ಶೀಘ್ರವೇ  ಸರ್ಕಾರದಿಂದ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಜಾರಿ – ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

kannada t-shirts

ಬೆಂಗಳೂರು,ಡಿ,17,2019(www.justkannada.in): ಶೀಘ್ರವೇ ನಮ್ಮ ಸರ್ಕಾರ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿಯನ್ನು ಜಾರಿಗೊಳಿಸಲಿದೆ. ಇದರಲ್ಲಿ ಹಂತ-2 ಮತ್ತು ಹಂತ-3 ರ ನಗರಗಳತ್ತ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸುವತ್ತ ಆದ್ಯ ಗಮನ ನೀಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

 

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಿದ್ದ “100 ದಿನಗಳ ಉತ್ತಮ ಆಡಳಿತ ಸಂಭ್ರಮದ ಸಮಾರಂಭ” ದಲ್ಲಿ  ಮಾತನಾಡಿದ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಈ 100 ದಿನಗಳ ಉತ್ತಮ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ ಈ ಸಮಾರಂಭದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ. ಈ ಹಿಂದಿನ 100 ದಿನಗಳು ಕರ್ನಾಟಕ ಸರ್ಕಾರಕ್ಕೆ ಸವಾಲಿನಿಂದ ಕೂಡಿದ, ದಿನಗಳಾಗಿದ್ದವು. ನೆರೆ ಸಂತ್ರಸ್ತರಿಗಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬೃಹತ್ ಸವಾಲನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು…

  1. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಈ 100 ದಿನಗಳ ಉತ್ತಮ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ ಈ ಸಮಾರಂಭದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ.
  2. ಈ ಹಿಂದಿನ 100 ದಿನಗಳು ಕರ್ನಾಟಕ ಸರ್ಕಾರಕ್ಕೆ ಸವಾಲಿನಿಂದ ಕೂಡಿದ, ದಿನಗಳಾಗಿದ್ದವು. ನೆರೆ ಸಂತ್ರಸ್ತರಿಗಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬೃಹತ್ ಸವಾಲನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ.
  3. ಪ್ರವಾಹ ಸಂತ್ರಸ್ತರ ಪುನರ್ ವಸತಿ ಹಾಗೂ ಈ ಪ್ರದೇಶದ ಮೂಲ ಸೌಕರ್ಯಗಳ ಪುನರ್ ನಿರ್ಮಾಣ ಸದ್ಯ ನಮ್ಮ ಸರ್ಕಾರದ ಆದ್ಯತೆಯಾಗಿದೆ.
  4. ಇದರೊಂದಿಗೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನವನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ.
  5. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರೂಪುಗೊಂಡಿರುವ ಹೊಸ ಪರಿಕಲ್ಪನೆಗಳು ರಾಜ್ಯದ ಆರ್ಥಿಕತೆಗೆ ಸದಾಕಾಲ ಪೂರಕವಾದ, ಪ್ರಮುಖ ಶಕ್ತಿಯಾಗಿದೆ.
  6. ಸೇವಾ ವಲಯದಿಂದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವತ್ತ ಸಾವಕಾಶವಾಗಿ ನಡೆದು ಕರ್ನಾಟಕವನ್ನು ಜಾಗತಿಕ ನಾವೀನ್ಯತಾ ನೆಲೆಯಾಗಿಸುವತ್ತ ನಮ್ಮ ಸರ್ಕಾರವು ಗಮನವನ್ನು ಕೇಂದ್ರೀಕರಿಸಿದೆ.
  7. ಐಟಿ / ಬಿಟಿ ಉದ್ಯಮ ವಲಯದ ಪ್ರಮುಖರೊಂದಿಗೆ ಸಮಾಲೋಚಿಸಿ ರಚಿಸಲಾದ ಕಾರ್ಯನೀತಿಗಳು ಕರ್ನಾಟಕವನ್ನು ‘ಭಾರತದ ಸಿಲಿಕಾನ್ ವ್ಯಾಲಿ’ ಮತ್ತು ‘ಭಾರತದ ನಾವೀನ್ಯತಾ ರಾಜಧಾನಿ’ಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
  8. ಕ್ರಿಯಾಶೀಲವಾಗಿರುವ ಸರ್ಕಾರ, ಉದ್ಯಮಸ್ನೇಹಿ ಕಾನೂನುಗಳು, ಅತ್ಯುನ್ನತ ಕೌಶಲ್ಯಗಳುಳ್ಳ ವೃತ್ತಿಪರ ಮಾನವ ಸಂಪನ್ಮೂಲ, ಹಾಗೂ ನಗರಗಳಲ್ಲಿರುವ ಕಾಸ್ಮೋಪಾಲಿಟನ್ ಜೀವನಶೈಲಿ ಮುಂತಾದ ಅನೇಕ ಪೂರಕ ಅಂಶಗಳಿಂದಾಗಿ ಕರ್ನಾಟಕವು ನವೋದ್ಯಮಗಳಿಗೆ, ಸಂಶೋಧಕರುಗಳಿಗೆ ಹಾಗೂ ಜಾಗತಿಕ ಕಾರ್ಪೊರೇಟ್ ದಿಗ್ಗಜರಿಗೆ ಸಹಜವಾಗಿ ನೆಚ್ಚಿನ ತಾಣವಾಗಿದೆ.
  9. ನೀತಿ ಆಯೋಗದಿಂದ ರಾಜ್ಯಗಳಿಗೆ ಇತ್ತೀಚೆಗೆ ನೀಡಲಾದ ಪ್ರಪ್ರಥಮ ನಾವೀನ್ಯತಾ ಶ್ರೇಯಾಂಕದಲ್ಲಿ ಕರ್ನಾಟಕ ರಾಜ್ಯಕ್ಕೆ ದೇಶದಲ್ಲೇ ಅಗ್ರ ಶ್ರೇಯಾಂಕ ಲಭಿಸಿದೆ.
  10. ಈ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಜಾಗತಿಕ ಆರ್ಥಿಕತೆಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ.
  11. ಕೌಶಲ್ಯ ವರ್ಧನೆ, ನವೋದ್ಯಮಗಳ ಪರಿಪೋಷಣೆ, ಜಾಗತಿಕ ಒಕ್ಕೂಟಗಳ ಏರ್ಪಡಿಸಿಕೊಳ್ಳುವಿಕೆ ಹಾಗೂ ನಾವೀನ್ಯತೆಯನ್ನು ಬೆಂಬಲಿಸಲು ಚೌಕಟ್ಟು ಕಲ್ಪಿಸುವುದಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ.
  12. ನಾವೀನ್ಯತೆಯುಳ್ಳ ವಾಣಿಜ್ಯೋದ್ಯಮಿಗಳಿಗೆ ಎಲಿವೇಟ್ ಮುಂತಾದ ಅನುದಾನ ಬೆಂಬಲ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಸರ್ಕಾರವು ಉತ್ತೇಜಿಸಿ ಪ್ರೋತ್ಸಾಹಿಸುತ್ತದೆ.
  13. ಕೈಗಾರಿಕೆ, ಶಿಕ್ಷಣ, ಉದ್ಯಮ ಹಾಗೂ ನವೋದ್ಯಮಗಳಿಗೆ ಸಹಭಾಗಿತ್ವಕ್ಕಾಗಿ ವೇದಿಕೆಯನ್ನು ಕಲ್ಪಿಸಲು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಉನ್ನತ ತಂತ್ರಜ್ಞಾನಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ.
  14. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಕ್ಷೇತ್ರದವರೊಂದಿಗೆ ಸದೃಢ ಪಾಲುದಾರಿಕೆಗಳನ್ನು ಪೋಷಿಸಲು ವಿಶ್ವದ ನಾವೀನ್ಯತಾ ನೆಲೆಗಳೊಂದಿಗೆ ಜಾಗತಿಕ ನಾವೀನ್ಯತಾ ಒಕ್ಕೂಟಗಳನ್ನು ರಚಿಸಿಕೊಂಡಿದ್ದೇವೆ.
  15. ರಾಜ್ಯದಲ್ಲಿ ತಂತ್ರಜ್ಞಾನ ವಲಯಗಳ ಹಾಗೂ ನಾವೀನ್ಯತೆಯ ಬೆಳವಣಿಗೆಗೆ ವೇಗ ಕಲ್ಪಿಸಲು ಕರ್ನಾಟಕ ಸರ್ಕಾರವು ಐಟಿ, ಬಿಟಿ, ಇ.ಎಸ್.ಡಿ.ಎಂ (Electronics System Design and Manufacturing) ಹಾಗೂ ಎವಿಜಿಸಿ (ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ವಲಯಗಳ ಕುರಿತು ನಿರ್ದಿಷ್ಟವಾದ ಕಾರ್ಯನೀತಿಗಳನ್ನು ಘೋಷಿಸುವಲ್ಲಿ ಮುಂಚೂಣಿ ರಾಜ್ಯವಾಗಿದೆ.
  16. ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಟೆಕ್ ಸಮ್ಮಿಟ್ 2019ರ ಯಶಸ್ವೀ ಆಯೋಜನೆಗಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ.
  17. ಸಮ್ಮೇಳನದಲ್ಲಿ 12,000ಕ್ಕೂ ಹೆಚ್ಚಿನ ಸಂದರ್ಶಕರು, 21 ದೇಶಗಳಿಂದ ಬಂದ 253 ಅಂತರರಾಷ್ಟ್ರೀಯ ಪ್ರತಿನಿಧಿಗಳು, 262 ಭಾಷಣಕಾರರು ಹಾಗೂ 248 ಪ್ರದರ್ಶನಕಾರರುಗಳು ಭಾಗವಹಿಸಿದ್ದರು.
  18. ಇದು ಕೇವಲ ಆರಂಭವಷ್ಟೆ, ಮುಂದಿನ ದಿನಗಳಲ್ಲಿ ಸರ್ಕಾರವು ಇನ್ನೂ ಹೆಚ್ಚಿನ ವೇಗದಲ್ಲಿ ಕಾರ್ಯೋನ್ಮುಖವಾಗಲು ಉದ್ದೇಶಿಸಿದೆ.
  19. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಂದು ಅಧಿನಿಯಮದಡಿ ತರಲು ನಾವೀನ್ಯತೆಗಾಗಿ ಕಾನೂನಿನ ಚೌಕಟ್ಟನ್ನು ತರಲು ಸರ್ಕಾರವು ಯೋಜಿಸಿದೆ.
  20. ನಿಯಂತ್ರಣಾತ್ಮಕ ತಪಾಸಣಾ ಪರಿಸರದಲ್ಲಿ ನಿಬಂಧನಾ ಅಗತ್ಯತೆಗಳನ್ನು ಸಡಿಲಗೊಳಿಸಿ, ನವನೂತನ ತಂತ್ರಜ್ಞಾನಗಳನ್ನು ಪರೀಕ್ಷೆಗೊಳಪಡಿಸಬಹುದಾದ ನಿಬಂಧನಾ ಅಂಗವನ್ನು ಸೃಜಿಸಲು ಕರಡು ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
  21. ನಾವೀನ್ಯತೆಯು ಜನರ ಸಬಲೀಕರಣಕ್ಕೆ ದಾರಿ ಮಾಡಿಕೊಡುವುದೆಂಬ ವಿಶ್ವಾಸ ನಮ್ಮದು.
  22. ಶೀಘ್ರವೇ ನಮ್ಮ ಸರ್ಕಾರ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿಯನ್ನು ಜಾರಿಗೊಳಿಸಲಿದೆ. ಇದರಲ್ಲಿ ಹಂತ-2 ಮತ್ತು ಹಂತ-3 ರ ನಗರಗಳತ್ತ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸುವತ್ತ ಆದ್ಯ ಗಮನ ನೀಡಲಾಗುವುದು.
  23. ನೂರು ದಿನಗಳ ಸಾಧನೆಯ ಈ ಸಮಾರಂಭವು ನಾವು ನಡೆದು ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಳ್ಳುವ ಜೊತೆಗೆ ನಮ್ಮ ಮುಂದಿನ ನಡೆಯ ಕುರಿತು ಸ್ಪಷ್ಟ ಪರಿಕಲ್ಪನೆ ಮೂಡಿಸಲು ವೇದಿಕೆಯಾಗಲಿ ಎಂದು ನಾನು ಆಶಿಸುತ್ತೇನೆ.
  24. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ದಿಗ್ಗಜರು ಈ ಸಮಾರಂಭದಲ್ಲಿ ಭಾಗವಹಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
  25. ಕರ್ನಾಟಕವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ತಮ್ಮೆಲ್ಲರ ಪಾಲುದಾರಿಕೆ ಹಾಗೂ ಬೆಂಬಲವನ್ನು ನಿರೀಕ್ಷಿಸುತ್ತೇನೆ.
  26. ಮುಂದಿನ ದಿನಗಳಲ್ಲಿ ಸರ್ಕಾರ ಮಾಹಿತಿ ತಂತ್ರಜ್ಞಾನ ವಲಯದ ಉನ್ನತಿಗೆ, ಅಗ್ರಶ್ರೇಣಿ ಕಾಪಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಸಿ. ಎನ್. ಅಶ್ವಥ್ ನಾರಾಯಣ, ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಡಾ. ಇ. ವಿ. ರಮಣ ರೆಡ್ಡಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಶಾಂತ್‍ಕುಮಾರ್ ಮಿಶ್ರಾ, ಆಕ್ಸೆಲ್ ಪಾರ್ಟ್ ನರ್ಸ್ ಸಂಸ್ಥೆಯ ಪಾಲುದಾರರು ಹಾಗೂ ಸ್ಟಾರ್ಟ್ ಅಪ್‍ಗಳ ದಾರ್ಶನಿಕ ಸಮೂಹದ ಅಧ್ಯಕ್ಷರಾದ ಪ್ರಶಾಂತ್ ಪ್ರಕಾಶ್  ಉಪಸ್ಥಿತರಿದ್ದರು.

Key words: government -will soon- adopt – new information technology-  CM BS Yeddyurappa.

website developers in mysore