ಹಗಲಿನಲ್ಲಿ ಕ್ಯಾಬ್ ಚಾಲಕರಾಗಿ, ರಾತ್ರಿ ವೇಳೆ ದರೋಡೆಗೆ ಇಳಿಯುತ್ತಿದ್ದ ಮೂವರ ಬಂಧನ

ಬೆಂಗಳೂರು;(www.justkannada.in) ಹಗಲಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸಮಾಡುತ್ತ, ರಾತ್ರಿ ವೇಳೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಹೊರಮಾವು ನಿವಾಸಿ ಮುನಿಯಪ್ಪ (24), ಬಾಣಸವಾಡಿ ನಿವಾಸಿ ರಾಜಶೇಖರ್‌ (23), ಟಿ.ಸಿ.ಪಾಳ್ಯ ನಿವಾಸಿ ಶ್ರೀಕೃಷ್ಣ (19) ಎಂದು ಗುರುತಿಸಲಾಗಿದೆ. ಇವರು ಆವಲಹಳ್ಳಿ ಸುತ್ತ ಮುತ್ತ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಂದ ಮೊಬೈಲ್‌ಗಳನ್ನು ದರೋಡೆ ಮಾಡುತ್ತಿದ್ದರು. ಬಂಧಿತರಿಂದ 10 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮುನಿಯಪ್ಪನ ಬಳಿ ಇರುವ ಹೋಂಡಾ ಡಿಯೋ ವಾಹನದಲ್ಲೇ ಮೂವರೂ ಓಡಾಡುತ್ತಾ ನಿರ್ಜನ ಪ್ರದೇಶಗಳಲ್ಲಿ ಹೊಂಚು ಹಾಕಿ ಮೊಬೈಲ್‌ ದರೋಡೆ ಮಾಡುತ್ತಿದ್ದರು. ಒಂಟಿಯಾಗಿ ಓಡಾಡುವವರೇ ಇವರ ಟಾರ್ಗೆಟ್‌. ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪೊಲೀಸರು ನಾಕಾಬಂದಿ ಹಾಕಿ ತನಿಖೆ ನಡೆಸುತ್ತಿದ್ದರು. ಈ ವೇಳೆ ಒಂದೇ ಬೈಕ್‌ನಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅನುಮಾನ ಬಂದು ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅವರ ಬಳಿ ಹತ್ತಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಗಿವೆ. ತಕ್ಷಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೊಬೈಲ್‌ ದರೋಡೆ ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಹಗಲಿನಲ್ಲಿ ಕ್ಯಾಬ್ ಚಾಲಕರಾಗಿ, ರಾತ್ರಿ ವೇಳೆ ದರೋಡೆಗೆ ಇಳಿಯುತ್ತಿದ್ದ ಮೂವರ ಬಂಧನ
Bangalore,three Cab drivers,arrested,Mobile robbery