ತರಕಾರಿಗಳಿಗೆ ಬೆಂಬಲ ಬೆಲೆ ನೀಡುವ ಮನವಿ ಪರಿಶೀಲನೆ: ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ

ಚಿಕ್ಕಬಳ್ಳಾಪುರ, ಏಪ್ರಿಲ್ 14, 2020 (www.justkannada.in): ತರಕಾರಿಗಳಿಗೆ ಬೆಂಬಲ ಬೆಲೆ ನೀಡುವ ಮನವಿಯನ್ನು ಪರಿಶೀಲಿಸುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಭರವಸೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ಚಟುವಟಿಕೆ ಪ್ರಗತಿ ಪರಿಶೀಲನೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲಾಕ್ ಡೌನ್ ಕಾರಣದಿಂದ ಸಾಮಾನ್ಯ ಪರಿಸ್ಥಿತಿ ಮಾರುಕಟ್ಟೆಯಿಲ್ಲದೇ ಹಣ್ಣು – ತರಕಾರಿಗಳು ಕೊಳೆತು ಹೋಗುತ್ತಿವೆ. ಇವುಗಳಿಗೂ ಬೆಂಬಲ ಬೆಲೆ ನೀಡಿದರೆ ಸಹಾಯಕವಾಗುವುದೆಂದು ಕೃಷಿಕರು ಅಹವಾಲು ಸಲ್ಲಿಸಿದ್ದಾರೆ. ಇದರ ಬಗ್ಗೆ ಪರಿಶೀಲಿಸುವುದಾಗಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿಕರ ನೆರವಿಗೆ ಬರುವುದಕ್ಕೆ ಕೃಷಿ ಇಲಾಖೆ ಸಿಬ್ಬಂದಿ ಕೊರತೆ ಇದೆ ಎಂಬುದನ್ನು ಸಹ ಕೃಷಿಕರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಸಚಿವರು ಬಿತ್ತನೆಬೀಜ – ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವುದು ಕಂಡು ಬಂದರೆ, ಮಧ್ಯವರ್ತಿಗಳಿಂದ ರೈತರಿಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ರಾಜ್ಯದ್ಯಂತ ಕಾಳಸಂತೆ ಮೇಲೆ ಕಣ್ಣಿಡಲು ಜಾಗ್ರತ ದಳವನ್ನು ಸಜ್ಜುಗೊಳಿಸಲಾಗಿದೆ. ಅವರು ಮುಲಾಜಿಲ್ಲದೇ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆಬೀಜಗಳು, ರಸಗೊಬ್ಬರಗಳ ದಾಸ್ತಾನು ಸಾಕಷ್ಟಿದೆ. ಕೃಷಿಕರು ಅನವಶ್ಯಕವಾಗಿ ವದಂತಿಗಳಿಗೆ ಕಿವಿಗೊಡಬೇಡಿ ಎಂದವರು ಹೇಳಿದರು.

ಹಣ್ಣು – ತರಕಾರಿ ಇನ್ನಿತರ ಬೆಳೆಗಳಿಗೆ ಸಿಂಪಡಿಸುವ ಅಗತ್ಯ ಔಷಧ – ಕೀಟನಾಶಕಗಳಲ್ಲಿ ಕಳಪೆದರ್ಜೆಯವುಗಳ ಬಗ್ಗೆ ದೂರುಗಳು ಬಂದಿವೆ. ಇಂಥವುಗಳನ್ನು ಇಲಾಖೆ ಕೂಡಲೇ ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತದೆ ಎಂದವರು ತಿಳಿಸಿದರು.

ಕೊರೊನಾ ಕಾರಣದಿಂದ ಇಡೀ ಜಗತ್ತೇ ಸಂಕಷ್ಟದಲ್ಲಿದೆ. ಇಂಥ ಸಮಯದಲ್ಲಿ ಯಾರೂ ರಾಜಕೀಯ ಪ್ರೇರಿತ ಟೀಕೆಗಳನ್ನು ಮಾಡಬಾರದು. ಎಲ್ಲರೂ ಒಗ್ಗಟ್ಟಿನಿಂದ ಇಂಥ ಕಠಿಣ ಪರಿಸ್ಥಿತಿ ಎದುರಿಸಬೇಕು ಎಂದು ವಿರೋಧಪಕ್ಷಗಳ ಟೀಕಾಕಾರರಿಗೆ ಕಿವಿಮಾತು ಹೇಳಿದರು.

ಕೃಷಿಕರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ತಮ್ಮೊಂದಿಗೆ ಸರ್ಕಾರವಿದೆ ಎಂಬುದನ್ನು ಮರೆಯಬಾರದು. ಎಂಥದ್ದೇ ಸ್ಥಿತಿ ಇದ್ದರೂ ಗಮನಕ್ಕೆ ತನ್ನಿ ಎಂದು ಮತ್ತೆಮತ್ತೆ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ,ಉಪ ಸಬಾಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಾಗಿದ್ದರು.