ ಸಂಪುಟಕ್ಕೆ ಕೊನೆ ಹಾಡಿದರೂ, ಅರೆ ಬರೆ ಸಂಪುಟದ ಮೂಲಕ ರಾಜ್ಯದ ಆಡಳಿತವನ್ನು ಬಿಜೆಪಿ ಮೂರಾಬಟ್ಟೆ ಮಾಡಿದೆ. ಅತಿ ದಾರುಣವಾದ ಪ್ರಕೃತಿ ವಿಕೋಪಕ್ಕೆ ರಾಜ್ಯ ಒಳಗಾಗಿದ್ದು, ಜನರ ಆಸರೆಗಾಗಿ ಒಂದು ಪೂರ್ಣ ಪ್ರಮಾಣದ ಸರಕಾರ ನೀಡಲೂ ಸಾಧ್ಯವಾಗದ ಬಿಜೆಪಿ ರಾಜ್ಯದ ಜನರಿಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ರಮೇಶ್ ಬಾಬು ವಾಗ್ದಾಳಿ ನಡೆಸಿದರು.

Key words: BJP leaders- fail – create- full-fledged- cabinet-JDS leader -Ramesh Babu