ನಕಲಿ ನೇಮಕಾತಿ ದಂಧೆಯಲ್ಲಿ ತೊಡಗಿದ್ಧ ಇಬ್ಬರ ಬಂಧನ: ನಗದು, ಖಾಲಿ ಚೆಕ್ ಮತ್ತು ನಕಲಿ ರೈಲ್ವೆ ನೇಮಕಾತಿ ಆದೇಶಗಳು ವಶಕ್ಕೆ.

ಮೈಸೂರು,ಅಕ್ಟೋಬರ್,27,2021(www.justkannada.in): ಮೈಸೂರಿನ ಸಂರಕ್ಷಣಾ ದಳವು ತ್ವರಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯೊಂದಿಗೆ ರೈಲ್ವೆಯಲ್ಲಿ ನಕಲಿ ನೇಮಕಾತಿಯನ್ನು ಒಳಗೊಂಡ ದೊಡ್ಡ ದಂಧೆಯನ್ನು ಭೇದಿಸಿದೆ.

ನಕಲಿ ನೇಮಕಾತಿ ದಂಧೆಯಲ್ಲಿ ತೊಡಗಿದ್ಧ ಇಬ್ಬರು ಆರೋಪಿಗಳನ್ನ  ಮೈಸೂರಿನ ಸಂರಕ್ಷಣಾ ದಳವು ಬಂಧಿಸಿದೆ. ಮೈಸೂರಿನ ಚಂದ್ರಗೌಡ ಎಸ್ ಪಾಟೀಲ್,(44) ಮತ್ತು ಗದಗ ಮೂಲದ ಶಿವಸ್ವಾಮಿ(ನಿವೃತ್ತ ರೈಲ್ವೆ ನೌಕರ)(62) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್ ಗಳು,  ರೂಪಾಯಿ 4,15,000/- ಮೊತ್ತ ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಸೇರಿದಂತೆ ಹಲವಾರು ವಸ್ತುಗಳನ್ನು ತಂಡದಿಂದ ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ಹಾಗೂ ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರಿಂದ ದೂರು ದಾಖಲಾಗಿತ್ತು.

ಇದರ ಆಧಾರದ ಮೇಲೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್ ಮತ್ತು ಸಹಾಯಕ ಭದ್ರತಾ ಆಯುಕ್ತರಾದ ಎ ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಸತೀಶನ್, ಎಂ ನಿಶಾದ್, ವೆಂಕಟೇಶ್, ರಾಧಾಕೃಷ್ಣ ಮತ್ತು ಇತರೆ ಸಿಬ್ಬಂದಿಗಳನ್ನು ಇವರ ಮೇಲೆ ನಿಗಾ ವಹಿಸಲು ಕಾರ್ಯಾಚರಣೆಗೆ ಇಳಿಸಲಾಯಿತು. ಈ ಜನರ ಚಟುವಟಿಕೆಗಳ ಮೇಲೆ ನಿಕಟವಾದ ಕಣ್ಣಿಡುವ ಮೂಲಕ ಇವರೆಲ್ಲಾ ಯುವ ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕ ರೈಲ್ವೆ ಉದ್ಯೋಗಗಳ ಸುಳ್ಳು ಭರವಸೆ ನೀಡುವ  ನಕಲಿ ರೈಲ್ವೆ ನೇಮಕಾತಿ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ದೃಢಪಡಿಸಿಕೊಳ್ಳಲಾಯಿತು.

ಮೈಸೂರಿನ ಹೈವೇ ಸರ್ಕಲ್ ಬಳಿಯ ಶಿವ ಶಕ್ತಿ ಕಲ್ಯಾಣ ಮಂಟಪದ ಎದುರಿನ ಮನೆಯೊಂದರಲ್ಲಿ ಈ ತಂಡದ ಕಾರ್ಯಾಚರಣೆ ಕೇಂದ್ರ ಇತ್ತು. ಈ ತಂಡದ ಗುರಿ ಮುಖ್ಯವಾಗಿ ಬಡ ಮತ್ತು ಮುಗ್ಧ ಹಳ್ಳಿ ಹುಡುಗರು. ಅವರು ಅಭ್ಯರ್ಥಿಗಳ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ನಕಲಿ ಕರೆ ಪತ್ರಗಳು, ನಕಲಿ ವೈದ್ಯಕೀಯ ಜ್ಞಾಪನ ಪತ್ರಗಳು ಮತ್ತು ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು. ಈ ತಂಡ ಸುಳ್ಳು ಭರವಸೆ ನೀಡಿ ಉದ್ಯೋಗ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿತ್ತು.

ಇದರಲ್ಲಿ ಒಂದು ಕಡಿಮೆ ಅಂದಾಜಿನ ಪ್ರಕಾರವಾಗಿಯೇ ಸುಮಾರು 400 ಅಭ್ಯರ್ಥಿಗಳು ರೂ.22 ಕೋಟಿಗಳಷ್ಟು ಹಣ ಕೊಟ್ಟು ಜನ ಮೋಸ ಹೋಗಿದ್ದಾರೆ. ಹಲವರು ತಮ್ಮ ಜಮೀನು ಮಾರಿ ಮತ್ತು  ಹೆಚ್ಚಿನ ಬಡ್ಡಿಗೆ ಕೈಸಾಲ ಪಡೆದು ಹಣ ನೀಡಿದ್ದರು.

ಈ ಮಧ್ಯೆ ಆರೋಪಿಗಳಿಂದ ವಶಪಡಿಸಿಕೊಂಡ ಸಾಮಗ್ರಿಗಳೊಂದಿಗೆ ಆರೋಪಿಗಳನ್ನು ಅಗತ್ಯ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಂಡಿ ಮೊಹಲ್ಲಾದ ಸರ್ಕಲ್ ಇನ್ಸ್‌ಪೆಕ್ಟರ್ ರವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧಿತ ಪ್ರಕರಣವನ್ನು ಮೈಸೂರು ಮಂಡಿ ಪೊಲೀಸ್ ಠಾಣೆಯಲ್ಲಿ IPC. ಸಂ. 97/2021, U/s 464, 419, 420, 465, 468, 471 R/w 34 ಅಡಿಯಲ್ಲಿ ದಾಖಲು ಮಾಡಲಾಗಿದೆ.

ನೈಋತ್ಯ ರೈಲ್ವೆ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಮೈಸೂರಿನ ರೈಲ್ವೆ ಸಂರಕ್ಷಣಾ ಪಡೆಯ ತ್ವರಿತ ಕ್ರಮವನ್ನು ಶ್ಲಾಘಿಸಿದರು ಮತ್ತು ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ , ಮಾಹಿತಿಗಾಗಿ ಆಕಾಂಕ್ಷಿ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಗಳ (RRBs) ಅಧಿಕೃತ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ರೈಲ್ವೆ ನೇಮಕಾತಿ ಮಂಡಳಿಗಳ ಬಗ್ಗೆ ಅಥವಾ ಹಣದ ಪರಿಗಣನೆಗಾಗಿ ಕೆಲವು ವ್ಯಕ್ತಿಗಳು ನೀಡುತ್ತಿರುವ ಜಾಹಿರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಮಾಹಿತಿ, ಸೂಚನೆಗಳನ್ನು ತಕ್ಷಣವೇ ನಿರ್ಲಕ್ಷಿಸಬೇಕು ಎಂದು ಹೇಳಿದರು.

Key words: Arrest -two –fake- railway-recruitment-police