ಮಹಿಳಾ ಪಾಲಿಕೆ ಸದಸ್ಯರ ಜೊತೆ ಅನುಚಿತವಾಗಿ ನಡೆದುಕೊಂಡ ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ- ಮೈಸೂರು ಪಾಲಿಕೆ ಮುಂಭಾಗ ಪ್ರತಿಭಟನೆ…

ಮೈಸೂರು,ಜ,13,2020(www.justkannada.in): ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಂದ ಇಬ್ಬರು ಮಹಿಳಾ ಪಾಲಿಕೆ ಸದಸ್ಯರ ಮೇಲೆ ಅಸಭ್ಯ ವರ್ತನೆ, ದೌರ್ಜನ್ಯದ ಬಗ್ಗೆ ಹಾಗು ನಗರಪಾಲಿಕೆಯ ಕೇಂದ್ರ ಉಗ್ರಾಣದ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಮತ್ತು ಅಂಬೇಡ್ಕರ್ ಯೂತ್ ಮೂವ್ ಮೆಂಟ್ ಸಂಘಟನೆ ವತಿಯಿಂದ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರು ಹಾಗು ಸದಸ್ಯರು ಭಾಗಿಯಾಗಿದ್ದರು.

ಇತ್ತೀಚೆಗೆ ನಗರಪಾಲಿಕೆಯ ಉಗ್ರಾಣಕ್ಕೆ ಭೇಟಿ ನೀಡಿದ್ದ ನಗರಪಾಲಿಕೆ ಸದಸ್ಯರಾದ ಡಾ. ಅಶ್ವಿನಿ ಶರತ್ ಮತ್ತು ಪಲ್ಲವಿ ಬೇಗಂ ಜೊತೆ ಅಲ್ಲಿನ ಸಿಬ್ಬಂದಿಗಳು ಅನುಚಿತವಾಗಿ ನಡೆದುಕೊಂಡಿದ್ದಾರೆ. ಉಗ್ರಾಣದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆಳೆಯಲು ತೆರಳಿದ್ದ ಪಾಲಿಕೆ ಸದಸ್ಯರನ್ನು ಏಕವಚನದಲ್ಲಿ ನಿಂದಿಸಲಾಗಿದೆ. ಆದರೂ ನಗರಪಾಲಿಕೆ ಸಿಬ್ಬಂದಿಗಳು ಪಾಲಿಕೆ ಸದಸ್ಯರ ವಿರುದ್ಧ ಪ್ರತಿಭಟನೆ ನಡೆಸಿರುವುದು ಸರಿಯಾದ ಕ್ರಮವಲ್ಲ. ಇಬ್ಬರು ಮಹಿಳಾ ಪಾಲಿಕೆ ಸದಸ್ಯರ ಜೊತೆ ಅನುಚಿತವಾಗಿ ನಡೆದುಕೊಂಡಿರುವ ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Key words: action -against -staff – misbehavior – mysore- corporation-members-protest