ಬಿಜೆಪಿಯದ್ದು ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ: ಅಂಬಾನಿ ಅದಾನಿಗಳಿಗೆ ರಾಜ್ಯ ಅಡವಿಡುವ ಸಂಚಿನ ಯಾತ್ರೆ- ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಮಾರ್ಚ್,6,2023(www.justkannada.in): ಬಿಜೆಪಿ ಮಾಡುತ್ತಿರುವುದು  ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ.  ಗುಜರಾತಿನ ಅಂಬಾನಿ ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಆರೋಪಿಸಿದರು.

ರಾಜ್ಯ ಬಿಜೆಪಿ ವಿಜಯಸಂಕಲ್ಪಯಾತ್ರೆ ಬಗ್ಗೆ ಲೇವಡಿ ಮಾಡಿ ಮಾತನಾಡಿರುವ ಸಿದ್ಧರಾಮಯ್ಯ, ಬಿಜೆಪಿಯು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆ ನಡೆಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಯಾವ ಮುಖವನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಹೊರಟಿದೆ ಎಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ರಾಜ್ಯದ ಬಿಜೆಪಿಗರೆಲ್ಲ ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ. ಜೊತೆಗೆ ಸುಳ್ಳು ಉತ್ಪಾದಿಸಿ ಹಂಚುವ ಯಾತ್ರೆ ಹಾಗೂ ಜನರ ಶೋಷಣೆಗೆ, ಹಿಂಸೆಗೆ, ದ್ವೇಷಕ್ಕೆ, ಬೆಲೆ ಏರಿಕೆಗೆ ಮತ್ತು ಕರ್ನಾಟಕದ ಚೈತನ್ಯವನ್ನೆ ನಾಶ ಮಾಡುವುದಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಹೆಸರಿಟ್ಟುಕೊಂಡಿದ್ದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ  ಜನ ದ್ರೋಹವನ್ನು ಬಿಟ್ಟು ಬೇರೇನು ಮಾಡಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರಗಳು ಒಂದೆ ಒಂದು ಜನಪರವಾದ ಯೋಜನೆ ಜಾರಿಗೆ ತಂದಿದೆಯೆ?  ಹೋಗಲಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನಾದರೂ ಈಡೇರಿಸಿದೆಯೆ? ತಮ್ಮ ಬಜೆಟ್ ಭಾಷಣಗಳಲ್ಲಿ ಸದನದಲ್ಲಿ ಹೇಳಿರುವ ಎಲ್ಲ ಕಾರ್ಯಕ್ರಮಗಳನ್ನಾದರೂ ಈಡೇರಿಸಿದೆಯೆ? ಯಾವುದೂ ಇಲ್ಲ. ಆದರೂ ಯಾತ್ರೆ ಮಾಡಿಕೊಂಡು ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದರು.

ಕಿಸಾನ್ ಸಮ್ಮಾನ್ ಯೋಜನೆಯಲ್ಲೂ ಟೋಪಿ ಹಾಕಿದರು. ಪ್ರಧಾನಿ ಮೋದಿ ಸೇರಿ ಬಹುತೇಕ ಬಿಜೆಪಿಗರು ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಹೋದ ಕಡೆಯಲ್ಲೆಲ್ಲ ಭಾಷಣ ಮಾಡುತ್ತಾರೆ. ಈ ಯೋಜನೆಯ ವಾಸ್ತವಾಂಶವೇನು? ನಮ್ಮ ರಾಜ್ಯದಲ್ಲಿ  ಸುಮಾರು 1.40 ಕೋಟಿ ಕುಟುಂಬಗಳಿವೆ. ಇವುಗಳಲ್ಲಿ 87 ಕೃಷಿ ಹಿಡುವಳಿಗಳಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಸುಮಾರು 45-47 ಲಕ್ಷ  ಕೃಷಿ ಹಿಡುವಳಿದಾರರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ 6 ಸಾವಿರ ರೂಪಾಯಿ ಕೊಡುತ್ತಿದೆ ಮತ್ತು ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಕೊಡುತ್ತಿದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ರಾಜ್ಯ ಸರ್ಕಾರ ಕೊಡುತ್ತಿರುವುದು ಕೇವಲ 2 ಸಾವಿರ ರೂಪಾಯಿ ಮಾತ್ರ. ಕೇಂದ್ರ ಸರ್ಕಾರವೂ ಸಹ ಹೇಳಿದಷ್ಟನ್ನು ಕೊಡದೆ ಯಾಮಾರಿಸುತ್ತಿದೆ ಎಂದು ಅನೇಕ ರೈತರು ನನ್ನ ಬಳಿ ದೂರಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 45 ಲಕ್ಷ ರೈತರಿಗೆ 8 ಸಾವಿರವಾದರೂ ಸಿಗುತ್ತಿದೆ ಎಂದುಕೊಂಡರೂ  ಬಿಜೆಪಿ ಸರ್ಕಾರಗಳ ಸುಲಿಗೆ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆಯೆಂದರೆ, ಜನರು ಪೂರ್ಣ ಮಟ್ಟದಲ್ಲಿ ಬರಿಗೈಯಾಗುತ್ತಿದ್ದಾರೆ. ಸಾಧಾರಣವಾಗಿ ಪ್ರತಿ ಮನೆಯಲ್ಲಿ ತಿಂಗಳಿಗೆ ಒಂದು ಅಡುಗೆ ಸಿಲಿಂಡರ್ ಬಳಸಲಾಗುತ್ತದೆ. 2014 ರಲ್ಲಿ ಅಡುಗೆ ಗ್ಯಾಸಿಗಾಗಿ ಜನರು ವರ್ಷಕ್ಕೆ ಸುಮಾರು 4800 ರೂ ಖರ್ಚು ಮಾಡುತ್ತಿದ್ದರು. ಆದರೆ ಈಗ 13500 ಯಿಂದ 14000 ರೂಪಾಯಿಗಳನ್ನು ಕೇವಲ ಅಡುಗೆ ಗ್ಯಾಸಿನ ಸಿಲಿಂಡರ್‍ ಗಾಗಿಯೆ ಖರ್ಚುಮಾಡುವ ಗ್ರಹಚಾರ ಬಂದೊದಗಿದೆ. ಜನರಿಂದ ಸುಲಿಗೆ ಮಾಡುತ್ತಿರುವ ಈ ಹೆಚ್ಚುವರಿ 9000 ರೂಪಾಯಿಗಳಲ್ಲಿ ಜನರಿಗೆ ಎಷ್ಟು ಹಣವನ್ನು ವಾಪಸ್ಸು ಕೊಟ್ಟಿದ್ದೀರಿ ಹೇಳಿ?  ಎಂದು ಪ್ರಶ್ನಿಸಿದರು.

ಸಾಧಾರಣವಾಗಿ  4 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಟ್ರ್ಯಾಕ್ಟರ್ ಮತ್ತು ಬೆಳೆ ಕೊಯಿಲಿನ ಯಂತ್ರಕ್ಕೆ ಎಕರೆಗೆ 45 ಲೀಟರ್‍ ನಂತೆ 4 ಎಕರೆಗೆ 180 ಲೀಟರ್ ಡೀಸೆಲ್ ಅಗತ್ಯವಿದೆ.   2014 ಕ್ಕೂ ಮೊದಲು ಪ್ರತಿ ಲೀಟರ್ ಡೀಸೆಲ್ ಬೆಲೆ 47 ರೂಗಿಂತ ಕಡಿಮೆ ಇತ್ತು. ಆಗ 8460 ರೂಗಳನ್ನು ಡೀಸೆಲ್‍ ಗಾಗಿ ಸಣ್ಣ ರೈತನೊಬ್ಬ ಖರ್ಚು ಮಾಡುತ್ತಿದ್ದ. ಈಗ ಅಷ್ಟೆ ಭೂಮಿಗೆ 17100 ರೂಗಳನ್ನು ಖರ್ಚು ಮಾಡಬೇಕಾಗಿದೆ. ಹೆಚ್ಚುವರಿಯಾಗಿ 8640 ರೂ ಖರ್ಚು ಒಬ್ಬ ಸಣ್ಣ ರೈತರಿಗೆ ಬಂದೊದಗಿದೆ. ಅಂದರೆ ಎರಡು ಪಟ್ಟಿಗಿಂತ ಹೆಚ್ಚು.

ಪೇಟೆಗೆ ಹೋಗಿ ಕೂಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಸರಾಸರಿ ದಿನಕ್ಕೊಂದು ಲೀಟರ್ ಪೆಟ್ರೋಲ್ ಹಾಗೂ ವರ್ಷಕ್ಕೆ 300 ಲೀಟರ್ ಬಳಸುತ್ತಾನೆ ಎಂದುಕೊಂಡರೆ 2014 ರಲ್ಲಿ ಲೀಟರಿಗೆ 70 ರೂಪಾಯಿಗಳಂತೆ 21000 ರೂ ಖರ್ಚು ಮಾಡುತ್ತಿದ್ದರೆ ಈಗ 31000 ರೂಪಾಯಿ ಖರ್ಚು ಮಾಡುತ್ತಿದ್ದಾನೆ. ಇಲ್ಲಿ ಪ್ರತಿಯೊಬ್ಬನಿಂದ ಸುಲಿಗೆ ಮಾಡುತ್ತಿರುವ 10000 ಹೆಚ್ಚುವರಿ ರೂಪಾಯಿಗಳಲ್ಲಿ  ಬಡವರಿಗೆ ವಾಪಾಸ್ ಏನು ಕೊಟ್ಟಿದ್ದೀರಿ ?

ತಿಂಗಳಿಗೆ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ತೊಗರಿಬೇಳೆಗೆ 2014ರಲ್ಲಿ 150 ರೂ  ಲೆಕ್ಕದಲ್ಲಿ ವರ್ಷಕ್ಕೆ 1800 ರೂಪಾಯಿ ಖರ್ಚಾಗುತ್ತಿತ್ತು. ಈಗಿದು 3750 ರೂಪಾಯಿ ಆಗಿದೆ.  ಈ ಸುಲಿಗೆಗೆ ಏನು ಉತ್ತರ ಕೊಡುತ್ತೀರಿ..? ಎಂದು ಪ್ರಶ್ನೆ ಹಾಕಿದ್ದಾರೆ.

ಹಸು ಎಮ್ಮೆಗಳನ್ನು ಸಾಕುವ ರೈತರು 2017 ರಲ್ಲಿ ಎರಡು ಮೂಟೆ ಬೂಸಾ ಮತ್ತು  ಎರಡು ಮೂಟೆ ಹಿಂಡಿ ಖರೀದಿಸಲು ತಿಂಗಳಿಗೆ 1600 ರೂಗಳಂತೆ ವರ್ಷಕ್ಕೆ 19200 ರೂಪಾಯಿ ಖರ್ಚು ಮಾಡುತ್ತಿದ್ದರು. ಈಗ 68000 ರೂಪಾಯಿ ಆಗಿದೆ. ರೈತರಿಂದ ಸುಲಿಯುತ್ತಿರುವ ಹೆಚ್ಚುವರಿ 49000 ರಿಂದ 50000 ರೂಪಾಯಿಗಳಿಗೆ ಕಾರಣ ಏನು? ಪೆಟ್ರೋಲ್, ಡೀಸೆಲ್‍ ಗಳ ಬೆಲೆಯೇರಿಕೆಯೆ?  ರಸ್ತೆ ಟೋಲ್‍ ಗಳ ಸುಲಿಗೆಯೆ? ಮುಂಬೈನಿಂದ ಲಾರಿಯೊಂದು ಬೆಂಗಳೂರಿಗೆ ಬರಲು 24000 ರೂಪಾಯಿಗೂ ಹೆಚ್ಚು ಟೋಲ್ ಕಟ್ಟಬೇಕು. ಇದನ್ನು ಕೊಂಡುಕೊಳ್ಳುವುದು ಜನರೆ ತಾನೇ?

ಹಾಲು, ಮೊಸರು, ಮಜ್ಜಿಗೆ, ಎಳನೀರು, ಅಕ್ಕಿ, ಗೋಧಿ, ಪೆನ್ನು, ಪೇಪರ್ ಸೇರಿದಂತೆ ಎಲ್ಲದರ ಮೇಲೆ ತೆರಿಗೆ ವಿಧಿಸಿ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ಏನು ಕೊಟ್ಟಿದೆ? ಬಡ ಜನರ ಬದುಕನ್ನು ಅಡ್ಡಡ್ಡ ಸೀಳಿ ಬರ್ಬಾದು ಮಾಡಿದ್ದು ಬಿಟ್ಟರೆ ಬೇರೇನು ಸಾಧನೆಯಾಗಿದೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೃಷಿಕರ, ಬಡವರ, ಮಧ್ಯಮ ವರ್ಗಗಳ ಜನರ ಆದಾಯ ಯಾವ ರೀತಿಯಿಂದಲೂ ಹೆಚ್ಚಾಗಿಲ್ಲ ಎಂಬುದನ್ನು ಸರ್ಕಾರದ ಅಂಕಿ ಅಂಶಗಳೆ ತೋರಿಸುತ್ತಿವೆ. ಉದಾಹರಣೆಗೆ ಕಲ್ಬುರ್ಗಿ ಜಿಲ್ಲೆಯ ಜನರ ವಾರ್ಷಿಕ ತಲಾದಾಯ 2012ರಲ್ಲಿ 40,000ರೂ ಇತ್ತು. ಅದು 2018ರ ವೇಳೆಗೆ 99322 ರೂಗಳಿಗೆ ಏರಿಕೆಯಾಗಿತ್ತು. ಆದರೆ 2022ರ ಮಾರ್ಚ್‍ಗೆ ಕೇವಲ 25,676 ರೂಪಾಯಿ ಮಾತ್ರ ಹೆಚ್ಚಾಗಿ  1,24,998 ರೂಗಳಷ್ಟಾಗಿದೆ. ಇದರಲ್ಲಿ ಹಣದುಬ್ಬರವನ್ನು ವರ್ಷಕ್ಕೆ ಸರಾಸರಿ 5.5 ರಷ್ಟು ಕಳೆದರೆ ರೈತರ, ಬಡವರ, ಮಧ್ಯಮವರ್ಗದವರ ಆದಾಯ ಹೆಚ್ಚಾಗುವುದಿರಲಿ, ಕಡಿಮೆಯಾಗುತ್ತಾ ಹೋಗಿದೆ. ಬೆಳಗಾವಿಯ ಉದಾಹರಣೆಯೂ ಹೀಗೆ ಇದೆ. 2018 ರಿಂದ ಈಚೆಗೆ ಕೇವಲ 24 ಸಾವಿರ ರೂಪಾಯಿ ಮಾತ್ರ ಹೆಚ್ಚಾಗಿದೆ. ವರ್ಷಕ್ಕೆ ಹಣದುಬ್ಬರದ ಪ್ರಮಾಣವನ್ನು 6000 ರೂಗಳಷ್ಟು ಕಳೆದರೆ, 2018 ರಿಂದ ಹೆಚ್ಚಾಗುವ ಬದಲು ಕಡಿಮೆಯಾಗಿದೆ. ಬಹುತೇಕ ಕೃಷಿ ಪ್ರಧಾನ ಜಿಲ್ಲೆಗಳ ಸ್ಥಿತಿ ಹೀಗೆ ಇದೆ.

ನಿಮ್ಮ ಯಾತ್ರೆಗಳಲ್ಲಿ ಈ ಸಾಧನೆಗಳನ್ನು ಹೇಳಿಕೊಳ್ಳಿ. ನಿಮ್ಮ ಸಂಕಲ್ಪ, ಯಾತ್ರೆಯ ಪುರುಷಾರ್ಥ ಜನರಿಗೆ ಗೊತ್ತಾಗಲಿ. ಬಿಜೆಪಿ ಎಂದರೆ ಕುರಿ ಕಾವಲಿಗೆ ನೇಮಿಸಿದ ತೋಳ ಎನ್ನುವ ಸಿಟ್ಟು ಜನರಲ್ಲಿ ಹೆಪ್ಪುಗಟ್ಟಿರುವುದನ್ನು ನಾನು ಹೋದ ಕಡೆಗಳಲ್ಲೆಲ್ಲಾ ಗಮನಿಸಿದ್ದೀನಿ. ರಾಜ್ಯದ ಜನರು ಈ ಬಾರಿ ಎಚ್ಚೆತ್ತಿದ್ದಾರೆ.  ತಮ್ಮನ್ನು ಕುರಿಗಳಾಗಿಸುವುದು ಸಾಧ್ಯವಿಲ್ಲ ಎಂದು ಅನೇಕ ಕಡೆ ಬಿಜೆಪಿಗರ ಮುಖಕ್ಕೆ ರಾಚುವಂತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಅದು ಬಿಜೆಪಿಯನ್ನು ಬಿರುಗಾಳಿಯಂತೆ ಗುಡಿಸಿ ಹಾಕಲಿದೆ.

ನೆಮ್ಮದಿ ಮತ್ತು ಸಮೃದ್ಧಿ ಬಯಸುವ ಕರ್ನಾಟಕವು ಗುಜರಾತಿನ ಅಂಬಾನಿ ಮತ್ತು ಅದಾನಿಗಳ ಲೂಟಿಗೆ ಅವಕಾಶ ಮಾಡಿಕೊಡಲು ಅವರಿಬ್ಬರ ರಾಯಭಾರಿಗಳಂತೆ ಓಡಾಡುತ್ತಿರುವ ಬಿಜೆಪಿ ನಾಯಕರ ಹುನ್ನಾರವನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ.  ಕನ್ನಡಿಗರು ಗುಜರಾತ್ ಮೂಲದ ದೇಶದ್ರೋಹಿ ವ್ಯಾಪಾರಿಗಳ ಲೂಟಿಗೆ ಎಂದೆಂದಿಗೂ ಅವಕಾಶ ಕೊಡಲಾರರು. ಬಿಜೆಪಿಗೆ ಓಟು ಕೊಡುವುದೆಂದರೆ ಅದಾನಿ, ಅಂಬಾನಿಗಳ ಲೂಟಿಗೆ ಅವಕಾಶ ಕೊಡುವುದು ಎಂದರ್ಥ. ಈಗಾಗಲೆ ನಮ್ಮ ವಿದ್ಯುತ್ ಸೇರಿದಂತೆ ಎಲ್ಲವನ್ನೂ ಕಿತ್ತುಕೊಂಡು ರೈತರ ಕೊಳವೆ ಬಾವಿಗಳಿಗೂ ಮೀಟರ್ ಹಾಕಲು, ಸಣ್ಣ ಕೈಗಾರಿಕೋದ್ಯಮಿಗಳ ಉತ್ಪಾದನೆ ನಾಶ ಮಾಡಿ ಚೀನಾದ ವಸ್ತುಗಳನ್ನು ಅದಾನಿ ಮುಂತಾದವರಿಂದ ಕೊಳ್ಳುವಂತೆ ಮಾಡಿ ನಮ್ಮ ರಾಜ್ಯದ ಆರ್ಥಿಕ ಚೈತನ್ಯವನ್ನು ನಾಶ ಮಾಡಲು ಸಂಚು ಹೂಡಿದ್ದಾರೆ. ಈ ದುಷ್ಟ ಸಂಚನ್ನು ಅರಿತುಕೊಂಡು ಭ್ರಷ್ಟ ಬಿಜೆಪಿಯನ್ನು ರಾಜ್ಯದಿಂದ ನಿರ್ಮೂಲನೆ ಮಾಡಬೇಕಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

Key words: BJP- campaign – corruption-Former CM-  Siddaramaiah