ಮೋದಿಯವರು ಕೊಟ್ಟ ಭರವಸೆ  ಈಡೇರಿದೆಯಾ..? ಮೊದಲು ಇದಕ್ಕೆ ಉತ್ತರ ನೀಡಿ- ಬಿಜೆಪಿಗೆ ಸಚಿವ ಹೆಚ್.ಸಿ ಮಹದೇವಪ್ಪ ಸವಾಲು.

ಮೈಸೂರು,ಮೇ,30,2023(www.justkannada.in):  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ವಿಳಂಬ ಕುರಿತು ಟೀಕಿಸುತ್ತಿರುವ ಬಿಜೆಪಿಗೆ  ಸಚಿವ ಹೆಚ್.ಸಿ ಮಹದೇವಪ್ಪ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ  ಸಚಿವ ಹೆಚ್.ಸಿ ಮಹದೇವಪ್ಪ, 2013ರಲ್ಲಿ ಮೋದಿಯವರು ಕೊಟ್ಟ ಭರವಸೆ  ಈಡೇರಿದೆಯಾ..? ಮೊದಲು ಇದಕ್ಕೆ  ಬಿಜೆಪಿ ಉತ್ತರ ನೀಡಲು ಎಂದು ಟಾಂಗ್ ನೀಡಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಹೆಚ್.ಸಿ ಮಹದೇವಪ್ಪ ಪ್ರವಾಸ ಕೈಗೊಂಡಿದ್ದು,  ನಗರದ ಟೌನ್ ಹಾಲ್ ಮುಂಭಾಗವಿರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಬಳಿಕ  ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು. ಆ ವಿರೋಧಿ ಅಲೆ ಜೊತೆಗೆ ನಮ್ಮ ಗ್ಯಾರೆಂಟಿಯನ್ನ ನೋಡಿ ಜನ ಬಹುಮತ ಕೊಟ್ಟಿದ್ದಾರೆ. ಈಗ ಬಿಜೆಪಿ ತಮ್ಮ ಆಡಳಿತ ವಿರೋಧಿ ವೈಫಲ್ಯವನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಉಗುಳು ಅಚ್ಚುವ ಕೆಲಸವನ್ನ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಬಿಜೆಪಿ ರಾಜ್ಯದಲ್ಲಿ ತಿರಸ್ಕೃತವಾಗಿದೆ. ಈ ಚರ್ಚೆಯನ್ನ ಮರೆ ಮಾಚಲು ಗ್ಯಾರೆಂಟಿ ಕಾರ್ಡ್ ವಿಚಾರವನ್ನ ದೊಡ್ಡದು ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ಕುಳಿತೇ ಇಲ್ಲ.ಅಷ್ಟು ತರಾತುರಿಯಲ್ಲಿ ಗ್ಯಾರೆಂಟಿ ಅನುಷ್ಟಾನಕ್ಕೆ ಬಿಜೆಪಿಯವರು ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿಯ ಈ ತಂತ್ರ ಜನರಿಗೆ ಅರ್ಥ ವಾಗುತ್ತಿದೆ ಎಂದು ಕಿಡಿಕಾರಿದರು.

ಮೋದಿಯವರು 2013ರಲ್ಲಿ ಕೊಟ್ಟ ಭರವಸೆ  ಈಡೇರಿದೆಯಾ 15 ಲಕ್ಷ ಹಣ ಜನರ ಖಾತೆಗೆ ಬಂದಿದ್ಯಾ? ಮೊದಲು ಬಿಜೆಪಿ ಇದಕ್ಕೆ ಉತ್ತರ ಕೊಡಲಿ. ನಾವು ಗ್ಯಾರೆಂಟಿಯ ಬಗ್ಗೆ ಜನರಿಗೆ ಏನೂ ಹೇಳಿದ್ದೇವೂ ಅದನ್ನು ಮಾಡುತ್ತೇವೆ. ಸಿಎಂ ಈ ವಿಚಾರದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ‌ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಬಿಜೆಪಿ ಪಠ್ಯ ಪುಸ್ತಕ ವಿಚಾರದಲ್ಲಿ ಮಾಡಿರುವ ಯಡವಟ್ಟುಗಳನ್ನ ನಾವು ತಿದ್ದುತ್ತೇವೆ. ಇತಿಹಾಸ ಪುರುಷರನ್ನೇ ಇವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಈ ತಪ್ಪು ತಿದ್ದಬೇಕು ತಾನೇ. ನಾವು ಚುನಾವಣೆಗೆ ಮುನ್ನವೂ ಈ ವಿಚಾರವನ್ನ ಹೇಳಿದ್ದೇವೆ. ಈಗ ಅದನ್ನು ಮಾಡುತ್ತೇವೆ. ಅವರು ಬರೆದಿದ್ದೆ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ. ಸತ್ಯ ಅಲ್ಲದನ್ನ ತೆಗೆದು ಹಾಕುತ್ತೇವೆ ಎಂದು ಮಹದೇವಪ್ಪ ತಿಳಿಸಿದರು.

Key words: Minister -HC Mahadevappa- challenge –BJP-mysore