ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಅನ್ನಭಾಗ್ಯ ಅಕ್ಕಿ ಕಡಿತ ಮಾಡಿದ್ರೆ ಬೀದಿಗಿಳಿದು ಹೋರಾಟ -ಎಚ್ಚರಿಕೆ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ…

ಬೆಂಗಳೂರು,ಆ,17,2019(www.justkannada.in): ಯಾವುದೇ ಕಾರಣಕ್ಕೂ ಅನ್ನಭಾಗ್ಯ ಅಕ್ಕಿ ಕಡಿತ ಮಾಡಬಾರದು. ಅಕ್ಕಿ ಕಡಿತ ಮಾಡಿದರೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಡವರಿಗೆ ನೀಡಲಾಗುತ್ತಿರುವ ಅನ್ನಭಾಗ್ಯ ಅಕ್ಕಿ ಕಡಿತ ಮಾಡಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ಹಣ ಬಳಸಿಕೊಳ್ಳಲು ರಾಜ್ಯ ಸರ್ಕಾರ  ಮುಂದಾಗಿದೆ. 7 ಕೆಜಿ ಅಕ್ಕಿಯಲ್ಲಿ ಕಡಿತ ಮಾಡಿದ್ರೆ ಬಡವರ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗುತ್ತೆ. ಕಾಂಗ್ರೆಸ್ ಪಕ್ಷ ಇದನ್ನ ತೀವ್ರವಾಗಿ ವಿರೋಧಿಸುತ್ತೆ. ಅಕ್ಕಿ ಕಡಿತ ಮಾಡಿದರೇ ನಾವು ಬೀದಿಗಿಳಿದು ಹೋರಾಟ ಮಾಡ್ತೇವೆ. ಸದನದ ಒಳಗೆ ಹೊರಗೆ ನಾವು ಹೋರಾಟ ಮಾಡಲಾಗುವುದು. ಅನ್ನಭಾಗ್ಯ ಅಕ್ಕಿ ಕಡಿತ ಮಾಡುವ ಯೋಚನೆ ಸರ್ಕಾರದ ಮುಂದೆ ಇದ್ದರೆ ಅದನ್ನ ಕೂಡಲೇ ಕೈ ಬಿಡಬೇಕು ಎಂದು ಬಿಎಸ್ ವೈ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟರು.

ಅನ್ನಭಾಗ್ಯ ಯೋಜನೆಯಿಂದ ಗುಳೆ ಪದ್ಧತಿ ಕಡಿಮೆ ಆಗಿದೆ. ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ ಇದು. ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಪ್ರಯತ್ನಿಸಿದರೇ ಸುಮ್ಮನಿರಲ್ಲ. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಅಕ್ಕಿ ಕಡಿತ ಮಾಡಬಾರದು. ಕಡಿತ ಮಾಡುವ ಯೋಜನೆ ಇದ್ದರೇ ಕೈಬಿಡಿ ಎಂದು ಸಲಹೆ ನೀಡಿದರು.

ಹಾಗೆಯೇ ಬೆಂಗಳೂರಿನಲ್ಲಿ 190 ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿವೆ. ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಹಣ ಒದಗಿಸುತ್ತಿಲ್ಲ ಎಂದು ನಾನು ಕೇಳಿದ್ದೇನೆ.  ಇಂದಿರಾ ಕ್ಯಾಂಟಿನ್ ಯೋಜನೆಯನ್ನ ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಬಿಎಸ್ ವೈ ನೇತೃತ್ವದ ಸರ್ಕಾರವೇ ಇಲ್ಲ…

ಬಿ.ಎಸ್.ಯಡಿಯುರಪ್ಪ ಸಿಎಂ ಆಗಿ 22 ದಿನಗಳು ಕಳೆದಿವೆ. ಆದರೆ ರಾಜ್ಯದಲ್ಲಿ ಬಿಎಸ್ ವೈ ನೇತೃತ್ವದ ಸರ್ಕಾರವೇ ಇಲ್ಲ. ರಾಜ್ಯದಲ್ಲಿ ಬಡವರ ,ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ .ಬರ ಪರಿಹಾರ ಕಾರ್ಯ ಪ್ರಾರಂಭಿಸಿಲ್ಲ. ಯುವಕರಿಗೆ ಉದ್ಯೋಗ ನೀಡ್ತಿಲ್ಲ, ಜಾನುವಾರುಗಳಿಗೆ ಮೇವು ಪೂರೈಸುತ್ತಿಲ್ಲ. ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Key words: Bangalore- siddaramaiah-annabagya-cut-protest- state govrnament