ಬಿಟ್ ಕಾಯಿನ್ ದಂಧೆ ವಿಚಾರ:  ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್.

ಬೆಂಗಳೂರು,ನವೆಂಬರ್,15,2021(www.justkannada.in):  ಬಿಟ್ ಕಾಯಿನ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆರೋಪಿಸಿರುವ ಕಾಂಗ್ರೆಸ್ ನಾಐಕರಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನವರು ಮುಚ್ಚಿಟ್ಟಿದ್ದ ಹಗರಣ ಹೊರಗೆಳೆದಿದ್ದೇ ಬಿಜೆಪಿ. ಅಪರಾಧ ಆಗಿದ್ಯಾ ಇಲ್ವಾ ಎಂದು ಹೇಳುವುದು ಕಾಂಗ್ರೆಸ್‌ ಅಲ್ಲ. ಕೋರ್ಟ್‌ ಇದನ್ನು ಹೇಳುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್‌ನವರು ಸುಳ್ಳಿನ ಸರದಾರರು. ಅವರು ಸುಳ್ಳು ಸುದ್ದು ಸೃಷ್ಟಿಸುವುದರಲ್ಲಿ ನಿಸ್ಸೀಮರು. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ರಫೇಲ್ ವಿಚಾರವನ್ನು ಪ್ರಸ್ತಾಪಿಸಿದ್ರು. ಪ್ರಧಾನಿ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ರು. ಈಗ ಬಿಟ್ ಕಾಯಿನ್ ಹಗರಣ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಂದಿನ ಚುನಾವಣೆಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಟ್ ಕಾಯಿನ್ ಬಗ್ಗೆ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾವಿಲ್ಲದ ಬುಟ್ಟಿಯನ್ನು ಇಟ್ಟುಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ರಾಜ್ಯದಲ್ಲಿ ಅಷ್ಟೋಇಷ್ಟೊ ಕಾಂಗ್ರೆಸ್ ಪಕ್ಷ ಉಳಿದಿದೆ. ಅದನ್ನೂ ಹಾಳು ಮಾಡುವುದಕ್ಕೆ ಹೊರಟಿದ್ದಾರೆ. ಅದ್ಯಾರೋ ಇಬ್ಬರು ಇದ್ದಾರೆಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಸಿದ್ದರಾಮಯ್ಯ ಮೊದಲು ಆ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

2017-18ರಲ್ಲೇ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹ್ಯಾಕ್ ಮಾಡಿದ್ದ. ಆಗಲೇ ಶ್ರೀಕೃಷ್ಣನನ್ನು ಕಾಂಗ್ರೆಸ್‌ನವರು ಬಂಧಿಸಬೇಕಿತ್ತು. ಆಗ ಅವನನ್ನು ಬಂಧಿಸಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ. ಈಗ ಸುಮ್ಮನೆ ಹಾವು ಬಿಡ್ತೀನಿ ಎಂದು ಹೇಳಬೇಡಿ. ಇಲ್ಲಸಲ್ಲದ ಆಪಾದನೆಗಳನ್ನು ಮಾಡಬೇಡಿ. ದಾಖಲೆ ಬಿಡುಗಡೆ ಮಾಡಿ. ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬಿಟ್ ಕಾಯಿನ್ ವಿಚಾರದಲ್ಲಿ ಎಲ್ಲ ದಾಖಲೆ ಸಲ್ಲಿಸಿದ್ದೇವೆ. ನಾವು ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ಆರ್. ಅಶೋಕ್ ಹೇಳಿದರು.

Key words: Bit coin –issue-minister- R. Ashok-tong- Congress.