ಹೆಗ್ಗವಾಡಿಯಲ್ಲಿ ಆರ್.ಧ್ರುವನಾರಾಯಣ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಮೈಸೂರು ಮಾರ್ಚ್ 12, 2023 (www.justkannada.in): ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ.

ಹೆಗ್ಗವಾಡಿ ಗ್ರಾಮದಲ್ಲಿ ಆರ್.ಧ್ರುವನಾರಾಯಣ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಆರ್.ಧ್ರುವನಾರಾಯಣ ಅವರ ಪಾರ್ಥೀವ ಶರೀರವನ್ನು ಚಾಮರಾಜನಗರಕ್ಕೆ ರಾತ್ರಿ 12:30ರ ಸುಮಾರಿಗೆ ತಲುಪಿತು. ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಭಜನೆ, ಹಾಡುಗಳ ಮೂಲಕ ದುಃಖ‌ವನ್ನು ತೋಡಿಕೊಂಡರು.

ಮುತ್ತಿಗೆ, ಬದನಗುಪ್ಪೆ, ಬೆಂಡರವಾಡಿ ಸೇರಿದಂತೆ ದಾರಿಯುದ್ದಕ್ಕೂ ತನ್ನ ನೆಚ್ಚಿನ ನಾಯಕನಿಗೆ ಗ್ರಾಮಸ್ಥರು ಅಂತಿಮ‌ ನಮನ ಸಲ್ಲಿಸಿದರು.‌ ಇನ್ನು ಅಂತಿಮ‌ ನಮನ‌ ಸಲ್ಲಿಸಲು ಸಾವಿರಾರು ಮಂದಿ ಮಧ್ಯರಾತ್ರಿ ತನಕವೂ ಕಾದು ಕೊನೆಯ ದರ್ಶನ ಪಡೆದರು.

ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಿಂದ ಆರಂಭವಾದ ಮೆರವಣಿಗೆ, ಸತ್ತಿ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತಲುಪಿ ಪಕ್ಷದ ವತಿಯಿಂದ ನಮನ‌ ಸಲ್ಲಿಸಿ ಹರವೆ ಗ್ರಾಮದ ಮಾರ್ಗವಾಗಿ ಸ್ವಗ್ರಾಮ ಹೆಗ್ಗವಾಡಿ ತಲುಪಿತು. ಅಂತಿಮ ಯಾತ್ರೆಯಲ್ಲಿ ಧ್ರುವನಾರಾಯಣ ಪುತ್ರ ದರ್ಶನ್, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಎಚ್.ಡಿ‌.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಮತ್ತಿತರರು ಇದ್ದರು.