ರಾಯಣ್ಣ ಪ್ರತಿಮೆಗೆ ಅಪಮಾನ: ಈ ಬಗ್ಗೆ ಧ್ವನಿ ಎತ್ತದ ಸಂಸದರನ್ನು ಹರಾಜು ಹಾಕಿ ಮಾನ ಕಳೆದಿದ್ದೇವೆ- ವಾಟಾಳ್ ನಾಗರಾಜ್.

ಮೈಸೂರು,ಡಿಸೆಂಬರ್,21,2021(www.justkannada.in):  ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ಎಂಇಎಸ್ ಪುಂಡರು ವಿರೂಪಗೊಳಿಸಿ ಅಪಮಾನ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿ ವಿಕೃತಿ ಮೆರೆದಿದ್ದು  ಇದನ್ನ ಖಂಡಿಸಿ ಈ ಬಗ್ಗೆ ಧ್ವನಿ ಎತ್ತದ ಸಂಸದರನ್ನು ಹರಾಜು ಹಾಕಿ ಮಾನ ಕಳೆದಿದ್ದೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಾಗಿದೆ. ಎಂಇಎಸ್ ಬ್ಯಾನ್ ಮಾಡುವುದಕ್ಕೆ ರಾಜ್ಯದ ಜನಪ್ರತಿನಿಧಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಶಾಸನಸಭೆಯಲ್ಲಿ ಕೇವಲ ಮನ್ನಣೆ ಇಲ್ಲದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಗಂಭೀರವಾದ ನಿರ್ಣಯ ಕೈಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಂದು ಸಂಜೆ ಒಳಗೆ ಎಂಇಎಸ್ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಭೆ ಕರೆದಿದ್ದೇನೆ. ಉಗ್ರ ಹೋರಾಟದ ತೀರ್ಮಾನ ಕೈಗೊಳ್ಳುತ್ತೇವೆ. ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳದಿದ್ರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತೆ. ನಾಳಿನ ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಕೇಂದ್ರ ಸರ್ಕಾರ ಉದ್ದವ್ ಠಾಕ್ರೆಯ ಸರ್ಕಾರವನ್ನು ವಜಾ ಮಾಡಬೇಕು. ಇಷ್ಟೆಲ್ಲಾ ಆಗಿದ್ರು ರಾಜ್ಯದ ಸಂಸದರು ನಮಗೇನು ಗೊತ್ತಿಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಇತ್ತ ಗಂಡಸರೂ ಅಲ್ಲ, ಹೆಂಗಸರೂ ಅಲ್ಲ ಅನ್ನೋ ರೀತಿ ವರ್ತನೆ ಮಾಡ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತದ ಸಂಸದರನ್ನು ಹರಾಜು ಹಾಕಿ ಮಾನ ಕಳೆದಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: Insult -statue –sangolli Rayanna-mysore- kannada fighter- Vatal Nagaraj.