ಸರ್ಕಾರದ ವಿರುದ್ಧ ವಾಗ್ದಾಳಿ: ರಾಜ್ಯಪಾಲರ ಭಾಷಣದ ಬಗ್ಗೆ ಟೀಕಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ…

ಬೆಂಗಳೂರು,ಫೆಬ್ರವರಿ,3,2021(www.justkannara.in):  ರಾಜ್ಯಪಾಲರಿಂದ ಸರ್ಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ. ಬಿ.ಎಸ್.ಯಡಿಯೂರಪ್ಪನವರೇ, ನೀವು ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳುಗಳಾಯಿತು. ಈ ಅವಧಿಯಲ್ಲಿ ನಿಮ್ಮ ಸರ್ಕಾರದ ಸಾಧನೆಯನ್ನು ನಿಮ್ಮ ಪಕ್ಷದ ಪ್ರಣಾಳಿಕೆಯ ಜೊತೆ ಓದಿಕೊಳ್ಳಿ. ನಿಮಗೆ ಆತ್ಮಸಾಕ್ಷಿ ಎಂಬುದು ಎಲ್ಲಾದರೂ ಉಳಿದುಕೊಂಡಿದ್ದರೆ ನೀವು ಖಂಡಿತ ಒಂದು ಕ್ಷಣ ಕೂಡಾ ಈ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಕಿಡಿಕಾರಿದರು.jk

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ  ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಭಾಷಣದ ವಿವರ ಹೀಗಿದೆ…

  • ರಾಜ್ಯಪಾಲರಿಂದ ಸರ್ಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ, ಒಂದಷ್ಟು ತಪ್ಪು ಮಾಹಿತಿಗಳಿವೆ. ಜೊತೆಗೆ ಸರ್ಕಾರದ ಮಾನ ಉಳಿಸಿಕೊಳ್ಳಲು ನಿರ್ಲಜ್ಜವಾಗಿ ಹೇಳಿಕೊಂಡ ಹಿಂದಿನ ನಮ್ಮ ಸರ್ಕಾರದ ಸಾಧನೆಗಳಿವೆ. ಇದನ್ನು ಹೊರತುಪಡಿಸಿ ಸತ್ಯನೂ ಇಲ್ಲ ಸತ್ವವೂ ಇಲ್ಲ.•          ಕಳೆದ ವರ್ಷ ನೀತಿ ಆಯೋಗವು ನಾವಿನ್ಯತಾ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ನೀಡಿತ್ತು. ಇದನ್ನು ಬಿಜೆಪಿ ಸರ್ಕಾರ ತನ್ನ ಸಾಧನೆ ಎಂದು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಸ್ಥಾಪನೆ ಮಾಡಿ, ವಾರ್ಷಿಕ 5 ಲಕ್ಷ ಮಂದಿಗೆ ಕೌಶಲ್ಯ ತರಬೇತಿ ನೀಡಿದ್ದ ನಮ್ಮ ಸರ್ಕಾರ. ಇದು ಬಿಜೆಪಿಯವರ ಸಾಧನೆ ಏನಿದೆ?
  • ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ “ಟೇಕ್ ಆಫ್ ಆಗಿಲ್ಲ, ಟೇಕ್ ಆಫ್ ಆಗಿಲ್ಲ” ಎಂದು ಇದೇ ಸದನದಲ್ಲಿ ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದರು. ಈಗಿನ ಸರ್ಕಾರ ‘ಟೇಕ್ ಆಫ್’ ಅಲ್ಲ ಸಂಪೂರ್ಣ ‘ಆಫ್ ಆಗಿ ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಹಳೆ ಡಕೋಟ ಬಸ್ ನಂತಾಗಿದೆ.
  • ಯಡಿಯೂರಪ್ಪನವರಿಗೆ ಡ್ರೈವಿಂಗ್ ಮೊದಲೇ ಬರೋದಿಲ್ಲ, ಜೊತೆಗೆ ನಾಲ್ಕು ದಿಕ್ಕುಗಳಿಂದಲೂ ಕಾಲೆಳೆಯುತ್ತಿರುವ ನಿಮ್ಮವರ ಕಾಟ. ಬಸ್ ಮುಂದಕ್ಕೆ ಎಲ್ಲಿಗೆ ಹೋಗೋದು?,. ಇಂತಹ ಸರ್ಕಾರವನ್ನು “ರಿಪೇರಿ” ಮಾಡಲಾಗುವುದಿಲ್ಲ “ರಿಪ್ಲೇಸ್’ ಮಾಡಬೇಕಾಗುತ್ತದೆ ಅಷ್ಟೇ.  ಆ ಕಾಲ ಸದ್ಯದಲ್ಲಿಯೇ ಬರಲಿದೆ.
  • ಬಿ.ಎಸ್.ಯಡಿಯೂರಪ್ಪನವರೇ, ನೀವು ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳುಗಳಾಯಿತು. ಈ ಅವಧಿಯಲ್ಲಿ ನಿಮ್ಮ ಸರ್ಕಾರದ ಸಾಧನೆಯನ್ನುನಿಮ್ಮ ಪಕ್ಷದ ಪ್ರಣಾಳಿಕೆಯ ಜೊತೆ ಓದಿಕೊಳ್ಳಿ. ನಿಮಗೆ ಆತ್ಮಸಾಕ್ಷಿ ಎಂಬುದು ಎಲ್ಲಾದರೂ ಉಳಿದುಕೊಂಡಿದ್ದರೆ ನೀವು ಖಂಡಿತ ಒಂದು ಕ್ಷಣ ಕೂಡಾ ಈ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ,
  • ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅತಿವೃಷ್ಟಿ ಮತ್ತು ಕೊರೊನಾ ಹಾವಳಿಯ ಪ್ರಕೃತಿ ವಿಕೋಪ, ಇನ್ನೊಂದೆಡೆ ನಿಮ್ಮ ಕೃಷಿ ವಿರೋಧಿ ಕಾನೂನುಗಳ ಮಾನವ ನಿರ್ಮಿತ ವಿಕೋಪ. ಕಷ್ಟ-ನಷ್ಟಗಳಲ್ಲಿ ಬೆಂದು ಹೋಗಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಇಡೀ ದೇಶವೇ ಜ್ವಾಲಾಮುಖಿಯಂತಾಗಿದೆ, ಇಯಾವಾಗ ಸಿಡಿಯುತ್ತೋ ಗೊತ್ತಿಲ್ಲ
  • ಕಳೆದ ಬಾರಿ ಮುಖ್ಯಮಂತ್ರಿಯಾದಾಗ ನಿಮ್ಮ ಪೊಲೀಸರು ಗೊಬ್ಬರ ಕೇಳಿದ ಇಬ್ಬರು ರೈತರಿಗೆ ಗುಂಡಿಟ್ಟು ಅವರ ಜೀವ ತೆಗೆದಿರಿ. ಈ ಬಾರಿ ಐದು ರೈತವಿರೋಧಿ ಕಾನೂನುಗಳನ್ನು ತಂದು ರೈತರೆಲ್ಲರ ಜೀವದ ಜೊತೆ ಜೀವನವನ್ನು ನಾಶಮಾಡಲು ಹೊರಟಿದ್ದೀರಿ.
  • ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿರುವ ಒಂದು ಲಕ್ಷ ರೂಪಾಯಿ ವರೆಗಿನ ರಾಜ್ಯದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎನ್ನುವುದು ನಿಮ್ಮ ಪ್ರಣಾಳಿಕೆಯ ಮೊದಲ ಭರವಸೆ. ಆ ಭರವಸೆಯನ್ನು ಈಡೇರಿಸದ ನಿಮಗೆ ಹಸಿರು ಶಾಲು ಹೊದ್ದುಕೊಂಡು ರೈತ ಪರ ಎಂದು ಹೇಳಿಕೊಳ್ಳುವ ಯಾವ ನೈತಿಕತೆ ಇದೆ ಹೇಳಿ.
  • ಬೆಳೆಗಳ ಬೆಲೆ ಕುಸಿತ ತಡೆಯಲು ರೂ.5,000 ಕೋಟಿ ವೆಚ್ಚದ ‘ರೈತಬಂಧು ಮಾರುಕಟ್ಟೆ ಮಧ್ಯಪ್ರವೇಶ ನಿಧಿ’ ರೈತರ ಮಕ್ಕಳ ಶಿಕ್ಷಣಕ್ಕೆ ನೂರು ಕೋಟಿ ರೂಪಾಯಿಗಳ ‘ರೈತಬಂಧು ವಿದ್ಯಾರ್ಥಿ ವೇತನ ನಿಧಿ. ಪ್ರಣಾಳಿಕೆಯ ಈ ಭರವಸೆಗಳು ಈಡೇರಿವೆಯೇ?
  • ರೈತರಿಗೆ ಉತ್ಪಾದನಾ ವೆಚ್ಚದ ಒಂದುವರೆ ಪಟ್ಟು ಹೆಚ್ಚು ಬೆಂಬಲ ಬೆಲೆ. ನೀರಾವರಿಗೆ ರೂ. 1.50 ಲಕ್ಷ ಕೋಟಿ ಅನುದಾನ, ಪ್ರತಿವರ್ಷ ಒಂದು ಸಾವಿರ ರೈತರಿಗೆ ಇಸ್ರೇಲ್ ಮತ್ತು ಚೀನಾ ಪ್ರವಾಸ… ಎಲ್ಲಿದೆ ಬೆಂಬಲ ಬೆಲೆ? ಎಲ್ಲಿದೆ ರೈತರ ಪ್ರವಾಸ? ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರಿ, ಏನಾಯಿತು?.
  • ಕೃಷಿಗೆ ಸಂಬಂಧಿಸಿದ ಎಲ್ಲ ಯೋಜನೆಗಳ ಉಸ್ತುವಾರಿಗೆ ಮುಖ್ಯಮಂತ್ರಿ ಅಧೀನದಲ್ಲಿ ಪ್ರತ್ಯೇಕ ‘’ರೈತಬಂಧು ಇಲಾಖೆ’ ರಚಿಸುವುದಾಗಿ ಹೇಳಿದ್ದೀರಿ? ಎಲ್ಲಿದೆ ಆ ಇಲಾಖೆ. ರೈತರಿಗೆ ನೀಡಿರುವ ಈ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದೀರಿ ಎಂದು ಹೇಳುವ ಧೈರ್ಯ ನಿಮಗಿದೆಯೇ?.
  • ವಚನಭ್ರಷ್ಟತೆ ಎನ್ನುವುದು ನಿಮ್ಮ ಹುಟ್ಟುಗುಣ. ಕಳೆದ ಬಾರಿ ಹಸಿರುಶಾಲು ಹಾಕಿಕೊಂಡು ಅಧಿಕಾರಕ್ಕೆ ಬಂದ ನೀವು ಸಾಲಮನ್ನಾ ಮಾಡಬೇಕೆಂದು ರೈತರು ಕೇಳಿದರೆ ‘’ ನಾನೇನು ನೋಟು ಪ್ರಿಂಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೇನಾ? ಎಂದು ಕೇಳಿದವರು ನೀವು.
  • ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡದೆ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದಿರಿ. ನಿಮ್ಮ ಪೊಳ್ಳು ಬೆದರಿಕೆಗೆ ಬೆದರುವವ ನಾನಲ್ಲ. ಆದರೆ ರೈತನ ಮಗನಾದ ನನಗೆ ರೈತರ ಕಷ್ಟಗಳು ಗೊತ್ತು. ಇದಕ್ಕಾಗಿ ನಾನು ಸಾಲ ಮನ್ನಾ ಮಾಡಿದೆ.
  • ಮಹಿಳೆಯರಿಗೆ 1% ಬಡ್ಡಿದರದಲ್ಲಿ ಎರಡು ಲಕ್ಷ ಸಾಲ, ಬಿಪಿಎಲ್ ಮಹಿಳೆಯರಿಗೆ ಸ್ಮಾರ್ಟ್ ಪೋನ್, ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ ಕಿನ್, ಮದುವೆಯಾಗುವ ಹೆಣ್ಣುಮಕ್ಕಳಿಗೆ ಮೂರು ಗ್ರಾಂ ಚಿನ್ನದ ತಾಳಿ ಮತ್ತು ರೂ.25.000, ರೂ.10,000 ಕೋಟಿ ವೆಚ್ಚದಲ್ಲಿ ‘ಸ್ತ್ರೀ ಉನ್ನತಿ ನಿಧಿ’-.ಯಾವ ಭರವಸೆ ಈಡೇರಿದೆ?
  • ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಲ್ಯಾಪ್ ಟಾಪ್, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರೂ.1500 ಕೋಟಿ ವಿದ್ಯಾರ್ಥಿ ವೇತನ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ರೂ.3000 ಕೋಟಿ ವೆಚ್ಚದ ವಿದ್ಯಾರ್ಥಿ ವೇತನ- ಇದು ರಾಜ್ಯ ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು.
  • ಪ್ರತಿವರ್ಷ 15-20 ಲಕ್ಷ ಉದ್ಯೋಗ ಸೃಷ್ಟಿ, ಉದ್ಯಮಗಳಲ್ಲಿ ಉದ್ಯೋಗ ನೀಡುವ ಸಾಮರ್ಥ್ಯವನ್ನು ಶೇಕಡಾ 50ರಷ್ಟು ಹೆಚ್ಚಳ, ಬಿಪಿಎಲ್ ಕುಟುಂಬದ ಪದವೀದರರಿಗೆ ಮೂರು ಲಕ್ಷದ ವರೆಗೆ ಬಡ್ಡಿರಹಿತ ಸಾಲ, ರೂ. 500 ಕೋಟಿ ವೆಚ್ಚದಲ್ಲಿ “ಸಣ್ಣ ವ್ಯಾಪಾರಿಗಳ ಕಲ್ಯಾಣ ನಿಧಿ’-ಈ ಭರವಸೆಗಳು ನೆನಪಿದೆಯೇ?
  • ರೈತರು ಮಾತ್ರವಲ್ಲ ಮಹಿಳೆಯರು, ಯುವಕರು,ಕಾರ್ಮಿಕರು, ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು.. ಹೀಗೆ ಯಾವುದೇ ಜನವರ್ಗಕ್ಕೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ನೀವು ಈಡೇರಿಸಿಲ್ಲ.
  • ರಾಜ್ಯದಲ್ಲಿ ಕೊರೊನಾ ರೋಗದ ಹಾವಳಿಯಿಂದ ಜನ ಸಾಯುತ್ತಿದ್ದ, ಇಡೀ ರಾಜ್ಯದಲ್ಲಿ ಸೂತಕದ ವಾತಾವರಣ ಇದ್ದ, ಜನ ಬೀದಿಗೆ ಕಾಲಿಡಲು ಹೆದರುತ್ತಿದ್ದ ಕಾಲದಲ್ಲಿ ನೀವು ತರಾತುರಿಯಿಂದ ಪ್ರಜಾತಾಂತ್ರಿಕ ವಿಧಿ ವಿಧಾನಗಳನ್ನು ಗಾಳಿಗೆ ತೂರಿ, ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದದ್ದು ರೈತರ ಪಾಲಿಗೆ ಮರಣಶಾಸನಗಳಾದ ಐದು ಕಪ್ಪು ಕಾನೂನುಗಳು.
  • ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ, ಕೃಷಿಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆಗೆ ತಿದ್ದುಪಡಿ ಮತ್ತು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಈ ಐದು ಕಾನೂನುಗಳ ವಿರುದ್ಧ ರಾಜ್ಯದ ರೈತ ಸಮುದಾಯ ಬೀದಿಯಲ್ಲಿ ಹೋರಾಟ ನಡೆಸುತ್ತಿದೆ.
  • ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿಯೊಂದನ್ನು ಹೊರತುಪಡಿಸಿ ಉಳಿದ ಐದು ಕೃಷಿ ಸಂಬಂಧಿ ಕಾನೂನುಗಳ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖವೇ ಇಲ್ಲ. ಹೀಗಿದ್ದಾಗ ಇದನ್ನು ಜಾರಿಗೆ ತರಲು ನಿಮಗೆ ಮ್ಯಾನ್ ಡೇಟ್ ಎಲ್ಲಿದೆ?
  • ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ನಿಮ್ಮ ಸಂಘ ಪರಿವಾರದ ಅಜೆಂಡಾ. ಇದು ಗೋವುಗಳ ರಕ್ಷಣೆಗಾಗಿ ತಂದಿರುವ ಕಾಯ್ದೆ ಖಂಡಿತ ಅಲ್ಲ, ಇದು ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ ನಡೆಸುವ ನಿಮ್ಮ ಕಾರ್ಯಕರ್ತರ ರಕ್ಷಣೆಗೆ ತಂದಿರುವ ಕಾಯ್ದೆ ಅಷ್ಟೆ.
  • ಚುನಾವಣಾ ಕಾಲದ ಪ್ರಣಾಳಿಕೆ ಎನ್ನುವುದು ಜನತೆಗೆ ನೀಡುವ ವಚನ. ಗೆದ್ದ ಮೇಲೆ ಮೂಲೆಗೆಸೆದು ಮರೆತುಬಿಡುವ ಕಾಗದದ ಕಂತೆ ಅಲ್ಲ. ಗೆದ್ದು ಅಧಿಕಾರಕ್ಕೆ ಬಂದ ನಂತರ ಆ ಪ್ರಣಾಳಿಕೆಗೆ ಬದ್ಧತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಇದನ್ನು ಎದೆತಟ್ಟಿ ಹೇಳುವ ನೈತಿಕತೆ ನನಗಿದೆ.
  • ನಮ್ಮ ಪಕ್ಷ 165 ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸದ ಮರುಗಳಿಗೆಯಲ್ಲಿಯೇ ಐದು ಭರವಸೆಗಳನ್ನು ಜಾರಿಗೆ ತಂದಿದ್ದೆ. ಐದು ವರ್ಷಗಳ ಅವಧಿಯಲ್ಲಿ ಎಲ್ಲ 165 ಭರವಸೆಗಳನ್ನು ಮಾತ್ರವಲ್ಲ, ಹೆಚ್ಚುವರಿ 25 ಯೋಜನೆಗಳನ್ನು ಜಾರಿಗೆ ತಂದಿದ್ದೆ. ಇದು ನಿಮ್ಮ ಹಾಗೆ ಬಾಯಿ ಬಡಾಯಿ ಇಲ್ಲ.
  • ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ನಿಮ್ಮ ಪ್ರಧಾನಿ ಮೋದಿಯವರೂ ಸೇರಿದಂತೆ ಯಾರಾದರೂ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದವರು ಇದ್ದಾರಾ? ಆಗಲೂ ಹೇಳಿದ್ದೆ, ಈಗಲೂ ಹೆಮ್ಮೆಯಿಂದ ಹೇಳುತ್ತೇನೆ, ನಮ್ಮದು ನುಡಿದಂತೆ ನಡೆದ ಸರ್ಕಾರ.
  • ನಿಮ್ಮದು ನುಡಿದಂತೆ ಎಂದೂ ನಡೆಯದ ವಚನಭ್ರಷ್ಟ, ಜನದ್ರೋಹಿ, ಆತ್ಮವಂಚಕ ಸರ್ಕಾರ. ಈ ಆರೋಪವನ್ನು ನೀವು ನಿರಾಕರಿಸುವುದಾದರೆ ನಿಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟು ಸಾರ್ವಜನಿಕ ಚರ್ಚೆಯನ್ನು ಏರ್ಪಡಿಸಿ. ಈ ಸವಾಲನ್ನು ನೀವು ಸ್ವೀಕರಿಸುವುದಾದರೆ ದಿನವನ್ನು ನೀವೇ ನಿಗದಿಪಡಿಸಿ ನಾನು ಚರ್ಚೆಗೆ ಸಿದ್ದನಿದ್ದೇನೆ.against – government- Opposition leader -Siddaramaiah -criticized -governor's speech.
  • ಮೂರು ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಕೃಷಿ ಸಾಲ, ಶೇಕಡಾ ಮೂರರ ಬಡ್ಡಿ ದರದಲ್ಲಿ ಹತ್ತು ಲಕ್ಷ ರೂಪಾಯಿ ವರೆಗೆ ಕೃಷಿ ಸಾಲ ನೀಡಿದ್ದೆ. ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿದ್ದೆ. ಇದರಿಂದಾಗಿ ರಾಜ್ಯದ 22,27,506 ರೈತರ ಒಟ್ಟು ರೂ.8165 ಕೋಟಿ ಸಾಲ ಮನ್ನಾ ಆಗಿದೆ.
  • ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜಾರಿಗೆ ತಂದಿದ್ದಆನ್ ಲೈನ್ ಮಾರುಕಟ್ಟೆಯಿಂದಾಗಿ ರೈತರ ಆದಾಯ ಶೇಕಡಾ 38ರಷ್ಟು ಹೆಚ್ಚಿದೆ ಎಂದು ನಿಮ್ಮ ಕೇಂದ್ರ ನೀತಿ ಆಯೋಗವೇ ಶಹಬ್ಭಾಸ್ ಗಿರಿ ಕೊಟ್ಟಿತ್ತು. ಇಂತಹ ಒಂದೇ ಒಂದು ರೈತಪರ ಕಾರ್ಯಕ್ರಮವನ್ನು ಕಳೆದ ಹದಿನೆಂಟು ತಿಂಗಳಲ್ಲಿ ಜಾರಿಗೆ ತಂದಿದ್ದೀರಾ?.
  • ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕ್ಷೀರಧಾರೆ ಯೋಜನೆ ಮೂಲಕ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡಿ, ಹೈನುಗಾರಿಕೆಗೆ ಉತ್ತೇಜನ ನೀಡಿದ್ದ ನಮ್ಮ ಸರ್ಕಾರ. ಇಂದು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಯೋಜನೆಗಳೂ ಕಾರಣ.
  • ಅಕ್ರಮ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿಯವರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಅಕ್ರಮ ಆರೋಪದ ತನಿಖೆ ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆ ಎಂಬುದು ರಾಜ್ಯದ ಜನರ ಪ್ರಶ್ನೆ.

Key words: against – government- Opposition leader -Siddaramaiah -criticized -governor’s speech.