ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ. 24 ಗಂಟೆಯಲ್ಲೇ ಪರಿಹಾರಕ್ಕೆ ಸೂಚನೆ.

ಕೋಲಾರ,ನವೆಂಬರ್,22,2021(www.justkannada.in):  ರಾಜ್ಯದ ವಿವಿಧೆಡೆ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಬೆಳೆ ಹಾನಿ ಆಗಿದ್ದು, ಈ ಸಂಬಂಧ ಮುಂದಿನ 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಕೋಲಾರದ ಮಳೆಹಾನಿ ಪ್ರದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರದ ಚೌಡನಹಳ್ಳಿ, ನರಸಾಪುರ, ಕಲ್ವಮಂಜಲಿ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ರಾಗಿ, ನೆಲಗಡಲೆ, ತೊಗರಿ ಸೇರಿ ನಾಶವಾಗಿರುವ ಬೆಳಗಳನ್ನ ಪರಿಶೀಲಿಸಿದರು. ಸಚಿವ ಮುನಿರತ್ನ ಸಾಥ್ ನೀಡಿದರು.

ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಮನೆಯಿಂದಾಗಿ ಮನೆ ಸಂಪೂರ್ಣ ಹಾನಿಯಾಗಿದ್ದರೆ ರೂ.5 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದ್ದು ತಕ್ಷಣಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚನೆ ಕೊಡಲಾಗಿದೆ. ಮೂರು ಹಂತದಲ್ಲಿ ಪರಿಹಾರ ವಿತರಣೆ ಮಾಡಲಾಗುವುದು. ಕಳೆದ ಬಾರಿ ಮಾನದಂಡದಂತೆ ಪರಿಹಾರ ವಿತರಿಸುತ್ತೇವೆ ಎಂದು ಹೇಳಿದರು.

48 ಸಾವಿರ ಹೆಕ್ಟೇರ್ ಬೆಳೆ ಹಾನಿ ಆಗಿರುವ ಬಗ್ಗೆ ಮಾಹಿತಿ ಇದೆ. 7 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಮಾಹಿತಿ ಲಭ್ಯವಾಗಿದೆ. ಸರ್ವೆ ಮಾಡಿದ ಬಳಿಕ ಪೂರ್ಣ ಮಾಹಿತಿ ಸಿಗಲಿದೆ. ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಲಾಗಿದೆ. ಒತ್ತುವರಿ ತೆರವು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Key words: CM -basavaraj Bommai -visits – rain- damage- areas- inspection-kolar