ಸಿಎಂ ಪರಿಹಾರ ನಿಧಿಗೆ 50 ಕೋಟಿ ರೂ. ಹಸ್ತಾಂತರಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

• ಮಂಗಳವಾರ 85 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
• ಸಚಿವರ ಕಾರ್ಯವೈಖರಿ ಶ್ಲಾಘಿಸಿದ ಮುಖ್ಯಮಂತ್ರಿಗಳು
ಬೆಂಗಳೂರು, ಮೇ 05, 2020 (www.justkannada.in): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದ ಹಾಲಿ ಪರಿಸ್ಥಿತಿ ನಿರ್ವಹಣೆಗೋಸ್ಕರ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಮನವಿ ಮೇರೆಗೆ ಸಹಕಾರ ಇಲಾಖೆ ವತಿಯಿಂದ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 85 ಲಕ್ಷ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ಮಂಗಳವಾರ (05-05-2020) ಹಸ್ತಾಂತರಿಸಿದರು. ಈ ಮೂಲಕ ಸಹಕಾರ ಇಲಾಖೆ ವತಿಯಿಂದ ಒಟ್ಟಾರೆ 50.50 ಕೋಟಿ ರೂಪಾಯಿಯನ್ನು ನೀಡಿದಂತಾಗಿದೆ.
ರಾಜ್ಯದ ಎಲ್ಲ ಸಹಕಾರ ಇಲಾಖೆಗಳಿಂದ ದೇಣಿಗೆಯನ್ನು ಸ್ವೀಕರಿಸಿ ಬರೋಬ್ಬರಿ 50.50 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಂಗ್ರಹಿಸಿ ಕೊಡಲಾಗಿದೆ. ಈ ನಿಟ್ಟಿನಲ್ಲಿ ಕೊರೋನಾ ಮುಕ್ತ ರಾಜ್ಯಕ್ಕೆ ಕೊಡುಗೆ ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.
ಮುಖ್ಯಮಂತ್ರಿಗಳ ಪ್ರಶಂಸೆ
ಸಹಕಾರ ಇಲಾಖೆಯೊಂದರಿಂದಲೇ ದಾಖಲೆ ಪ್ರಮಾಣದ (50.50 ಕೋಟಿ ರೂಪಾಯಿ) ಹಣವನ್ನು ಸಂಗ್ರಹಿಸಿ ಕೊಟ್ಟಿರುವುದು ಸಂತಸದ ವಿಚಾರ. ಇದರಿಂದ ರಾಜ್ಯದ ಜನತೆಯ ಸೇವೆಗೆ ಅನುಕೂಲವಾದಂತಾಗಿದೆ ಎಂದು ಸಚಿವರ ಕಾರ್ಯವೈಖರಿ ಹಾಗೂ ಬದ್ಧತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಂಸಿಸಿದರು.
ಕಂದಾಯ ಸಚಿವರಾದ ಆರ್. ಅಶೋಕ್, ಸಹಕಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಸೇರಿ ಇತರ ಪ್ರಮುಖರು ಉಪಸ್ಥಿತರಿದ್ದರು.