ಸಾಹಿತ್ಯಲೋಕಕ್ಕೆ ಮಂಡ್ಯ ನೆಲದ ಕೊಡುಗೆ ಅಪಾರ-   ಡಿಸಿಎಂ ಅಶ್ವಥ್ ನಾರಾಯಣ್

 

ಮಂಡ್ಯ .ಫೆಬ್ರವರಿ,19,2021(www.justkannada.in):  ಕನ್ನಡ ನಾಡು ನುಡಿಗೆ, ಕನ್ನಡ ಸಾಹಿತ್ಯಕ್ಕೆ ಮಂಡ್ಯದ ಸಾಹಿತಿಗಳ, ಕಲಾವಿದರ ಕೊಡುಗೆ ಅಪಾರ ಎಂದು ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರು ಹೇಳಿದರು.

ಇಂದು  ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 18 ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ  ಮಾತನಾಡಿದ  ಡಿಸಿಎಂ ಅಶ್ವತ್ ನಾರಾಯಣ್,  ಉತ್ತಮವಾದ ಸಾಹಿತ್ಯದ ಮೂಲಕ ನಮ್ಮ ನಾಡಿನ ಹಿರಿಮೆ ಗರಿಮೆ ಹೆಚ್ಚಿಸುವುದು ಪ್ರಮುಖ ಗುರಿಯಾಗಿರುತ್ತದೆ. ನಾವು ನಮ್ಮತನವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ನೂತನ ಶಿಕ್ಷಣ ನೀತಿ ಈ ವರ್ಷದಿಂದ ಜಾರಿಗೊಳ್ಳಲಿದೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಶಿಕ್ಷಣವಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ ಸಂಘಟನೆಯಲ್ಲಿ ಮಂಡ್ಯ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ ಅವರ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲೆಯಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತಾಪಿ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿವೆ, ವ್ಯವಸಾಯ ಕಾರ್ಯಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಇಸ್ರೇಲ್ ಮಾದರಿಯಲ್ಲಿ ಕೃಷಿಯನ್ನು ಮಾಡೋಣ ಎಂದರು.

ರೈತರು ಡಿಜಿಟಲ್ ಫಾರ್ಮಿಂಗ್ ಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವೈಜ್ಞಾನಿಕವಾಗಿ ಕೃಷಿಯನ್ನು ಮಾಡಲು ಸಾಧ್ಯವಿದೆ. ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತರ ಬೆಳೆಗಳಿಗೆ ಉತ್ತಮವಾದ ಬೆಲೆ ದೊರಕಿ ಅವರ ಆದಾಯದಲ್ಲಿ ಹೆಚ್ಚಳವಾಗಬೇಕು ಮತ್ತು ಅವರನ್ನು ಆರ್ಥಿಕವಾಗಿ ಸಬಲರಾಗಲು ಬೇಕಾಗುವಂತಹ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ನಿರುದ್ಯೋಗ ಮಟ್ಟವನ್ನು ಕಡಿಮೆ ಮಾಡಲು ಅತಿ ಶೀಘ್ರದಲ್ಲೇ 1ಕೋಟಿ ಉದ್ಯೋಗವನ್ನು ಸೃಷ್ಟಿಸಲಾಗುವುದು ಎಂದರು.

ನಂತರ ಮಾತನಾಡಿದ  ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ  ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು, ಮಂಡ್ಯದ ಜನತೆ ಕನ್ನಡವನ್ನ ತಾಯಿಯಂತೆ ಪ್ರೀತಿಸುತ್ತಾರೆ ಎಂದರು.

ಮಂಡ್ಯ ಸಾಹಿತ್ಯ ,ಸಂಸ್ಕೃತಿ, ಸಾಂಸ್ಕೃತಿಕ ರಂಗ, ರಾಜಕೀಯ, ಕಲೆ, ಸಿನಿಮಾ ಎಲ್ಲಾ ರಂಗದಲ್ಲೂ ಹೆಸರುವಾಸಿ ಪಡೆದಿದೆ. ಕನ್ನಡ ಸಾಹಿತ್ಯಕ್ಕೆ ಮಂಡ್ಯದ ಕೆ.ಎಸ್ ನರಸಿಂಹಸ್ವಾಮಿರವರು, ನಾಗೇಗೌಡರು, ಬಿ.ಎಂ ಶ್ರೀಕಂಠಯ್ಯ ರವರು, ಸಿನಿಮಾದಲ್ಲಿ ಅಂಬರೀಶ್ ಅವರ ಸಾಧನೆ ನಾವು ಮರೆಯುವಂತಿಲ್ಲ. ಇನ್ನು ಅನೇಕ ಗಣ್ಯರ ಕೊಡುಗೆ ಅಪಾರ ಎಂದರು.

ಕರೋನಾ ಸಂದರ್ಭದಲ್ಲಿ ಯುವಕರು ಉದ್ಯೋಗ ಕಳೆದು ಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಪ್ರತಿ ಗ್ರಾಮದಲ್ಲಿ  ತರಬೇತಿಕೊಟ್ಟು ಉದ್ಯೋಗಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾ ಕನ್ನಡ ಸಮ್ಮೇಳಾನಾಧ್ಯಕ್ಷರಾದ ಮೀರಾ ಶಿವಲಿಂಗಯ್ಯರವರ ಸಾಹಿತ್ಯ, ಸೇವೆ ಎಲ್ಲವೂ ಮಂಡ್ಯ ಜನತೆಗೆ ಮಾದರಿ ಎಂದರು. ಎಲ್ಲಾದರು ಇರು,ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ನುಡಿಗಳನ್ನಾಡುತ್ತ  ಕನ್ನಡ ನಾಡು ನುಡಿಗೆ ಸೇವೆಮಾಡಲು ನಾನು ಸದಾಸಿದ್ಧ ಎಂದರು.Mandya – contributes- immensely - world of literature - DCM Ashwath Narayan.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಶ್ರೀನಿವಾಸ್ , ಅನ್ನದಾನಿ, ವಿಧಾನ ಪರಿಷತ್ ಶಾಸಕರಾದ ಕೆ.ಟಿ ಶ್ರೀಕಂಠೇಗೌಡ, ಮುಡಾ ಅಧ್ಯಕ್ಷರಾದ ಕೆ.ಶ್ರೀನಿವಾಸ್, ಸಾಹಿತಿ ದೊಡ್ಡರಂಗೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಿ.ಕೆ ರವಿಕುಮಾರ ಚಾಮಲಾಪುರ,   ಜಿಲ್ಲಾಧಿಕಾರಿಗಳಾದ ಎಸ್ ಅಶ್ವಥಿ, ಜಿ.ಪಂ ಸಿ,ಇ,ಒ ಜುಲ್ಪಿಕರ್, ಸಮ್ಮೇಳನಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಅಪರ ಜಿಲ್ಲಾಧಿಕಾರಿ ಶೈಲಜಾ,  ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Mandya – contributes- immensely – world of literature – DCM Ashwath Narayan.